ಚಕ್ರತೀರ್ಥ ಹೆಸರು ಶಿಫಾರಸು: 'ಡೀಸೆಲ್' ಕಥೆ ಹೇಳಿದ ಎಸ್. ಸುರೇಶ್ ಕುಮಾರ್!
ಬೆಂಗಳೂರು, ಮೇ 31: ಭಾರಿ ವಿವಾದಕ್ಕೆ ನಾಂದಿ ಹಾಡಿರುವ ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ರೋಹಿತ್ ಚಕ್ರತೀರ್ಥ ಹೆಸರು ಶಿಫಾರಸು ಮಾಡಿದ ಅರೋಪಕ್ಕೆ ಸಂಬಂಧಿಸದಿಂತೆ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಸುರೇಶ್ ಕುಮಾರ್ ಸ್ಪಷ್ಟ ಉತ್ತರ ನೀಡದೇ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.
ಕರ್ನಾಟಕ ಲೋಕ ಸೇವಾ ಅಯೋಗದ ಕಾರ್ಯ ವೈಖರಿ ಬಗ್ಗೆ ಪ್ರಶ್ನೆ "ಬಾಗಿಲು ತಟ್ಟುವ' ಅಭಿಯಾನಕ್ಕೆ ಚಾಲನೆ ನೀಡಿರುವ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. 'ರೋಹಿತ್ ಚಕ್ರತೀರ್ಥ ಅವರನ್ನು ಕರ್ನಾಟಕ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷರನ್ನಾಗಿಸುವ ಯೋಗ್ಯತೆ ಬಗ್ಗೆ ವಿವಾದ ಎದ್ದಿದೆ. ಅವರನ್ನು ಈ ಸಮಿತಿಗೆ ಶಿಫಾರಸು ಮಾಡಿದ್ದು ನೀವು ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಇದು ನಿಜವೇ ಎಂದು ಪತ್ರಕರ್ತನೊಬ್ಬ ನೇರ ಪ್ರಶ್ನೆಯನ್ನು ಕೇಳಿದರು.
ಈ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಸುರೇಶ್ ಕುಮಾರ್, "ಇಲ್ಲಾ ನೋಡಿ, ಆಸಮಯದಲ್ಲಿ ನನಗೆ ಚೆನ್ನಾಗಿ ನೆನಪಿದೆ. ಡಿಸೆಂಬರ್ 2020 ರಲ್ಲಿ. ಸ್ವಲ್ಪ ವಿವರವಾಗಿ ಹೇಳ್ತೀನಿ. ನಾನು ಗುಂಡ್ಲುಪೇಟೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮುಗಿಸಿಕೊಂಡು ವಾಪಸು ಬರುತ್ತಿದ್ದೆ. ನನ್ನ ಕಾರ್ದು ಡೀಸೆಲ್ ಆಗೋಯ್ತು ರಾತ್ರಿ ಸುಮಾರು 9.30 ರಲ್ಲಿ. ಖಾಸಗಿ ಕಾರಿನಲ್ಲಿ ಹೋಗಿದ್ದೆ. ಆಗ ನನ್ನ ಪೋನ್ಗೆ ಒಂದು ಕರೆ ಬಂತು. ನಾನು ತಗೊಂಡೆ. ಅದನ್ನು ಮಾಡಿದ್ದು. ಮಂತ್ರಾಲಯದ ಪೂಜ್ಯ ಸ್ವಾಮಿಗಳು. ಆರನೇ ತರಗತಿಯನ್ನು ವಿಶೇಷವಾಗಿ ಉಲ್ಲೇಖಮಾಡಿ, ಈ ರೀತಿಯ ವಯಸ್ಸಿನ ಮಕ್ಕಳಿಗೆ ಈ ರೀತಿ ಕೊಟ್ಟರೆ ಏನಾಗುತ್ತೆ? ಏನು ಮಾಡೋಕೆ ಹೊರಟಿದ್ದೀರಾ ನೀವು ? ಎಂದು ಕೇಳಿದರು. ಅದಕ್ಕೆ ನಾನು ಪರಿಶೀಲಿಸ್ತೀನಿ ಅಂತ ಹೇಳಿದೆ.
ಅದಾದ ಮೇಲೆ ಅದೂ...ಅದೂ ಅದೂ ಮತ್ತೆ ಮತ್ತೆ ಬಂದಾಗ, ನಾನು ಚಕ್ರತೀರ್ಥ ಅವರಿಗೆ, ಅವರೂ ನನ್ನ ಮೇಲೆ ಆರ್ಟಿಕಲ್ ಬರೆದಿದ್ದರು. ಆಗ ಚಕ್ರತೀರ್ಥ ಅವರನ್ನು ಕರೆದು, ಏನೇನು ತಪ್ಪಿದೆ ಮೊದಲು ಒಂದು ಲಿಸ್ಟ್ ಮಾಡಿ ಕೊಡಿ ಎಂದು ಹೇಳಿದೆ. ನೀವು ಲಿಸ್ಟ ಮಾಡಿ ಕೊಟ್ಟಿರುವುದನ್ನು ಪರಿಶೀಲಿಸಿ ಅಳವಡಿಸೋಕೆ ಅದರ ಮೇಲೆ ಒಂದು ಸಮಿತಿ ಇರುತ್ತೆ. ಅದು ನಿರ್ಣಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದೆ. ಆದರೆ ಅವರಿಗೆ ಆದೇಶ ಅಂತ ಬಂದಿದ್ದು ನಾನು ಸಚಿವ ಸ್ಥಾನದಿಂದ ಇಳಿದ ಮೇಲೆ. ಆನಂತರ ಸರ್ಕಾರದಿಂದ ಅಧಿಕೃತ ಆದೇಶ ಬಂತು. ಆಗ ಅವರು ಮೇಲಿಂದ ಮೇಲೆ ತಪ್ಪುಗಳನ್ನು ನನ್ನ ಗಮನಕ್ಕೆ ತಂದಾಗ, ನೀವು ಅದನ್ನು ಲಿಸ್ಟ್ ಮಾಡಿಕೊಳ್ಳಿ ಎಂದು ಹೇಳಿದ್ದೆ ಎಂದು ಸುರೇಶ್ ಕುಮಾರ್ ಕಾರಿಗೆ ಡೀಸೆಲ್ ಖಾಲಿಯಾದ ಕಥೆ ಹೇಳಿದರು. ಅವರು ಸ್ಪಷ್ಟವಾಗಿ ನಾನು ಶಿಫಾರಸು ಮಾಡಿದ್ದೀನಿ, ಅಥವಾ ಇಲ್ಲ ಎಂದು ಸ್ಪಷ್ಟನೆ ನೀಡಲಿಲ್ಲ.
ನೀವು ಚಕ್ರತೀರ್ಥ ಅವರ ಹೆಸರನ್ನು ಶಿಫಾರಸು ಮಾಡಿದ್ದೀರೋ ಇಲ್ಲವೋ ? ಎಂದು ಪತ್ರಕರ್ತ ಪ್ರಶ್ನೆ ಮಾಡಿದಾಗ, ಅಲ್ಲಾ ಆ ಜವಾಬ್ದಾರಿ ಕೊಟ್ಟಿದ್ದೆ. ಅಧಿಕೃತವಾಗಿ ಆದೇಶ ಬಂದಿದ್ದು ಆಮೇಲೆ ( ಸುರೇಶ್ ಕುಮಾರ್ ಸಚಿವ ಸ್ಥಾನ ಕಳೆದುಕೊಂಡ ಮೇಲೆ) , ನಾನು ಜವಾಬ್ದಾರಿ ಕೊಟ್ಟಿದ್ದು, ಆ ಕಮಿಟಿ ಅಂತ ಏನು ಮಾಡಿದ್ರಲ್ಲಾ, ನೀವು ಇದನ್ನು ಮಾಡಿಕೊಡಿ ಅಂತಷ್ಟೇ ಹೇಳಿದ್ದೆ. ( ಪಠ್ಯ ಪುಸ್ತಕದಲ್ಲಿ ಆಗಿರುವ ಲೋಪ) ತಪ್ಪುಗಳಿದ್ದರೆ, ನಮ್ಮ ಗಮನಕ್ಕೆ ತನ್ನಿ ಎಂದಿದ್ದೆ ಎಂದಷ್ಟೇ ಹೇಳಿ ನೇರ ಉತ್ತರ ಹೇಳದೇ ಜಾರಿಕೊಂಡರು.
ಇನ್ನು ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಿಂದ ವಜಾ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಶಿಕ್ಷಣ ಸಚಿವರು, ರೋಹಿತ್ ಚಕ್ರತೀರ್ಥ ಅವರ ಸಮಿತಿ ಬಗ್ಗೆ ಮುಖ್ಯಮಂತ್ರಿಗಳು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಶಿಕ್ಷಣ ಸಚಿವರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಅವರು ತೆಗೆದುಕೊಳ್ಳುತ್ತಾರೆ ಎಂದೇಳಿ ಸುರೇಶ್ ಕುಮಾರ್ ಹೊರ ನಡೆದರು.