SSLC Results: ತೃತೀಯ ಭಾಷೆ ಹಿಂದಿಗೆ ಗ್ರೇಡ್ ಬೇಡ, ಅಂಕ ನೀಡಿ: ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ 2025-26 ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿಗೆ ಅಂಕಗಳ ಬದಲಾಗಿ ಗ್ರೇಡ್ ನೀಡಲು ನಿರ್ಧರಿಸಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ನಲ್ಲಿ ಹಿನ್ನಡೆ ಆಗಿದೆ. ಸರ್ಕಾರದ ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ತೃತೀಯ ಭಾಷೆ ಹಿಂದಿಗೆ ಅಂಕಗಳನ್ನೇ ಪರಿಗಣಿಸುವಂತೆ ಮಂಗಳವಾರ ಆದೇಶ ನೀಡಿದೆ.
ಹತ್ತನೇ ತರಗತಿಯ ಹಿಂದಿ ಪರೀಕ್ಷೆಗಳಲ್ಲಿ ಅಂಕ ಪರಿಗಣಿಸುವಂತೆ ನೀಡಿದ್ದ ಕೋರ್ಟ್ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ಇಂದು ಮಂಗಳವಾರ (ಏಪ್ರಿಲ್ 21) ನ್ಯಾಯಾಧೀಶರಾದ ಇ.ಎಸ್.ಇಂದಿರೇಶ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ಸರ್ಕಾರದ ನಿರ್ಧಾರವನ್ನು ಒಪ್ಪದ ಹೈಕೋರ್ಟ್, ಅರ್ಜಿ ವಜಾಗೊಳಿಸಿತು. ಹಿಂದಿಗೆ ಅಂಕಗಳನ್ನು ಪರಿಗಣಿಸುವಂತೆ ಆದೇಶಿಸಿತು.

ರಾಜ್ಯ ಸರ್ಕಾರವು ಎಸ್ಎಸ್ಎಲ್ಸಿ ಪರೀಕ್ಷೆಗೆ ಅಧಿಸೂಚನೆ ಬಿಡುಗಡೆ ವೇಳೆ ಈ ಮಾಹಿತಿಯನ್ನು ಮಕ್ಕಳಿಗೆ ನೀಡಿರಲಿಲ್ಲ. ಪರೀಕ್ಷೆಯನ್ನು ಹಾಗೆಯೇ ನಡೆಸಲಾಗಿತ್ತು. ಇದೀಗ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ಪದ್ಧತಿ ಅನುಸರಿಸುವುದಾಗಿ ಹೇಳಿದ್ದೀರಿ. ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಬೇಕೆಂದು ನಿರ್ಧರಿಸಿದ್ದರೆ ಪರೀಕ್ಷೆ ನಡೆಸುವುದೇಕೆ ಎಂದು ನ್ಯಾಯಪೀಠ ಸರ್ಕಾರವನ್ನು ಪ್ರಶ್ನಿಸಿತು.
ಇದನ್ನೂ ಓದಿ: SSLC Results 2026: 10ನೇ ತರಗತಿ ಫಲಿತಾಂಶ ಏ 24ರಂದು ಬಿಡುಗಡೆ ಅನುಮಾನ
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಶಶಿಕಿರಣ್ ಶೆಟ್ಟಿ, ಕಳೆದ ವರ್ಷ ಹಿಂದಿ ಭಾಷೆಯಲ್ಲಿ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಹೀಗಾಗಿ ಗ್ರೇಡ್ ಪದ್ಧತಿ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿತ್ತು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, 'ಎಲ್ಲರನ್ನೂ ಪಾಸ್ ಮಾಡುವುದಾದರೆ ಪರೀಕ್ಷೆ ಏಕೆ' ಎಂದು ಪ್ರಶ್ನಿಸಿದರು. ಸರ್ಕಾರದ ದಿಢೀರ್ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಜತೆ ಮಧು ಬಂಗಾರಪ್ಪ ಚರ್ಚೆ
ಸರ್ಕಾರದ ಮೇಲ್ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೆ, ಆದೇಶ ಕುರಿತು ರಾಜ್ಯ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿಗಳ ಜೊತೆಗೆ ದೂರವಾಣಿ ಮೂಲಕ ಮಾತನಾಡಿದರು. ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದ ಘೋಷಣೆ ಮತ್ತು ಹೈಕೋರ್ಟ್ ಆದೇಶ ಪಾಲನೆ ಬಗ್ಗೆ ಚರ್ಚಿಸಿದರು. ಕೋರ್ಟ್ ಆದೇಶದನ್ವಯ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಾಧ್ಯಮಗಳಿಗೆ ತಿಳಿಸಿದರು.
ಆಗಿದ್ದೇನು?
ಪರೀಕ್ಷೆ ಹೊತ್ತಿನಲ್ಲಿ ಸರ್ಕಾರ ಹಿಂದಿ ಭಾಷಾ ಪರೀಕ್ಷೆಗೆ ಗ್ರೇಡ್ ನೀಡುವ ನಿರ್ಧಾರದಿಂದ ಗೊಂದಲ ಉಂಟಾಗಿತ್ತು. ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲಾಗಿತ್ತು. ಕಳೆದ ವಾರ ಕೋರ್ಟ್ ಹಿಂದಿಗೆ ಅಂಕಗಳನ್ನು ಪರಿಗಣಿಸುವಂತೆ ಆದೇಶಿಸಿತು. ಇದನ್ನು ಸರ್ಕಾರ ಮತ್ತೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ಅದರ ವಿಚಾರಣೆ ಇಂದು ನಡೆದು, ಕೊನೆಗೂ ಅಂಕಗಳನ್ನೆ ಪರಿಗಣಿಸುವಂತೆ ಸೂಚಿಸಲಾಗಿದೆ.
ಅಂಕಗಳ ಆಧಾರದಲ್ಲಿ ಮೌಲ್ಯಮಾಪನ
ಮೌಲ್ಯಮಾಪಕರು ಸದ್ಯ ಎಸ್ಎಸ್ಎಲ್ಸಿ ಪರೀಕ್ಷೆಗಳ ಮೌಲ್ಯಮಾಪನ ಅಂಕಗಳ ಆಧಾರದಲ್ಲಿ ಮಾಡಿ ಮುಗಿಸಿದ್ದಾರೆ. ಇನ್ನೇನು ಏಪ್ರಿಲ್ 24ರಂದು ಫಲಿತಾಂಶ ಬಿಡುಗಡೆ ಆಗಬೇಕೆನ್ನುವ ಹೊತ್ತಿನಲ್ಲಿ ಇದೇಲ್ಲ ಬೆಳವಣಿಗೆ ಆಗಿದೆ. ಒಂದು ದಿನ ಹಚ್ಚು ಕಡಿಮೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಹೊರ ಬೀಳಲಿದೆ. ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧಿಕೃತ ವೆಬ್ಸೈಟ್ kseab.karnataka.gov.in, karresults.nic.in ಮೂಲಕ ವೀಕ್ಷಣೆ ನೋಡಬಹುದು.












Click it and Unblock the Notifications