ಪಕ್ಷದೊಳಗೆ ಯಡಿಯೂರಪ್ಪಗೆ ಶುರುವಾಯ್ತು ಹೊಸ ತಲೆನೋವು!
Recommended Video
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆಯುವಲ್ಲಿ ಒಂದು ಹಂತಕ್ಕೆ ಯಶಸ್ವಿಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಹೊಸ ತಲೆನೋವು ಎದುರಾಗಿದೆ.
ಅತೃಪ್ತ ಶಾಸಕರ ರಾಜೀನಾಮೆಯ ಹಿಂದೆ ಬಿಜೆಪಿಯ ಕೈವಾಡವಿದೆ ಎನ್ನುವ ಸುದ್ದಿಯ ನಡುವೆ, ಕೆಲವೊಂದು ಶಾಸಕರನ್ನು ಯಾವ ಕಾರಣಕ್ಕೂ ಪಕ್ಷಕ್ಕೆ ಸೇರ್ಪಡೆಗೊಳಿಸಬಾರದು ಎಂದು ಬಿಜೆಪಿಯ ಶಾಸಕರು ಯಡಿಯೂರಪ್ಪಗೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸರಕಾರ ರಚನೆ ಸಂಬಂಧ ಇನ್ನೂ ಗೊಂದಲಗಳು ಮುಂದಿರುವ ಈ ಹೊತ್ತಿನಲ್ಲಿ ಬಿಜೆಪಿ ಶಾಸಕರ ಮತ್ತು ಕಾರ್ಯಕರ್ತರ ಒತ್ತಡ ಬಿಎಸ್ವೈಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.
ಬಳ್ಳಾರಿಯ ಕೆಲವು ಶಾಸಕರು ಬಿಜೆಪಿ ಪಾಳಯಕ್ಕೆ ಸೇರುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದಾಗ ಬಹಿರಂಗವಾಗಿಯೇ ರಮೇಶ್ ಜಾರಕಿಹೊಳಿ ಅಪಸ್ವರ ಎತ್ತಿದ್ದರು. ಈಗ, ಬೆಂಗಳೂರು ನಗರ ವ್ಯಾಪ್ತಿಯ ಶಾಸಕರ ಬಿಜೆಪಿ ಸೇರ್ಪಡೆಗೂ ವಿರೋಧ ವ್ಯಕ್ತವಾಗುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮೆಲ್ಲರ ಸಹಕಾರ ನಮಗೆ ಬೇಕಿದೆ
ನಿಮ್ಮ ಅಸಮಾಧಾನ ಏನೇ ಇದ್ದರೂ, ನನ್ನ ಬಳಿ ಬಂದು ಚರ್ಚಿಸಿ, ಬಹಿರಂಗವಾಗಿ ಹೇಳಿಕೆ ನೀಡಬೇಡಿ ಎನ್ನುವ ಮನವಿಯನ್ನೂ ಯಡಿಯೂರಪ್ಪ ಮಾಡಿದ್ದಾರೆ. ಸದ್ಯ, ಸರಕಾರ ರಚನೆಯ ಬಗ್ಗೆ ಚರ್ಚಿಸೋಣ, ಏನೇ ಸಮಸ್ಯೆಗಳಿದ್ದರೂ ಅದಕ್ಕೆ ಪರಿಹಾರ ಕಂಡುಕೊಳ್ಳೋಣ. ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮೆಲ್ಲರ ಸಹಕಾರ ನಮಗೆ ಬೇಕಿದೆ ಎಂದು, ಯಡಿಯೂರಪ್ಪ, ತಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಸಮಾಧಾನ ಮಾಡಿ ಕಳುಹಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.

ಕೆ ಆರ್ ಪುರಂ ಮಾಜಿ ಶಾಸಕ ನಂದೀಶ್ ರೆಡ್ಡಿ ತೀವ್ರ ವಿರೋಧ
ರಾಜೀನಾಮೆ ನೀಡಿದ ಶಾಸಕರಲ್ಲಿ ಕೆ ಆರ್ ಪುರಂ ಶಾಸಕ ಭೈರತಿ ಬಸವರಾಜು ಕೂಡಾ ಒಬ್ಬರು. ಇವರ ಹತ್ತಿರದ ಸಂಬಂಧಿ ಭೈರತಿ ಸುರೇಶ್, ಹೆಬ್ಬಾಳ ಶಾಸಕರು. ಬಸವರಾಜು ಮಾತ್ರ ಸದ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇವರು ಬಿಜೆಪಿಗೆ ಸೇರಬಹುದು ಎನ್ನುವ ಸುದ್ದಿಯ ನಡುವೆ, ಕೆ ಆರ್ ಪುರಂ ಬಿಜೆಪಿ ಮುಖಂಡ, ಮಾಜಿ ಶಾಸಕ ನಂದೀಶ್ ರೆಡ್ಡಿ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನಂದೀಶ್ ಮತ್ತು ಭೈರತಿ ಬಸವರಾಜ್ ನಡುವೆ ಉತ್ತಮ ಸಂಬಂಧವಿಲ್ಲ
ಕಳೆದ ಎರಡು ಅಸೆಂಬ್ಲಿ ಚುನಾವಣೆಯಲ್ಲಿ ಭೈರತಿಗೆ ತೀವ್ರ ಪೈಪೋಟಿ ನೀಡುತ್ತಿರುವ ನಂದೀಶ್ ಮತ್ತು ಭೈರತಿ ಬಸವರಾಜ್ ನಡುವೆ ಉತ್ತಮ ಸಂಬಂಧವಿಲ್ಲ. ನನ್ನ ಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇವರ ವಿರುದ್ದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಅದ್ಯಾವ, ಮನಸ್ಥಿತಿಯೊಂದಿಗೆ ಅವರ ಜೊತೆ ಕೈಜೋಡಿಸಲು ಸಾಧ್ಯ ಎಂದು ನಂದೀಶ್ ಹೇಳಿಕೆಯನ್ನು ನೀಡಿದ್ದಾರೆ.

ಮಹಾಲಕ್ಷ್ಮೀ ಲೇಔಟ್ ಜೆಡಿಎಸ್ ಶಾಸಕ ಕೆ ಗೋಪಾಲಯ್ಯ
ಇನ್ನು ಮಹಾಲಕ್ಷ್ಮೀ ಲೇಔಟ್ ಜೆಡಿಎಸ್ ಶಾಸಕ ಕೆ ಗೋಪಾಲಯ್ಯ, ಬಿಜೆಪಿ ಸೇರ್ಪಡೆಗೂ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಕ್ಷೇತ್ರದ ಬಿಜೆಪಿ ಮುಖಂಡರು, ಯಡಿಯೂರಪ್ಪನವರನ್ನು ಭೇಟಿಯಾಗಿ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಲಬಾರದು ಎಂದು ಮನವಿ ಮಾಡಿದ್ದರು. ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳೋಣ ಎಂದು ಯಡಿಯೂರಪ್ಪಗೆ ಹೇಳಿ ಕಳುಹಿಸಿದ್ದಾರೆ.

ಇನ್ನೋರ್ವ ಅತೃಪ್ತ ಕಾಂಗ್ರೆಸ್ ಶಾಸಕ ಮುನಿರತ್ನ
ಇನ್ನು, ಇನ್ನೋರ್ವ ಅತೃಪ್ತ ಕಾಂಗ್ರೆಸ್ ಶಾಸಕ ಮುನಿರತ್ನ ವಿರುದ್ದವೂ ಬಿಜೆಪಿ ಸ್ಥಳೀಯ ಮುಖಂಡರು ಮತ್ತು ತುಳಸಿ ಮುನಿರಾಜು ಅಪಸ್ವರ ಎತ್ತಿದ್ದಾರೆ. ಅತೃಪ್ತರಲ್ಲಿ ಎಲ್ಲರನ್ನೂ ಸೇರಿಸಿಕೂಳ್ಳದಿದ್ದರೆ, ಸರಕಾರ ರಚಿಸುವುದು ಹೇಗೆ ಎನ್ನುವುದು ಯಡಿಯೂರಪ್ಪನವರಿಗೆ ಹೊಸ ತಲೆನೋವಾಗಿ ಕೂತಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲೇ ಬೇಕಾದ ಅನಿರ್ವಾತೆಯಲ್ಲಿ ಯಡಿಯೂರಪ್ಪ ಇದ್ದಾರೆ. ಯಾಕೆಂದರೆ, ರಿವರ್ಸ್ ಆಪರೇಷನ್ ಭಯ.












Click it and Unblock the Notifications