ನಾಪತ್ತೆ ಆಗುವ ಒಂದು ದಿನ ಮುಂಚೆ ಡಿಕೆಶಿಗೆ ಕರೆ ಮಾಡಿದ್ದ ಸಿದ್ಧಾರ್ಥ
Recommended Video
ಬೆಂಗಳೂರು, ಜುಲೈ 30: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ನಿನ್ನೆ ಸಂಜೆಯಿಂದ ನಾಪತ್ತೆ ಆಗಿದ್ದು, ನಾಪತ್ತೆ ಆಗುವ ಒಂದು ದಿನ ಮುನ್ನಾ ಅಂದರೆ ಭಾನುವಾರದಂದು ಅವರು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿ ಮಾತನಾಡಿದ್ದರು.
ಈ ಬಗ್ಗೆ ಸ್ವತಃ ಡಿಕೆ.ಶಿವಕುಮಾರ್ ಅವರು ಮಾಹಿತಿ ನೀಡಿದ್ದು, ಭಾನುವಾರ ನನಗೆ ಕರೆ ಸಿದ್ಧಾರ್ಥ ಅವರು ಕರೆ ಮಾಡಿದ್ದರು. 'ಭೇಟಿ ಆಗಬೇಕೆಂದಿದ್ದೇನೆ, ಭೇಟಿ ಸಾಧ್ಯವೇ ಎಂದು ಕೇಳಿದ್ದರು' ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ನನ್ನೊಂದಿಗೆ ಮಾತನಾಡಿದಾಗ ಚೆನ್ನಾಗಿಯೇ ಮಾತನಾಡಿದರು. 'ವಿರೋಧ ಪಕ್ಷದ ನಾಯಕನಾಗುತ್ತಿದ್ದೀಯಾ? ಎಂದು ಕೇಳಿದರು, ಹಾಗೇನೂ ಇಲ್ಲವೆಂದು ನಾನು ಹೇಳಿದ್ದೆ, ನನ್ನ ಬಳಿ ಚೆನ್ನಾಗಿಯೇ ಮಾತನಾಡಿದ್ದರು, ಅವರು ಖಿನ್ನತೆಯಲ್ಲಿದ್ದ ಹಾಗೆ ನನಗೆ ಅನ್ನಿಸಲಿಲ್ಲ' ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, 'ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಅಳ್ಳು ಎದೆಯವರಲ್ಲ, ಅವರಿಗೆ ಸಮಸ್ಯೆಗಳಾಗುತ್ತಿತ್ತು ಎಂಬುದು ಗೊತ್ತಿತ್ತು, ಆದರೆ ಅದನ್ನೆಲ್ಲಾ ಎದುರಿಸುವ ಧೈರ್ಯ ಅವರಿಗೆ ಇತ್ತು' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಘಟನೆ ಬಗ್ಗೆ ತನಿಖೆ ಆಗಲೇಬೇಕು: ಡಿಕೆ.ಶಿವಕುಮಾರ್
ಘಟನೆ ಬಗ್ಗೆ ತನಿಖೆ ಆಗಲೇಬೇಕು ಎಂದ ಡಿ.ಕೆ.ಶಿವಕುಮಾರ್, ಅವರು ಎಲ್ಲಿಗೆ ಹೋದರು, ಯಾರಾದರೂ ಅವರನ್ನು ಕರೆದುಕೊಂಡು ಹೋದರಾ? ಸ್ವಯಂ ಪ್ರೇರೇಪಿತವಾಗಿ ಅವರು ಏನಾದರೂ ಮಾಡಿಕೊಂಡರಾ? ಅವರ ಮೇಲೆ ಒತ್ತಡವಿತ್ತಾ? ಎಲ್ಲವೂ ತನಿಖೆ ಆಗಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಐಟಿ ಕಿರುಕುಳದ ಬಗ್ಗೆ ಮಾತನಾಡುವುದಿಲ್ಲ: ಡಿಕೆಶಿ
ಐಟಿ ಅಧಿಕಾರಿಗಳ ಕಿರುಕುಳದ ಬಗ್ಗೆ ಪತ್ರದಲ್ಲಿ ಸಿದ್ಧಾರ್ಥ ಅವರು ಉಲ್ಲೇಖ ಮಾಡಿರುವ ಬಗ್ಗೆ ಮಾತನಾಡಲು ನಿರಾಕರಿಸಿದ ಡಿ.ಕೆ.ಶಿವಕುಮಾರ್, ಆ ಬಗ್ಗೆ ಈಗ ಏನೂ ಮಾತನಾಡುವುದಿಲ್ಲ, ತನಿಖೆಯಿಂದ ಎಲ್ಲ ಅಂಶಗಳು ಹೊರಬೀಳುತ್ತವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕೊನೆಯ ಬಾರಿ ಪ್ರತಾಪ್ ಶೆಟ್ಟಿ, ಜಾವೇದ್ಗೆ ಕರೆ
ಅವರು ಕೊನೆಯ ಬಾರಿಗೆ ಅವರ ಮ್ಯಾನೇಜರ್ ಮತ್ತು ಆರ್ಥಿಕ ಸಲಹೆಗಾರರಾಗಿದ್ದ ಪ್ರತಾಪ್ ಶೆಟ್ಟಿ ಮತ್ತು ಜಾವೇಧ್ ಎಂಬುವರಿಗೆ ಕರೆ ಮಾಡಿದ್ದಾರೆ ಎಂಬ ಮಾಹತಿ ದೊರೆತಿದೆ. ನಾವು ನಮ್ಮ ಮೂಲಗಳಿಂದ ಪ್ರಯತ್ನಗಳನ್ನು ಮಾಡುತ್ತಲೇ ಇದ್ದೇವೆ ಆದರೆ ನಾಪತ್ತೆಯಾದ 12 ಗಂಟೆ ನಂತರ ನಾನು ಭರವಸೆ ಕಳೆದುಕೊಂಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಸಿದ್ಧಾರ್ಥ ಸಂಭಾವಿತ, ಸುಸಂಸ್ಕೃತಿಯ ವ್ಯಕ್ತಿ: ಡಿಕೆಶಿ
ಸ್ವತಃ ಸಿದ್ಧಾರ್ಥ ಮತ್ತು ಆತನ ಕುಟುಂಬದವರು ನನಗೆ ಬಹಳ ವರ್ಷದ ಗೆಳೆಯರು, ಅವರೊಬ್ಬ ಅತ್ಯಂತ ಸಂಭಾವಿತ ಮನುಷ್ಯ, ಸಾವಿರಾರು ಕೋಟಿ ಒಡೆಯನಾಗಿದ್ದರೂ ಸಹ ಸಾಮಾನ್ಯವಾದ ಕಾರಿನಲ್ಲೇ ಪ್ರಯಾಣ ಮಾಡುತ್ತಿದ್ದರು, ಮಿತ ಭಾಷೆ, ಸುಸಂಸ್ಕೃತಿಯುಳ್ಳ ವ್ಯಕ್ತಿಯಾಗಿದ್ದರು ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರು.
|
ಸಿದ್ಧಾರ್ಥ ನಾಪತ್ತೆ ಕುರಿತು ಟ್ವೀಟ್ ಮಾಡಿದ ಡಿಕೆಶಿ
ಸಿದ್ಧಾರ್ಥ ನಾಪತ್ತೆ ಪ್ರಕರಣದ ಬಗ್ಗೆ ಎರಡು ಟ್ವೀಟ್ ಮಾಡಿರುವ ಡಿ.ಕೆ.ಶಿವಕುಮಾರ್ ಅವರು, ಸಿದ್ಧಾರ್ಥ ಅವರು ಬರೆದಿದ್ದಾರೆ ಎಂಬ ಪತ್ರವನ್ನು ಲಗತ್ತಿಸಿ, ಸಿದ್ಧಾರ್ಥ ನನಗೆ ಭಾನುವಾರ ಕರೆ ಮಾಡಿದ್ದರು, ಶನಿವಾರ ಈ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಇದು ಅನುಮಾನ ಮೂಡಿಸುತ್ತಿದ್ದೆ ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಮನವಿ ಮಾಡಿದ್ದಾರೆ.












Click it and Unblock the Notifications