ತಮಿಳುನಾಡು ವಿರುದ್ಧ ಕೇಂದ್ರಕ್ಕೆ ರಾಜ್ಯದ ಆಕ್ಷೇಪಣಾ ಅರ್ಜಿ: ಡಿಸಿಎಂ
ಬೆಂಗಳೂರು, ಫೆ. 22: ರಾಜ್ಯದ ನೀರಾವರಿ ಹಿತಾಸಕ್ತಿಗಳ ವಿಚಾರಗಳಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ. ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ತಮಿಳುನಾಡು ಸರಕಾರ ರೂಪಿಸಿರುವ ಯೋಜನೆಯ ವಿರುದ್ಧ ಕೇಂದ್ರ ಸರಕಾರಕ್ಕೆ ದೂರು ಸಲ್ಲಿಸಲಾಗುವುದು ಎಂದಿದ್ದಾರೆ.
ಸೋಮವಾರ ಮಂಡ್ಯದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾವೇರಿ ನದಿಯನ್ನು ವೈಗೈ, ವಾಲ್ಲಾರು ಮತ್ತು ಗುಂಡಾರು ನದಿಗಳಿಗೆ ಜೋಡಿಸುವ ತಮಿಳುನಾಡು ಪ್ರಸ್ತಾವನೆಗೆ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸುವುದಾಗಿಯೂ ಅವರು ತಿಳಿಸಿದ್ದಾರೆ. ತಮಿಳುನಾಡು ಯೋಜನೆಯನ್ನು ತಡೆಯಲು ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಸರಕಾರ ಮಾಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ತೆರಳಿದ್ದು, ಇವತ್ತು ಕೇಂದ್ರದ ಜಲಸಂಪನ್ಮೂಲ ಸಚಿವರ ಜತೆ ಮಾತುಕತೆ ನಡೆಸಲಿದ್ದಾರೆ. ನಮ್ಮ ರಾಜ್ಯದ ನೀರಾವರಿ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅಗತ್ಯವಾದ ಎಲ್ಲ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ ಎಂದರು.
ಮೇಕೆದಾಟು ಯೋಜನೆ ನಿಲ್ಲದು
ತಮಿಳುನಾಡು ಅಪಸ್ವರ ಎತ್ತಿದ್ದರೂ ಮೇಕೆದಾಟು ಯೋಜನೆ ನಿಲ್ಲುವುದಿಲ್ಲ. ಅದು ಕಾರ್ಯಗತವಾಗುವುದು ಶತಃಸಿದ್ಧ. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ. ಕುಡಿಯುವ ನೀರಿಗಾಗಿ ಕಾರ್ಯಗತ ಮಾಡುತ್ತಿರುವ ಈ ಯೋಜನೆಯನ್ನು ನಮ್ಮ ಸರಕಾರದ ಅವಧಿಯಲ್ಲೇ ಮಾಡಲಾಗುವುದು. ಇದಕ್ಕೆ ನಾಡಿನ ಜನರ ಬೆಂಬಲವಿದೆ ಎಂದು ಹೇಳಿದರು.
ಹಾಸನದಲ್ಲಿ ವಿಮಾನ ನಿಲ್ದಾಣ ಶೀಘ್ರ
ನನೆಗುದಿಗೆ ಬಿದ್ದಿರುವ ಹಾಸನ ಜಿಲ್ಲೆಯ ವಿಮಾನ ನಿಲ್ದಾಣ ಯೋಜನೆಯನ್ನು ಆದಷ್ಟು ಬೇಗ ಮುಗಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಬಗ್ಗೆ ಸರಕಾರದ ಗಮನ ಸೆಳೆದಿದ್ದಾರೆ. ಇದರ ಜತೆಗೆ, ರಾಜ್ಯದಲ್ಲಿ ಇನ್ನೂ ಯಾವ ಯಾವ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಅಗತ್ಯವಿದೆಯೋ ಆ ಎಲ್ಲ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಬೀದರ್, ಕಾರವಾರ, ಶಿವಮೊಗ್ಗ, ಕಲ್ಬುರ್ಗಿಗಳಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಡಾ. ಅಶ್ವಥ್ ನಾರಾಯಣ ಹೇಳಿದರು.
ಇನ್ನು ಅಂತಿಮವಾಗಿಲ್ಲ
ಇದೇ ಸಂದರ್ಭದಲ್ಲಿ ಹಾಸನ ಹಾಸನ ವಿಮಾನ ನಿಲ್ದಾಣಕ್ಕೆ ಯಾವ ಹೆಸರು ಇಡಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ. ಯೋಜನೆ ಮುಗಿದ ಮೇಲೆ ಜನರ ಅಪೇಕ್ಷೆ ಮೇರೆಗೆ ಹೆಸರಿಡುವುದು ಆಗುತ್ತದೆ. ಯಾವುದೇ ದ್ವಂದ್ವಕ್ಕೆ ಎಡೆಮಾಡಿಕೊಡುವುದಿಲ್ಲ. ಹೀಗಾಗಿ ಯಾವುದೇ ಅನಗತ್ಯ ಗೊಂದಲ ಬೇಡ ಎಂದು ಡಿಸಿಎಂ ಅಶ್ವಥ್ ನಾರಾಯಣ ಅವರು ಹೇಳಿಕೆಯಲ್ಲಿ ತಿಳಿಸಿದರು.
Recommended Video
ಮೀಸಲು ಪ್ರಚೋದನೆ ಬೇಡ
ಮೀಸಲಾತಿ ಹೋರಾಟ ಅತ್ಯಂತ ಸೂಕ್ಷ್ಮ ವಿಚಾರ. ಈ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರಾಗಲಿ ಅಥವಾ ಇನ್ನಾರೇ ಪ್ರತಿಪಕ್ಷ ನಾಯಕರಾಗಲಿ ತಮ್ಮ ಹೇಳಿಕೆಗಳನ್ನು ನೀಡಬೇಡಿ ಎಂದು ಹೇಳಲಾಗುವುದಿಲ್ಲ. ಆದರೆ, ಯಾವ ರೀತಿಯ ಹೇಳಿಕೆ ಕೊಡಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟಿದ್ದು. ಸರಕಾರ ಎಲ್ಲರ ಬೇಡಿಕೆಗಳನ್ನು ಗಮನಿಸುತ್ತಿದೆ. ಅಂತಿಮವಾಗಿ ಎಲ್ಲವನ್ನೂ ಪರಿಶೀಲನೆ ಮಾಡಿ ಸರಕಾರ ನ್ಯಾಯ ಸಮ್ಮತ ತೀರ್ಮಾನ ಕೈಗೊಳ್ಳುತ್ತದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು