ಅವರನ್ನು ಓಲೈಸಲು ಹೋಗಿ, ಇವರ ವಿರೋಧವನ್ನು ಪಕ್ಷ ಕಟ್ಟಿಕೊಳ್ಳುತ್ತಿದೆಯೇ? ಏನಿದು ಹಿರಿಯ ಕಾಂಗ್ರೆಸ್ಸಿಗರ ಭಯ
ಪೌರತ್ವ ತಿದ್ದುಪಡಿ ಮಸೂದೆ ಮತ್ತು ಅದಾದ ನಂತರ ಮಂಗಳೂರಿನಲ್ಲಿ ನಡೆದ ಗಲಭೆ, ಗೋಲಿಬಾರ್ ವಿಚಾರದಲ್ಲಿ ಕಾಂಗ್ರೆಸ್ಸಿನ ಒಂದು ಬಣದ ಮುಖಂಡರು ನಡೆದುಕೊಂಡ ರೀತಿಗೆ, ಇನ್ನೊಂದು ಬಣದ ಹಿರಿಯ ಕಾಂಗ್ರೆಸ್ಸಿಗರು ಬೇಸರ ವ್ಯಕ್ತಪಡಿಸಿದರೇ?
ಇವರಿಂದಾಗಿ, ಪಕ್ಷದ ಇಮೇಜಿಗೆ ಧಕ್ಕೆ ಬರುತ್ತಿದೆಯೇ? ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸಲು ಹೋಗಿ, ಬಹುಸಂಖ್ಯಾತರ ಸಿಟ್ಟಿಗೆ ಈ ಮುಖಂಡರ ನಡೆ ಕಾರಣವಾಗುತ್ತಿದೆಯೇ? ಈ ರೀತಿಯ ಹಲವು ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ ಎನ್ನುವ ಮಾಹಿತಿಯಿದೆ.
ಕಾಂಗ್ರೆಸ್ಸಿನಲ್ಲಿರುವ ಮೂಲ ಮತ್ತು ವಲಸಿಗ ಬಣದ ನಡುವೆ, ಮಂಗಳೂರು ವಿಚಾರ ಮತ್ತೆ ಕಂದಕವನ್ನು ಹುಟ್ಟುಹಾಕಿದೆ. ತರಾತುರಿಯಲ್ಲಿ ಕೆಲವು ಮುಖಂಡರು, ಮಂಗಳೂರಿಗೆ ಹೋಗಿ, ಹೇಳಿಕೆಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಭಾರೀ ಹಿನ್ನಡೆಯನ್ನು ತಂದೊಡ್ಡಲಿದೆ ಎನ್ನುವ ಭಯ ಹಿರಿಯ ಕಾಂಗ್ರೆಸ್ಸಿಗರಿಗೆ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಪ್ರಮುಖವಾಗಿ ಸಿದ್ದರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡ ಕಾಂಗ್ರೆಸ್ ಮುಖಂಡರು, ಏಕಪಕ್ಷೀಯವಾಗಿ ಪೊಲೀಸರ ಮತ್ತು ಸರಕಾರದ ವಿರುದ್ದ ವಾಗ್ದಾಳಿ ನಡೆಸುತ್ತಿರುವುದು, ಕಾಂಗ್ರೆಸ್ಸಿನಲ್ಲೇ ಒಡಕು ಮೂಡಲು ಕಾರಣವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಕರಾವಳಿ ಭಾಗದಲ್ಲಿ ಸೋತು ಹೈರಾಣವಾಗಿರುವ ಕಾಂಗ್ರೆಸ್
ಮೊದಲೇ ಕರಾವಳಿ ಭಾಗದಲ್ಲಿ ಸೋತು ಹೈರಾಣವಾಗಿರುವ ಕಾಂಗ್ರೆಸ್ಸಿಗೆ, ಮಂಗಳೂರಿನ ವಿದ್ಯಮಾನಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಹಿನ್ನಡೆಯನ್ನು ತಂದೊಡ್ಡುವ ಭಯ, ಕೆಲವು ಕಾಂಗ್ರೆಸ್ ಮುಖಂಡರಿಗೆ ಕಾಡುತ್ತಿದೆ. ಈ ಸಂಬಂಧ, ಸಂಪೂರ್ಣ ವರದಿಯನ್ನು ರಾಜ್ಯ ಕಾಂಗ್ರೆಸ್ಸಿನ ಕೆಲವು ಮುಖಂಡರು ಹೈಕಮಾಂಡಿಗೆ ರವಾನಿಸಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.

ಹಿಂಸಾಚಾರದ ಸಂಬಂಧ ಪೊಲೀಸರು ಬಿಡುಗಡೆ ಮಾಡಿರುವ ವಿಡಿಯೋ ತುಣುಕು
ಮಂಗಳೂರು ಹಿಂಸಾಚಾರದ ಸಂಬಂಧ ಪೊಲೀಸರು ಬಿಡುಗಡೆ ಮಾಡಿರುವ ವಿಡಿಯೋ ತುಣುಕುಗಳ ವಿರುದ್ದ ಕಾಂಗ್ರೆಸ್ ಮುಖಂಡರು ವ್ಯಂಗ್ಯವಾಡಿದ್ದು ಮತ್ತು ಪರಿಹಾರದ ಹಿಂಪಡೆದ ಸಂಬಂಧ ನೀಡುತ್ತಿರುವ ಹೇಳಿಕೆಗಳು ಪಕ್ಷದ ಇಮೇಜಿಗೆ ಧಕ್ಕೆ ತರುವ ಸಾಧ್ಯತೆಗಳನ್ನೂ ವರದಿಯಲ್ಲಿ ವಿವರಿಸಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿಯಿದೆ.

ಬಲಿಯಾದವರು ಆರೋಪಿಗಳ ಪಟ್ಟಿಯಲ್ಲಿದ್ದರೆ, ಪರಿಹಾರ ನೀಡಲಾಗುವುದಿಲ್ಲ
ಮುಖ್ಯಮಂತ್ರಿ ಯಡಿಯೂರಪ್ಪನವರು ಹಿಂಸಾಚಾರಕ್ಕೆ ಬಲಿಯಾದವರು ಆರೋಪಿಗಳ ಪಟ್ಟಿಯಲ್ಲಿದ್ದರೆ, ಪರಿಹಾರ ನೀಡಲಾಗುವುದಿಲ್ಲ ಎಂದು ಹೇಳಿದ್ದರು. ಮೃತ ಪಟ್ಟವರು ಆರೋಪಿಗಳು ಎನ್ನುವುದು ಸಾಬೀತಾದರೆ, ಆರೋಪಿಗಳ ಪರ ಕಾಂಗ್ರೆಸ್ ನಿಂತುಕೊಂಡಿತು ಎಂದು ಬಿಜೆಪಿ ಡಂಗುರ ಸಾರಿಕೊಂಡು ಬರುವ ಸಾಧ್ಯತೆಗಳ ಬಗ್ಗೆಯೂ ಕಾಂಗೆಸ್ಸಿನ ಕೆಲವು ಮುಖಂಡರು ಚಿಂತಿತರಾಗಿದ್ದಾರೆ.

ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸದೇ ವಾಪಸ್ ಬಂದಿದ್ದರು
ಮಂಗಳೂರು ಹಿಂಸಾಚಾರದಲ್ಲಿ ಮೃತ/ಗಾಯಗೊಂಡ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದ್ದ ಸಿದ್ದರಾಮಯ್ಯ, ಉಡುಪಿಯ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸದೇ ವಾಪಸ್ ಬಂದಿದ್ದರು. ಇದು ಸ್ಪಷ್ಟವಾಗಿ ಒಂದು ಸಮುದಾಯವನ್ನು ಓಲೈಸಲು ಹೋಗಿ, ಬಹುಸಂಖ್ಯಾತ ಸಮುದಾಯದ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆದಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಮಂಗಳೂರಿನ ವಿದ್ಯಮಾನ ಅತ್ಯಂತ ಸೂಕ್ಷ್ಮ ವಿಚಾರವಾಗಿತ್ತು
ಮಂಗಳೂರಿನ ವಿದ್ಯಮಾನ ಅತ್ಯಂತ ಸೂಕ್ಷ್ಮ ವಿಚಾರವಾಗಿತ್ತು. ಅತ್ಯಂತ ಗಂಭೀರತೆ/ಜಾಣ್ಮೆಯಿಂದ ಕಾಂಗ್ರೆಸ್ ಪರಿಸ್ಥಿತಿಯನ್ನು ನಿರ್ವಹಿಸಬೇಕಾಗಿತ್ತು. ಕೆಪಿಸಿಸಿ ಅಧ್ಯಕ್ಷರು ಕಲ್ಲುತೂರಾಟಗಾರರು ಮುಖಕ್ಕೆ ಬಟ್ಟೆಕಟ್ಟಿಕೊಂಡದ್ದನ್ನು ಸಮರ್ಥಿಸಿಕೊಂಡಿದ್ದು, ಕಾಂಗ್ರೆಸ್ಸಿನ ಇತರ ಮುಖಂಡರು, ಪೊಲೀಸರ ವಿರುದ್ದ ಹೇಳಿಕೆಯನ್ನು ನೀಡಿದ್ದು, ಸರಿಯಾದ ನಡೆಯಲ್ಲ ಎನ್ನುವುದು ಕೆಲವರ ವಾದ. ಒಟ್ಟಿನಲ್ಲಿ, ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸಲು ಹೋಗಿ, ಬಹುಸಂಖ್ಯಾತ ಸಮುದಾಯದ ವಿರೋಧವನ್ನು ಪಕ್ಷ ಕಟ್ಟಿಕೊಳ್ಳುವ ಸಾಧ್ಯತೆಯ ಬಗ್ಗೆ, ಒಂದು ಬಣದ ಮುಖಂಡರು ಆತಂಕಕ್ಕೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications