ಸೂರ್ಯಗ್ರಹಣಕ್ಕೂ ಮೊದಲೇ ಕೇರಳಕ್ಕೆ ಸಿಎಂ ಯಡಿಯೂರಪ್ಪ ಹೋಗುತ್ತಿರುವುದೇಕೆ?
Recommended Video
ಬೆಂಗಳೂರು, ಡಿಸೆಂಬರ್ 23: ಪ್ರತಿಸಲ ರಾಜಕೀಯ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಅಥವಾ ಮಹತ್ವದ ರಾಜಕೀಯ ನಿರ್ಧಾರ ಕೈಗೊಳ್ಳುವಾಗ ಸಿಎಂ ಯಡಿಯೂರಪ್ಪ ಕೇರಳದ ತಳಿಪರಂಬ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಮಾಡಿಸುತ್ತಾರೆ. ಹಿಂದೆ ಸಿಎಂ ಆಗಿದ್ದಾಗ, ನಂತರ ಕೆಜೆಪಿ ಪಕ್ಷವನ್ನು ಕಟ್ಟಿದಾಗಲೂ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಯಡಿಯೂರಪ್ಪ ಹೋಗಿದ್ದರು. ನಾಳೆ ಮತ್ತೆ ರಾಜರಾಜೇಶ್ವರಿ ದೇವಸ್ಥಾನಕ್ಕೆ ಯಡಿಯೂರಪ್ಪ ಹೋಗುತ್ತಿದ್ದಾರೆ.
ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತೆರಳಿದ್ದಾರೆ. ನಾಳೆ ಬೆಳಗ್ಗೆ ಕಣ್ಣೂರಿನ ಸಮೀಪದ ತಳಿಪರಂಬ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುತ್ತಾರೆ ಎಂಬ ಮಾಹಿತಿಯಿದೆ.
ಗ್ರಹಣಕ್ಕೂ ಮುನ್ನ ಕೇರಳದ ದೇವಾಲಯಕ್ಕೆ ಯಡಿಯೂರಪ್ಪ!
ಈ ಹಿಂದೆಯೂ ಕೂಡ ತಳಿಪರಂಬ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿಕೊಟ್ಟು ವಿಶೇಷ ಪೂಜೆಯನ್ನು ಯಡಿಯೂರಪ್ಪ ಮಾಡಿಸಿದ್ದರು. 2012ರಲ್ಲಿ ಬಿಜೆಪಿಯಿಂದ ಹೊರಬಂದು ಹಾವೇರಿಯಲ್ಲಿ ಯಶಸ್ವಿಯಾಗಿ ಕೆಜೆಪಿಯ ಪ್ರಥಮ ಸಮಾವೇಶ ನಡೆಸಿದ ಬಳಿಕ ತಳಿಪರಂಬ ದೇವಸ್ಥಾನಕ್ಕೆ ಯಡಿಯೂರಪ್ಪ ಹೋಗಿದ್ದರು.
ಇದೀಗ ಮಹತ್ವದ ರಾಜಕೀಯ ನಿರ್ಧಾರಗಳನ್ನು ಸಿಎಂ ಯಡಿಯೂರಪ್ಪ ಕೈಗೊಳ್ಳಬೇಕಿದೆ. ಸಂಪುಟ ವಿಸ್ತರಣೆ ಸೇರಿದಂತೆ ಖಾತೆ ಹಂಚಿಕೆಯ ಸಂಕಷ್ಟ ಅವರ ಎದುರಿಗಿದೆ. ಇಂಥ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತೆ ತಳಿಪರಂಬಕ್ಕೆ ತರಳಿರುವುದು ಅವರ ಆಪ್ತರಲ್ಲಿಯೂ ಕುತೂಹಲ ಮೂಡಿಸಿದೆ.
ಸುದರ್ಶನ ನರಸಿಂಹ ಹೋಮ ಮಾಡಿಸಿದ್ದರು
ಒಂದು ವಾರದ ಹಿಂದಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಜೊತೆಗೆ ಸುದರ್ಶನ ನರಸಿಂಹ ಯಾಗ ಮಾಡಿಸಿದ್ದರು. ಡಾಲರ್ಸ್ ಕಾಲನಿಯ ತಮ್ಮ ನಿವಾಸದಲ್ಲಿ ಬೆಳ್ಳಂಬೆಳಗ್ಗೆ ಸತತ 3 ಗಂಟೆಗಳ ಕಾಲ ನಡೆದಿದ್ದ ಯಾಗದಲ್ಲಿ ತಂದೆ-ಮಗ ಜೊತೆಯಾಗಿ ಭಾಗವಹಿಸಿದ್ದರು.
ಸುದರ್ಶನ ನರಸಿಂಹ ಹೋಮವನ್ನು ಶತ್ರು ನಿಗ್ರಹಕ್ಕಾಗಿ ಮಾಡಿಸುತ್ತಾರೆ ಎಂಬ ಅಭಿಪ್ರಾಯವನ್ನು ಜ್ಯೋತಿಸಿ ಶಂಕರಭಟ್ ವ್ಯಕ್ತಪಡಿಸಿದ್ದರು.
ಹೋಮದ ನಂತರ ಅವತ್ತು ಮಧ್ಯಾಹ್ನವೇ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಮೈಸೂರು ಜಿಲ್ಲೆಯ ತಿ. ನರಸೀಪುರದ ಗುಂಜಾ ನರಸಿಂಹ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿದ್ದರು.
ಹೊಸ ವರ್ಷದಲ್ಲಿ ಮಹತ್ವದ ನಿರ್ಧಾರ
ಶೂನ್ಯಮಾಸದ ನೆಪದಲ್ಲಿ ಸಧ್ಯಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯನ್ನು ಸಿಎಂ ಯಡಿಯೂರಪ್ಪ ಮುಂದಕ್ಕೆ ಹಾಕಿದ್ದಾರೆ. ಆದರೆ ಹೊಸ ವರ್ಷದಲ್ಲಿ ಮೊದಲ ಜಂಟಿ ಅಧಿವೇಶನ ಮುಗಿಯುತ್ತಿದ್ದಂತೆಯೆ ಸಂಪುಟ ವಿಸ್ತರಣೆಯ ಸಂಕಷ್ಟವನ್ನು ಸಿಎಂ ಯಡಿಯೂರಪ್ಪ ಎದುರಿಸಬೇಕಿದೆ.
ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಲೇ ಹೀಗಾಗೋದು ಯಾಕೇ?
ಉಪ ಚುನಾವಣೆಯಲ್ಲಿ ಗೆದ್ದಿರುವ 12 ನೂತನ ಶಾಸಕರಿಗೆ ಮಂತ್ರಿಸ್ಥಾನ ಕೊಡಬೇಕಾದ ಅನಿವಾರ್ಯತೆ ಬಿ ಎಸ್ ವೈ ಎದುರಿಗಿದೆ. ಮತ್ತೊಂದೆಡೆ ಬಿಜೆಪಿಯ ಹಿರಿಯ ಶಾಸಕರು ಈಗಾಗಲೇ ಮಂತ್ರಿ ಸ್ಥಾನಕ್ಕೆ ಒತ್ತಡ ಹಾಕಿದ್ದಾರೆ.
ಖಾತೆ ಹಂಚಿಕೆ, ಸಂಪುಟ ವಿಸ್ತರಣೆ
ಮಂತ್ರಿ ಸ್ಥಾನ ಜೊತೆಗೆ ತಮಗೆ ಇಂಥದ್ದೆ ಖಾತೆ ಬೇಕು ಅಂತಾ ನೂತನ ಶಾಸಕರು ದೊಡ್ಡ ಬೇಡಿಕೆಗಳನ್ನು ಬಹಿರಂಗವಾಗಿಯೆ ಯಡಿಯೂರಪ್ಪ ಮುಂದೆ ಇಟ್ಟಿದ್ದಾರೆ.
ಈ ಎಲ್ಲ ಸಂಕಷ್ಟಗಳು ಸಂಕ್ರಮಣದ ನಂತರ ಕಾಡಲಿದ್ದು, ಇದರಿಂದ ಹೊರಬರಲು ಯಡಿಯೂರಪ್ಪ ಅವರು ಮತ್ತೊಮ್ಮೆ ಕಣ್ಣೂರಿನ ತಳಿಪರಂಬದ ರಾಜರಾಜೇಶ್ವರಿ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಅಪಮಾನಗಳನ್ನು ತಡೆಯಲು ದೇವಿಗೆ ಮೊರೆ
ಡಿಸೆಂಬರ್ 26 ರಂದು ಅಮವಾಸ್ಯೆಯಂದು ಕೇತುಗ್ರಸ್ತ ಸೂರ್ಯಗ್ರಹಣ ಧನುರ್ ರಾಶಿಯಲ್ಲಿ ನಡೆಯಲಿದೆ. ಆದರೆ ಅದರ ದೃಷ್ಟಿಯು ಮಿಥುನ ರಾಶಿಯ ಮೇಲೆ ಬೀಳಲಿದೆ. ಈ ಮಿಥುನ ರಾಶಿ ಸಿಎಂ ಯಡಿಯೂರಪ್ಪ ಅವರ ವೃಶ್ಚಿಕ ರಾಶಿಯಿಂದ ಎಂಟನೆ ಮನೆ. ಜ್ಯೋತಿಷ್ಯದಲ್ಲಿ 8ನೇ ಮನೆ ಅಂದರೆ ಆಯುಷ್ಯ ಸ್ಥಾನ.
ಇದರಿಂದ ಅಪಮಾನಗಳನ್ನು, ಹಣಕಾಸಿನ ತೊಂದರೆಗಳನ್ನು ಎದುರಿಸುವ ಸಾಧ್ಯತೆಯಿದೆ. ಹಾಗಾಗಿ ಅವುಗಳನ್ನು ಎದುರಿಸಲು ಸಿಎಂ ಯಡಿಯೂರಪ್ಪ ದೋಷಪರಿಹಾರಕ್ಕೆ ವಿಶೇಷ ಪೂಜೆ ಮಾಡಿಸುತ್ತಿರುವ ಸಾಧ್ಯತೆಯಿದೆ ಎನ್ನುತ್ತಾರೆ ಜ್ಯೋತಿಷಿಗಳಾದ ಶಂಕರ್ ಭಟ್.
ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಕೇರಳದ ಅನಂತಪದ್ಮನಾಭ ಹಾಗೂ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿಯಿದೆ.