Breaking; ಶಿವಮೊಗ್ಗದಲ್ಲಿ ಬಿಜೆಪಿ ಸೇರಿದ ಕಾಂಗ್ರೆಸ್ ನಾಯಕ!
ಬೆಂಗಳೂರು, ಸೆಪ್ಟೆಂಬರ್ 29: ಶಿವಮೊಗ್ಗ ರಾಜಕೀಯದಲ್ಲಿ ಕೆಲವು ಬದಲಾವಣೆಯಾಗಿದೆ. ಸೊರಬ ಕ್ಷೇತ್ರದ ಕಾಂಗ್ರೆಸ್ ನಾಯಕರೊಬ್ಬರು ಪಕ್ಷ ತೊರೆದು ಸಂಸದ ಬಿ. ವೈ. ರಾಘವೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ಗುರುವಾರ ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸೊರಬ ಕ್ಷೇತ್ರದ ಕಾಂಗ್ರೆಸ್ ನಾಯಕ ರಾಜು ಎಂ. ತಲ್ಲೂರು ಬಿಜೆಪಿ ಸೇರಿದರು. ಬಿ. ವೈ. ರಾಘವೇಂದ್ರ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷರಾದ ಮೇಘರಾಜ್ ಮುಂತಾದವರು ಉಪಸ್ಥಿತರಿದ್ದರು.
ಸೊರಬ ರಾಜಕಾರಣ : ರಾಜು ಎಂ.ತಲ್ಲೂರುಗೆ ಕಾಂಗ್ರೆಸ್ ಆಹ್ವಾನ
ರಾಜು ಎಂ. ತಲ್ಲೂರು ಗುರುವಾರ ಬೆಳಗ್ಗೆ ಶಿವಮೊಗ್ಗದ ವಿನೋಬನಗರ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿದ್ದರು. ಬಳಿಕ ಬೆಂಬಲಿಗರ ಜೊತೆ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರಿದರು.
ಸಾಗರ, ಸೊರಬ ಟಿಕೆಟ್ ಗೊಂದಲಕ್ಕೆ ತೆರೆ ಎಳೆದ ಯಡಿಯೂರಪ್ಪ!
2018ರ ಚುನಾವಣೆಯಲ್ಲಿ ರಾಜು ಎಂ. ತಲ್ಲೂರು ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 21,721 ಮತಗಳನ್ನು ಪಡೆದು ಜೆಡಿಎಸ್ನ ಮಧು ಬಂಗಾರಪ್ಪ, ಬಿಜೆಪಿಯ ಕುಮಾರ್ ಬಂಗಾರಪ್ಪ ವಿರುದ್ಧ ಸೋಲು ಕಂಡಿದ್ದರು.
Breaking; ಕಾಂಗ್ರೆಸ್ ಸೇರಿದ್ದ ಮಧು ಬಂಗಾರಪ್ಪಗೆ ಹುದ್ದೆ ನೀಡಿದ ಎಐಸಿಸಿ
ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ ಈಗಾಗಲೇ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಈಗ ಕಾಂಗ್ರೆಸ್ ನಾಯಕ ರಾಜು ಎಂ. ತಲ್ಲೂರು ಬಿಜೆಪಿ ಸೇರಿದ್ದಾರೆ. ಸೊರಬ ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಕುಮಾರ್ ಬಂಗಾರಪ್ಪ.
ರಾಜು ಎಂ. ತಲ್ಲೂರು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಸಂಸದ ಬಿ. ವೈ. ರಾಘವೇಂದ್ರ, "ರಾಜು ಅವರು ತಮ್ಮ ತಪ್ಪಿನ ಅರಿವಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಅವರ ನೇತೃತ್ವದಲ್ಲಿ ಪಕ್ಷ ಮತ್ತು ಸಂಘಟನೆಗೆ ಹೆಚ್ಚಿನ ಶಕ್ತಿ ಲಭಿಸಲಿದೆ" ಎಂದರು.
ಬಿ. ಎಸ್. ಯಡಿಯೂರಪ್ಪ ಮಾತನಾಡಿ, "ರಾಜು ತಲ್ಲೂರು ಪಕ್ಷ ಸೇರ್ಪಡೆಯಾಗಿರುವುದು ಆ ಭಾಗದಲ್ಲಿ ಆನೆ ಬಲ ಬಂದಂತೆ ಆಗಿದೆ. ಅವರಿಗೆ ಪಕ್ಷದಲ್ಲಿ ಸರಿಯಾದ ಸ್ಥಾನಮಾನ ನೀಡಲಾಗುತ್ತದೆ. ಇನ್ನೂ ಅನೇಕ ಮುಖಂಡರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇದರಿಂದ ರಾಜ್ಯದಲ್ಲಿ 150 ಸೀಟ್ ಗೆಲ್ಲಲು ಸಹಕಾರಿ ಆಗಲಿದೆ" ಎಂದು ಹೇಳಿದರು.