ಅಧ್ಯಕ್ಷರಾಗಿ ರಾಹುಲ್ ಗಾಂಧಿ 'ಅಪ್ರೆಂಟಿಸ್ಶಿಪ್' ಅವಧಿ ಇನ್ನೂ ಮುಗಿದಿಲ್ವಾ?
ಕಳೆದ ಡಿಸೆಂಬರ್ ಹನ್ನೊಂದನೇ ತಾರೀಕು ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆಯಾದ ನಂತರ, ಸೋನಿಯಾ ಗಾಂಧಿಯವರನ್ನು ಮಾಧ್ಯಮದವರು ಪ್ರಶ್ನೆಯೊಂದನ್ನು ಕೇಳಿದ್ದರು. ಆಗ, 'ನಾನೀಗ ರಿಟೈರ್ಡ್' ಎನ್ನುವ ಮಾತನ್ನು ಮೇಡಂ ಹೇಳಿದ್ದರು.
ಇದಾದ ನಂತರ ಸ್ವಲ್ಪದಿನ ರಾಜಕೀಯದಿಂದ ಸುಮ್ಮನಿದ್ದ ಸೋನಿಯಾ ಗಾಂಧಿ, ಖಾಸಗಿ ಟಿವಿಯ ಕಾರ್ಯಕ್ರಮವೊಂದರಲ್ಲಿ ನರೇಂದ್ರ ಮೋದಿ ಸರಕಾರದ ವಿರುದ್ದ ಕೆಂಡಕಾರಿದ್ದರು. ಮೋದಿ ಸರಕಾರದ ಕಾರ್ಯವೈಖರಿಯ ಬಗ್ಗೆ ಅಕ್ಷರಸ: ಟೀಕಿಸಿದ್ದ ಸೋನಿಯಾ, ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಹೇಳಿಕೆಯನ್ನು ನೀಡಿದ್ದರು. ಇದು ಒಂದು ಕಡೆ..
ಸೋನಿಯಾ ಗಾಂಧಿ ಭೋಜನ ಕೂಟದಲ್ಲಿ 20 ಪಕ್ಷದ ನಾಯಕರು!
ಈಶಾನ್ಯ ರಾಜ್ಯಗಳ ಫಲಿತಾಂಶ, ಎರಡು ಸೀಟು ಇಟ್ಟುಕೊಂಡೇ ಆಟವಾಡಿದ ಬಿಜೆಪಿ, ರಾಹುಲ್ ಗಾಂಧಿಯ ಇಟೆಲಿ, ಸಿಂಗಾಪುರ ಪ್ರವಾಸ, ಆ ಪ್ರವಾಸದ ಸಂವಾದದ ವಿಡಿಯೋವನ್ನು ಎಐಸಿಸಿಯ ಸಾಮಾಜಿಕ ತಾಣದವರು ತಿರುಚಿ ಹರಿಯಬಿಟ್ಟರು ಎನ್ನುವ ಆರೋಪ ಇನ್ನೊಂದೆಡೆ..
ಇವೆಲ್ಲದರ ನಡುವೆ ಮೋದಿಯನ್ನು ಮತ್ತೆ ಅಧಿಕಾರಕ್ಕೆ ಬರಲು ಬಿಡಬಾರದು ಎಂದು ಎಲ್ಲಾ ವಿಪಕ್ಷದರನ್ನು ಡಿನ್ನರ್ ಪಾರ್ಟಿಗೆ ಕರೆಸಿ, ಮೋದಿ ವಿರುದ್ದ ನಾವೆಲ್ಲಾ ಒಂದೇ ಎಂದು ಎಲ್ಲಾ ನಾಯಕರ 'ಕೈ' ಮೇಲೆತ್ತಿಸುವಲ್ಲಿ ಸೋನಿಯಾ ಗಾಂಧಿ ಯಶಸ್ವಿಯಾಗಿದ್ದಾರೆ.
ಮೌನ ಮುರಿದು, ಮೋದಿ ಸರ್ಕಾರವನ್ನು ಟೀಕಿಸಿದ ಸೋನಿಯಾ ಗಾಂಧಿ
ಅಂದು 'ನಾನೀಗ ರಿಟೈರ್ಡ್' ಎಂದಿದ್ದ ಸೋನಿಯಾ ಮತ್ತೆ ಸಕ್ರಿಯವಾಗಿ ರಾಜಕೀಯವಾಗಿ ಕಾಣಿಸುತ್ತಿರುವುದರಿಂದಲೇ , ಹಾಲೀ ಅಧ್ಯಕ್ಷರ 'ಅಪ್ರೆಂಟಿಸ್ಶಿಪ್' ಅವಧಿ ಇನ್ನೂ ಮುಗಿದಿಲ್ವಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿರುವುದು.
ಈ ಹಿಂದಿನ ರಾಹುಲ್ ಗಾಂಧಿ ರಾಜಕೀಯಕ್ಕೂ, ಈಗಿನ ಅವರ ರಾಜಕೀಯ ನಡೆಗೂ ಬಹಳಷ್ಟು ವ್ಯತ್ಯಾಸ ಕಂಡು ಬರುತ್ತಿದ್ದರೂ, ಬಿಜೆಪಿಯ ತಂತ್ರಗಾರಿಕೆ ಮುಂದೆ ಅದು ಏನೇನೂ ಸಾಲುತ್ತಿಲ್ಲವೇ, ಮುಂದೆ ಓದಿ..
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಪ್ರಮುಖವಾಗಿ ಕಣ್ಣುಮುಂದೆ ಇರುವುದು ಕರ್ನಾಟಕದ ಚುನಾವಣೆ
ಎಐಸಿಸಿಯ ಎಲ್ಲಾ ಘಟಕಗಳಿಗೂ ಸದ್ಯ ಅತ್ಯಂತ ಪ್ರಮುಖವಾಗಿ ಕಣ್ಣುಮುಂದೆ ಇರುವುದು ಕರ್ನಾಟಕದ ಚುನಾವಣೆ. ಶ್ರಮ ಪಟ್ಟರೆ ಇನ್ನೊಂದು ಅವಧಿಗೂ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಎನ್ನುವ ರಾಜಕೀಯ ಲೆಕ್ಕಾಚಾರ ಇರುವ ಈ ಹೊತ್ತಿನಲ್ಲಿ, ಸೋನಿಯಾ ಗಾಂಧಿ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿಲ್ಲವೇ? ಪಕ್ಷದ ತೆಕ್ಕೆಯಲ್ಲಿ ಉಳಿದುಕೊಂಡಿರುವ ಕರ್ನಾಟಕವನ್ನು ಹೇಗಾದರೂ ಉಳಿಸಿಕೊಳ್ಳಲೇ ಬೇಕು ಎಂದು ಪರೋಕ್ಷವಾಗಿ ಮತ್ತೆ ಪಕ್ಷದಲ್ಲಿ ತನ್ನ ಹಿಡಿತವನ್ನು ಮುಂದುವರಿಸಲಿದ್ದಾರಾ ಎನ್ನುವ ರಾಜಕೀಯ ಚರ್ಚೆ ಅಲ್ಲಲ್ಲಿ ಆರಂಭವಾಗಿದೆ.
ಗುಜರಾತ್ ಸೋಲು, ಸೋನಿಯಾ ಬೇಸರಕ್ಕೆ ಕಾರಣ
ಗುಜರಾತ್ ಚುನಾವಣೆಯ ಕಾವು ತೀವ್ರವಾಗಿದ್ದಾಗ, ರಾಹುಲ್ ಗಾಂಧಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ, ಎಲ್ಲಾ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂತು. ಸೋಲಿನಲ್ಲೂ ನಾವೇ ಗೆದ್ದಿದ್ದು ಎಂದು ಕಾಂಗ್ರೆಸ್ಸಿಗರು ಸಂಭ್ರಮಿಸಿದರು. ರಾಹುಲ್ ಗಾಂಧಿ ಪಕ್ಷದ ಪರವಾಗಿ ಏಕಾಂಗಿಯಾಗಿ ಹೋರಾಡಿದರೂ, ಬಿಜೆಪಿಯ ಮುಂದೆ ಅವರ ತಂತ್ರಗಾರಿಕೆ ವರ್ಕೌಟ್ ಆಗಿರಲಿಲ್ಲ. ಇದೂ ಒಂದು ಸೋನಿಯಾ ಬೇಸರಕ್ಕೆ ಕಾರಣ ಎನ್ನಲಾಗುತ್ತಿದೆ.
ಬಿಜೆಪಿಯ ತಂತ್ರಗಾರಿಕೆ ಮುಂದೆ ವರ್ಕೌಟ್ ಆಗುತ್ತಿಲ್ಲವೇ ಕಾಂಗ್ರೆಸ್ ಲೆಕ್ಕಾಚಾರ
ಇದಾದ ನಂತರ ಈಶಾನ್ಯ ರಾಜ್ಯಗಳ ಚುನಾವಣೆ. ಕಳೆದ ತ್ರಿಪುರಾ ಚುನಾವಣೆಯಲ್ಲಿ ಬೋರ್ಡಿಗೇ ಇಲ್ಲದ ಬಿಜೆಪಿ ಅಧಿಕಾರಕ್ಕೆ ಬಂತು. ಅತಿಹೆಚ್ಚು ಸ್ಥಾನ ಗೆದ್ದರೂ ಮೇಘಾಲಯದಲ್ಲಿ ಅಧಿಕಾರ ರಚಿಸಲು ಆಗಲಿಲ್ಲ, ಎರಡು ಸೀಟು ಇಟ್ಟುಕೊಂಡೇ ಬಿಜೆಪಿ ರಾಜಕೀಯ ಮಾಡಿತು. ಇನ್ನು ನಾಗಾಲ್ಯಾಂಡ್ ನಲ್ಲೂ ಅದೇ ಕಥೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳಿಂದಾಗಿ, ರಾಹುಲ್ ಗಾಂಧಿಯವರ 'ಅಪ್ರೆಂಟಿಸ್ಶಿಪ್' ಅವಧಿಯನ್ನು ಸೋನಿಯಾಜಿ ಇನ್ನೂ ಮುಂದುವರಿಸಿದ್ದಾರಾ ಎನ್ನುವ ಡೌಟು ಕಾಡುವಂತೆ ಮಾಡಿದೆ.
ಕಳೆದ ಮೂರ್ನಾಲ್ಕು ವರ್ಷದಿಂದ ನಡೆಯುತ್ತಿದ್ದದ್ದು ರಾಹುಲ್ ಕಾರುಬಾರು
ಅಧಿಕೃತವಾಗಿ ಕಳೆದ ವರ್ಷ ರಾಹುಲ್ ಅಧ್ಯಕ್ಷರಾಗಿ ಆಯ್ಕೆಯಾದರೂ, ಕಳೆದ ಮೂರ್ನಾಲ್ಕು ವರ್ಷದಿಂದ ನಡೆಯುತ್ತಿದ್ದದ್ದು ಅವರದೇ ಕಾರುಬಾರು. ಇತ್ತ ಪ್ರಧಾನಿಯಾಗಿ ಮೋದಿ, ರಾಷ್ಟ್ರಾಧ್ಯಕ್ಷರಾಗಿ ಅಮಿತ್ ಶಾ ಅಧಿಕಾರ ಸ್ವೀಕರಿಸಿಕೊಂಡ ನಂತರ 7 ರಿಂದ 21 ರಾಜ್ಯಗಳಿಗೆ ತಮ್ಮ ಪಕ್ಷದ ಅಧಿಕಾರವನ್ನು ವಿಸ್ತರಿಸಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಪಂಜಾಬ್ ಮಾತ್ರ, ಅದು ಅಲ್ಲಿನ ಸಿಎಂ ಅಮರೀಂದರ್ ಸಿಂಗ್ ಅವರಿಂದಾಗಿಯೇ ಹೊರತು, ರಾಹುಲ್ ಗಾಂಧಿಯವರಿಂದ ಅಲ್ಲ ಎನ್ನುವ ಲೆಕ್ಕಾಚಾರ ಕಾಂಗ್ರೆಸ್ಸಿಗರೂ ಗೊತ್ತಿಲ್ಲದ ವಿಚಾರವೇನೂ ಅಲ್ಲ.
ರಾಹುಲ್ ಇದ್ದರೂ, ಎಲ್ಲವೂ ನಡೆಯುತ್ತಿದ್ದದ್ದು ಸೋನಿಯಾ ಅಣತಿಯಂತೆ
ಯುಪಿಎ ಮೈತ್ರಿಕೂಟದ ಸದಸ್ಯರು ಮತ್ತು ಇತರರನ್ನು ಸೋನಿಯಾ ಗಾಂಧಿ ಮಂಗಳವಾರ (ಮಾ 13) ಡಿನ್ನರ್ ಪಾರ್ಟಿಗೆ ತಮ್ಮ ಮನೆಗೆ ಆಹ್ವಾನಿಸಿದ್ದರು. ಸುಮಾರು ಇಪ್ಪತ್ತಕ್ಕೂ ಹೆಚ್ಚು ಪಕ್ಷದ ಸದಸ್ಯರು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಖರ್ಗೆ, ಮನಮೋಹನ್ ಸಿಂಗ್ ಮುಂತಾದ ಹಿರಿಯ ಕಾಂಗ್ರೆಸ್ಸಿಗರು ಔತಣಕೂಟದಲ್ಲಿ ಭಾಗವಹಿಸಿದ್ದರು. ರಾಹುಲ್ ಗಾಂಧಿಯೂ ಇದ್ದರು, ಆದರೆ ಎಲ್ಲವೂ ನಡೆಯುತ್ತಿದ್ದದ್ದು ಸೋನಿಯಾ ಗಾಂಧಿಯ ಅಣತಿಯಂತೆ.
ರಾಹುಲ್ ಗಾಂಧಿಯವರ 'ಅಂಪ್ರಟೆಷಿಪ್' ಅವಧಿ ಇನ್ನೂ ಮುಗಿದಿಲ್ಲವೇ
ಈ ಎಲ್ಲಾ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ, ಸೋನಿಯಾ ಗಾಂಧಿ ಪಕ್ಷದ ಕಾರ್ಯಚಟುವಟಿಕೆಗಳ ಮೇಲೆ ತಮ್ಮ ಹಿಡಿತವನ್ನು ಮತ್ತೆ ಮುಂದುವರಿಸಿಕೊಂಡು ಬರಲು ಆರಂಭಿಸಿದ್ದಾರೆ ಎಂದನಿಸದೇ ಇರದು. ರಾಹುಲ್ ಗಾಂಧಿ ಅಧ್ಯಕ್ಷರಾಗಿದ್ದರೂ, ಅವರಿನ್ನೂ ಪ್ರಬುದ್ದರಾಗಬೇಕು ಎನ್ನುವ ನಿರ್ಧಾರಕ್ಕೆ ಸೋನಿಯಾ ಬಂದಿರಬಹುದು. ಹಾಗಾಗಿಯೇ, ಅಧ್ಯಕ್ಷರಾಗಿ ರಾಹುಲ್ ಗಾಂಧಿಯವರ 'ಅಪ್ರೆಂಟಿಸ್ಶಿಪ್' ಅವಧಿ ಇನ್ನೂ ಮುಗಿದಿಲ್ಲವೇ ಎನ್ನುವ ಅನುಮಾನ ಕಾಡುವುದು ಸಹಜವಲ್ಲವೇ?