ಸಿದ್ದರಾಮಯ್ಯ, ಕಳಪೆ ಮಂತ್ರಿಯ ಕಪಾಳಕ್ಕೆ ಬಾರಿಸಿದಂತಿದೆ: ಶ್ರೀರಾಮುಲು ಹೀಗಂದಿದ್ದೇಕೆ?
ಸಾರ್ವಜನಿಕ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆ ನಿರ್ಬಂಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದೆ. ಅಧಿಕಾರದ ದರ್ಪ, ದೌಲತ್ತು, ಅಹಂನಿಂದ ಏನು ಬೇಕಾದರೂ ಮಾಡಬಹುದೆಂದು ಹೊರಟಿದ್ದ ರಿಪಬ್ಲಿಕನ್ ಕಲುಬುರಗಿ ಸಚಿವರಿಗೆ ಧಾರವಾಡ ಹೈಕೋರ್ಟ್ ಪೀಠ ನೀಡಿರುವ ಆದೇಶ ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ಬಿಜೆಪಿ ನಾಯಕ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಆರ್ಎಸ್ಎಸ್ ಗುರಿಯಾಗಿಟ್ಟುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಚಟುವಟಿಕೆ ನಡೆಸಲು ಅನುಮತಿ ಕಡ್ಡಾಯ ಎಂಬ ಸಂವಿಧಾನ ವಿರೋಧಿ ಸಚಿವ ಸಂಪುಟದ ತೀರ್ಮಾನಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ಸತ್ಯಕ್ಕೆ ಸಂದ ಜಯ ಎಂದಿದ್ದಾರೆ.
ನೀಡಿರುವ ಎರಡು ಇಲಾಖೆಯಲ್ಲಿ ಮಾಡಲು ಸಾಕಷ್ಟು ಕೆಲಸವಿದ್ದರೂ ಶೇ.25ರಷ್ಟು ಪ್ರಗತಿಯನ್ನು ಸಾಧಿಸದ ಕಳಪೆ ಮಂತ್ರಿ ಹಾಗೂ ಸ್ವಯಂ ಘೋಷಿತ ಸಂವಿಧಾನ ತಜ್ಞ ಪ್ರಿಯಾಂಕ್ ಖರ್ಗೆ ಮಾತಿಗೆ ಜೀ ಹುಜೂರ್ ಎಂದು ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡ ಸಿದ್ದರಾಮಯ್ಯ ಅವರಿಗೂ ಇದು ಕಪಾಳಕ್ಕೆ ಬಾರಿಸಿದಂತಿದೆ ಎಂದು ಟಾಂಗ್ ನೀಡಿದ್ದಾರೆ.

ಆರ್ಎಸ್ಎಸ್ ಎಂದಿಗೂ ಅಶಾಂತಿ, ಹಿಂಸೆಗೆ ಪ್ರೋತ್ಸಾಹ ನೀಡುವುದಿಲ್ಲ. ತನ್ನ ತವರು ಕ್ಷೇತ್ರದಲ್ಲಿ ಪಥಸಂಚಲನ ನಡೆದರೆ ಮುಂದೊಂದು ದಿನ ರಾಜಕೀಯವಾಗಿ ಮೂಲೆಗುಂಪಾಗಬೇಕಾಗುತ್ತದೆ ಎಂಬ ಒಂದೇ ಕಾರಣಕ್ಕೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದ ಬೆಂಗಳೂರು ಕಾನ್ವೆಂಟ್ ವಿದ್ಯಾರ್ಥಿಗೆ ನ್ಯಾಯಾಲಯ ಮುಟ್ಟಿ ನೋಡಿಕೊಳ್ಳುವಂತೆ ನೀತಿ ಪಾಠ ಮಾಡಿದೆ ಎಂದು ಶ್ರೀರಾಮುಲು ಹೇಳಿದ್ದಾರೆ. ಇನ್ನು ಮುಂದಾದರೂ ದ್ವೇಷ, ಜಿದ್ದು, ಸೇಡು, ಅಸೂಯೆ ಬಿಟ್ಟು ಕಳಪೆ ಮಂತ್ರಿ ಎನಿಸಿಕೊಂಡು ಸಂಪುಟದಿಂದ ಹೊರ ಹೋಗುವ ಮೊದಲು ಎಚ್ಚೆತ್ತುಕೊಂಡು ಕೊಟ್ಟಿರುವ ಎರಡು ಇಲಾಖೆಗಳಲ್ಲಿ ಜನಪರವಾಗಿ ಕೆಲಸ ಮಾಡಿ ಎಂದು ಆರ್ಎಸ್ಎಸ್ ಪರವಾಗಿ ಆಶಿಸುವೆ ಎಂದಿದ್ದಾರೆ.
ಮೇಲ್ಮನವಿ ಸಲ್ಲಿಸುತ್ತೇವೆ ಎಂದ ಸಿಎಂ
ಆರ್ಎಸ್ಎಸ್ ಅನ್ನು ನಿರ್ಬಂಧಿಸಲು ಸಿಎಂ ಸಿದ್ದರಾಮಯ್ಯನವರ ಸರ್ಕಾರ ಹೊರಡಿಸಿದ್ದ ರಾಜಕೀಯ ಪ್ರೇರಿತ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಸದಾ ದೇಶಸೇವೆಗೆ ಸಿದ್ಧರಿರುವ ಸಂಘಶಕ್ತಿಯನ್ನು ನಿರ್ಬಂಧಿಸಲು ಯಾವ ʼಕೈʼಗಳಿಗೂ ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಇದು ಕಪಾಳಮೋಕ್ಷ ಎಂದು ಬಿಜೆಪಿ ತಿರುಗೇಟು ನೀಡಿದೆ. ಸಾರ್ವಜನಿಕ ಅಥವಾ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications