ಇತ್ಯರ್ಥಗೊಂಡ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆ: ಮೀಸೆ ತಿರುವಿದವರಾರು?
ಕಾಂಗ್ರೆಸ್ಸಿನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆಯನ್ನು ಒಂದು ಹಂತಕ್ಕೆ ಮೀರಿಸಿದ್ದು ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಹುದ್ದೆಯ ವಿಚಾರದಲ್ಲಿನ ಗೊಂದಲ.
ಅದಕ್ಕೆ, ಅಂತೂ ಇಂತೂ ತೆರೆ ಬಿದ್ದಿದೆ. ವೋಟಿಂಗ್ ಪ್ರಕಾರ ಗೆದ್ದಿದ್ದ ಮೊಹಮ್ಮದ್ ನಲಪಾಡ್ ಅವರಿಗೆ ಕೊನೆಗೂ ನ್ಯಾಯ ಸಿಕ್ಕಿದೆ ಎಂದು ಅವರ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.
ಈಗಿನ ಯುವ ಘಟಕದ ಅಧ್ಯಕ್ಷರಾಗಿರುವ ರಕ್ಷಾ ರಾಮಯ್ಯ ಅವರು ಮುಂದಿನ ವರ್ಷದ ಜನವರಿ ಅಂತ್ಯದ ವರೆಗೆ ಅಧ್ಯಕ್ಷರಾದರೆ, ಮುಂದಿನ ಅವಧಿಗೆ ನಲಪಾಡ್ ಅಧ್ಯಕ್ಷ ಎಂದು ಅಧಿಕೃತವಾಗಿ ಘೋಷಣೆಯಾಗಿದೆ.
ಯುವ ಘಟಕದ ಅಧ್ಯಕ್ಷ ವಿಚಾರ ಎರಡು ಬಣಗಳಿಗೆ ಪ್ರತಿಷ್ಠೆಯಾಗಿತ್ತು ಎನ್ನುವುದು ಗೌಪ್ಯವಾಗಿಯೇನೂ ಉಳಿದಿರಲಿಲ್ಲ. ಹಾಗಾಗಿ, ಈ ವಿಚಾರದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿತ್ತು.

ಹೈಕಮಾಂಡ್ ಮತ್ತು ಉಸ್ತುವಾರಿ ರಣದೀಪ್ ಸುರ್ಜೇವಾಲ
ರಾಜ್ಯ ಕಾಂಗ್ರೆಸ್ಸಿನ ಎಲ್ಲಾ ಆಂತರಿಕೆ ಬೆಳವಣಿಗೆಗಳನ್ನು ಗಮನಿಸುತ್ತಿರುವ ಹೈಕಮಾಂಡ್ ಮತ್ತು ಉಸ್ತುವಾರಿ ರಣದೀಪ್ ಸುರ್ಜೇವಾಲ, ಅಳೆದು ತೂಗಿ ರಕ್ಷಾ ರಾಮಯ್ಯ ಮತ್ತು ನಲಪಾಡ್ ಗೆ ಅಧಿಕಾರವನ್ನು ಹಂಚಿದ್ದಾರೆ. ಆ ಮೂಲಕ, ಯಾವ ಬಣವೂ ಮೀಸೆ ತಿರುವದಂತೆ ಎಚ್ಚರವನ್ನು ಹೈಕಮಾಂಡ್ ವಹಿಸಿದೆ.

ನಳಪಾಡ್ ಮತ್ತು ಅವರ ತಂದೆ ಹ್ಯಾರೀಸ್ ದೆಹಲಿ ಮಟ್ಟದಲ್ಲಿ ನಡೆಸಿದ ಭಾರೀ ಮಟ್ಟದ ಪ್ರಯತ್ನ
ನಲಪಾಡ್ ಅವರು ಯುವ ಘಟಕದ ಚುನಾವಣೆಯಲ್ಲಿ ಹೆಚ್ಚಿನ ಮತವನ್ನು ಗಳಿಸಿದ್ದರೂ, ಕ್ರಿಮಿನಲ್ ಕೇಸ್ ಅವರ ಮೇಲೆ ಇರುವುದರಿಂದ ಅವರ ಆಯ್ಕೆಯನ್ನು ತಡೆಯಲಾಗಿತ್ತು. ಜೊತೆಗೆ, ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷ ಎಂದು ಘೋಷಿಸಲಾಗಿತ್ತು. ಆದರೆ, ನಳಪಾಡ್ ಮತ್ತು ಅವರ ತಂದೆ ಹ್ಯಾರೀಸ್ ದೆಹಲಿ ಮಟ್ಟದಲ್ಲಿ ನಡೆಸಿದ ಭಾರೀ ಪ್ರಯತ್ನ ಕೈಗೂಡಿದೆ.

ರಕ್ಷಾ ರಾಮಯ್ಯ ಪರವಾಗಿ ಸಿದ್ದರಾಮಯ್ಯ, ನಳಪಾಡ್ ಪರ ಡಿಕೆಶಿ
ರಕ್ಷಾ ರಾಮಯ್ಯ ಪರವಾಗಿ ಸಿದ್ದರಾಮಯ್ಯ ಮತ್ತು ನಲಪಾಡ್ ಪರ ಡಿ.ಕೆ.ಶಿವಕುಮಾರ್ ಇದ್ದದ್ದು ಗೊತ್ತಿರುವಂತಹ ವಿಚಾರ. ಈಗಿನ ಸಂಧಾನ ಸೂತ್ರ ಏನು ನಡೆದಿದೆಯೋ ಅದಕ್ಕೆ ರಕ್ಷಾ ರಾಮಯ್ಯ ಮತ್ತು ಸಿದ್ದರಾಮಯ್ಯ ವಿರೋಧ ವ್ಯಕ್ತ ಪಡಿಸಿದ್ದರು. ರಾಹುಲ್ ಗಾಂಧಿ ಕಚೇರಿಯನ್ನೂ ಸಿದ್ದರಾಮಯ್ಯ ಸಂಪರ್ಕಿಸಿದ್ದರು ಎಂದು ವರದಿಯಾಗಿತ್ತು.

ಭಾರತೀಯ ಯುವ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಅಧಿಕೃತ ಹೇಳಿಕೆ
ಆದರೆ, ನಲಪಾಡ್ ಪರ ಡಿಕೆಶಿ ಸಾಫ್ಟ್ ಕಾರ್ನರ್ ಹೊಂದಿದ್ದರು. ಫಿಫ್ಟಿಫಿಫ್ಟಿ ಸಂಧಾನದ ಸೂತ್ರಧಾರ ಡಿಕೆಶಿಯಾಗಿದ್ದರು. ಕೊನೆಗೂ, ಭಾರತೀಯ ಯುವ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಅವರು ಈ ಸಂಬಂಧ ಅಧಿಕೃತ ಹೇಳಿಕೆಯನ್ನು ನೀಡಿ, ಪ್ರಕಟಣೆ ಹೊರಡಿಸಿದ್ದಾರೆ. ಆ ಮೂಲಕ, ಕಾಂಗ್ರೆಸ್ ಎಚ್ಚರದ ಹೆಜ್ಜೆಯನ್ನು ಇಟ್ಟಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.











Click it and Unblock the Notifications