ಸಂಕಲ್ಪ ಯಾತ್ರೆಗೆ ನಿರೀಕ್ಷೆಗೆ ಮೀರಿ ಬೆಂಬಲ: ನಳಿನ್ಕುಮಾರ್ ಕಟೀಲ್
ಬೆಂಗಳೂರು, ಅ.28: 'ಬಿಜೆಪಿ ಸಂಕಲ್ಪ ಯಾತ್ರೆಗೆ ನಿರೀಕ್ಷೆಗೆ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ಕಾರ್ಯಕರ್ತರು ಮತ್ತು ಸಾರ್ವಜನಿಕರು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಶುಕ್ರವಾರ ಜನಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ 15 ಸಾವಿರ ಗುರಿ ಇದ್ದರೆ, 25 ರಿಂದ 30 ಸಾವಿರ ಜನರು ಭಾಗವಹಿಸುತ್ತಿದ್ದಾರೆ. ನಮ್ಮ ಸಭೆಯಲ್ಲಿ 5 ಸಾವಿರ ಜನರ ನಿರೀಕ್ಷೆ ಇದ್ದರೆ 8 ರಿಂದ 10 ಸಾವಿರ ಜನರು ಪಾಲ್ಗೊಳ್ಳುತ್ತಿದ್ದಾರೆ" ಎಂದು ಮಾಹಿತಿ ನೀಡಿದರು.
ಕೋಟಿ ಕಂಠ ಗಾಯನ: ಅಮೃತ ಗಳಿಗೆಗೆ ನಾಡು ಸಾಕ್ಷಿ, ಹೊಸ ಸಂಕಲ್ಪಕ್ಕೆ ಸ್ಪೂರ್ತಿ: ಸಿಎಂ ಬೊಮ್ಮಾಯಿ ಬಣ್ಣನೆ
"ಚುನಾವಣೆ ಪೂರ್ವತಯಾರಿ ದೃಷ್ಟಿಯಿಂದ ಸಂಕಲ್ಪ ಯಾತ್ರೆ ನಡೆಸುತ್ತಿದ್ದೇವೆ. ನಾವು ಸಂಘಟನಾತ್ಮಕ ಪ್ರವಾಸ ಮಾಡುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಜನರಿಗೆ ಸರ್ಕಾರದ ಅಭಿವೃದ್ಧಿ ಕಾರ್ಯದ ಕುರಿತು ತಿಳಿಸುತ್ತಿದ್ದಾರೆ" ಎಂದು ವಿವರ ನೀಡಿದರು.
"ಕಾಂಗ್ರೆಸ್ ಪಕ್ಷದ ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯರ ತಂಡಕ್ಕೆ ತಮ್ಮ ನಾಯಕರೇ ಸಿಎಂ ಆಗಬೇಕೆಂಬ ಆಸೆ ಇದೆ. ಇದೀಗ ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ಬಳಿಕ ಅವರ ಭಯ ಇಬ್ಬರಿಗೂ ಇದೆ. ಇದರಿಂದ ಕಾಂಗ್ರೆಸ್ ಪಕ್ಷದ ಮುಖಂಡರು ವಿಚಲಿತ ಸ್ಥಿತಿಯಲ್ಲಿದ್ದಾರೆ" ಎಂದು ಹೇಳಿದರು.
"ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ನಮ್ಮಲ್ಲಿ ಭಿನ್ನಮತ ಇಲ್ಲ, ವ್ಯತ್ಯಾಸ, ಚರ್ಚೆಗಳು, ಅಭಿಪ್ರಾಯ ಭೇದ ಇದೆಯಷ್ಟೇ. ಇದೆಲ್ಲವನ್ನೂ ಸರಿದೂಗಿಸಿಕೊಂಡು ಪಕ್ಷ ಮುನ್ನಡೆಸುವ ಶಕ್ತಿ ನಮ್ಮಲ್ಲಿದೆ" ಎಂದು ಉತ್ತರಿಸಿದರು.
ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ನಳಿನ್ ಕುಮಾರ್ ಕಟೀಲ್, ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಜಿಲ್ಲಾಧ್ಯಕ್ಷ ಸುಂದರ್, ಮಾಜಿ ಶಾಸಕರಾದ ನಂಜುಂಡಸ್ವಾಮಿ ಮತ್ತು ಶ್ರೀಮತಿ ಪರಿಮಳ ನಾಗಪ್ಪ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.