ಜೆಡಿಎಸ್ ಭದ್ರಕೋಟೆಯಲ್ಲಿ ಗುಡುಗಿ ಸಿದ್ದರಾಮಯ್ಯ: ಬೊಗಳೆ ಭಾಷಣಕಾರ ಎಂದ ಜೆಡಿಎಸ್!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನ ಸಮಾವೇಶದಲ್ಲಿ ಜೆಡಿಎಸ್ ಪಕ್ಷದ ನಾಯಕರು ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ಮೇಲೆ ಮುಗಿಬಿದ್ದಿದ್ದಾರೆ. ನನ್ನು ಯಾರು ಬೆಳೆಸಿಲ್ಲ ಬೆಳೆದಿದ್ದು ಎನ್ನುವಂತೆ ಸಿದ್ದರಾಮಯ್ಯ ಅವರು ಹಾಸನದಲ್ಲಿ ಮಾಸ್ ಡೈಲಾಗ್ ಮೂಲಕ ಗುಡುಗಿದ್ದಾರೆ. ನಾನು ಒಂದೇ ಒಂದು ಸಮಾವೇಶ ಮಾಡಿದೆ ಎಂದು ನನ್ನನ್ನು ಜೆಡಿಎಸ್ನಿಂದಲೇ ಉಚ್ಚಾಟನೆ ಮಾಡಲಾಯಿತು. ದೇವೇಗೌಡ ಅವರು ಯಾರನ್ನೂ ಬೆಳೆಸುವುದಕ್ಕೆ ಇಚ್ಛಿಸುವುದಿಲ್ಲ ಎಂದು ಹಾಸನ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಡುಗಿದ್ದರು. ಇದರ ಬೆನ್ನಲ್ಲೇ ಜೆಡಿಎಸ್ ಕಂಡಾಮಂಡಲವಾಗಿದ್ದು, ಸರಣಿ ಟ್ವೀಟ್ಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿದೆ.
ಜೆಡಿಎಸ್ ಭದ್ರಕೋಟೆಯಲ್ಲಿ ನಿಂತು ಕಾಂಗ್ರೆಸ್ ಪಕ್ಷವು ಜೆಡಿಎಸ್ ಅನ್ನು ಕೆಣಕಿದೆ. ಇದರ ಬೆನ್ನಲ್ಲೇ ಜೆಡಿಎಸ್ ಸಹ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ತಿರುಗಿ ಬಿದ್ದಿದ್ದು, ಸರಣಿ ಟ್ವೀಟ್ಗಳ ಮೂಲಕ ಕಾಂಗ್ರೆಸ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟಿದೆ.

ಜೆಡಿಎಸ್ನ ಅಧಿಕೃತ ಖಾತೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಸರಣಿ ಟ್ವೀಟ್ ಮಾಡಲಾಗಿದೆ. ಅದರಲ್ಲಿ
ದಲಿತ ಸಮಾಜಕ್ಕೆ ಸೇರಿದ ನಿಂಗ ಎನ್ನುವವರಿಗೆ ಸಿಗಬೇಕಿದ್ದ ಬದಲಿ ನೀವೇಶನಗಳನ್ನು ಅಕ್ರಮವಾಗಿ ರಾಜಕೀಯ ಅಧಿಕಾರ ದುರ್ಬಳಕೆ ಮಾಡಿ ಕಬಳಿಸಿದಾಗ ನಿಮಗೆ ಅಹಿಂದ ನೆನಪಾಗಲಿಲ್ಲವೇ ಸಿದ್ದಹಸ್ತ ಸಿದ್ದರಾಮಯ್ಯ ಅವರೇ ಎಂದು ಪ್ರಶ್ನೆ ಮಾಡಿದೆ.
ಮುಂದುವರಿದು ಮುಡಾ ಹಗರಣ ಬುಡಕ್ಕೆ ಬಂದಿರುವಾಗ ನಿಮಗೆ ಅಹಿಂದ ನೆನಪಾಗುತ್ತಿದೆ. ಮೆತ್ತಿಕೊಂಡಿರುವ ಕಪ್ಪುಮಸಿ ಅಂದರೆ ವೈಟ್ನರ್ ಮರೆಮಾಚುವುದಕ್ಕಾಗಿ ಸ್ವರಕ್ಷಣೆಗಾಗಿ ಹಾಸನದಲ್ಲಿ ಸಮಾವೇಶ ಮಾಡಿಕೊಂಡ ಡೋಂಗಿವಾದಿ ನೀವು ಎಂದು ಹೇಳಿದೆ. ಅಲ್ಲದೇ

ಅಂದು ಜೆಡಿಎಸ್ ವೇದಿಕೆಯಲ್ಲಿಯೇ ನೀವು ಅಹಿಂದ ಸಮಾವೇಶ ಮಾಡಿದ್ದರೇ ಎಚ್.ಡಿ.ದೇವೇಗೌಡ ಅವರು ನಿಮ್ಮನ್ನು ಯಾಕೆ ಉಚ್ಛಾಟಿಸುತ್ತಿದ್ದರು ಎಂದು ಜೆಡಿಎಸ್ ಪ್ರಶ್ನೆ ಮಾಡಿದ್ದು, ನಾನು ಎಂಬ ಅಹಂನಿಂದ ಪಕ್ಷ ವಿರೋಧಿ ಚಟುವಟಿಕೆ ಹಾಗೂ ಪಿತೂರಿ ನಡೆಸಿದ್ದಕ್ಕೆ ನಿಮ್ಮನ್ನು ಉಚ್ಛಾಟಿಸಲಾಯಿತು ಎಂದು ಹೇಳಿದೆ.
ನಿವೃತ್ತಿಯಾಗಿದ್ದ ಸ್ವಜಾತಿ ಐಪಿಎಸ್ ಅಧಿಕಾರಿಯೊಬ್ಬರನ್ನು ಗೃಹ ಇಲಾಖೆ ಸಲಹೆಗಾರಾಗಿ ನೇಮಿಸಿಕೊಂಡು, ಆ ಇಲಾಖೆ ನಿರ್ವಹಿಸುತ್ತಿದ್ದ ದಲಿತ ನಾಯಕ ಡಾ.ಜಿ.ಪರಮೇಶ್ವರ್ ಅವರನ್ನು ಹತ್ತಿಕ್ಕಿದಾಗ ಅಹಿಂದ ನೆನಪಾಗಲಿಲ್ಲವೇ ಸಿದ್ದರಾಮಯ್ಯನವರೇ ಎಂದು ಕೇಳಿದೆ. ಇನ್ನು ದಲಿತ ಸಮಾಜದ ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರ ಮೇಲೆ ನಿಮ್ಮ ಆಪ್ತ ಮರೀಗೌಡ ಹಲ್ಲೆ ನಡೆಸಿದರೂ, ಸ್ವಜಾತಿ ವ್ಯಾಮೋಹಕ್ಕೆ ಒಳಗಾಗಿ ಮರೀಗೌಡನ ರಕ್ಷಣೆ ಮಾಡಿದಾಗ ಅಹಿಂದ ನೆನಪಾಗಲಿಲ್ಲವೇ. ಕನಿಷ್ಠ ನಾಚಿಕೆಯೂ ಆಗಲಿಲ್ಲವೇ ಸಿದ್ದರಾಮಯ್ಯ ಅವರೇ ಎಂದು ಜೆಡಿಎಸ್ ಪಕ್ಷವು ಸಿದ್ದರಾಮಯ್ಯ ಅವರನ್ನು ತೀಕ್ಷ್ಣವಾಗಿ ಪ್ರಶ್ನೆ ಮಾಡಿದೆ.
ದಲಿತ ಸಮಾಜಕ್ಕೆ ಸೇರಿದ ನಿಂಗನಿಗೆ ಸಿಗಬೇಕಿದ್ದ ಬದಲಿ ನೀವೇಶನಗಳನ್ನು ಅಕ್ರಮವಾಗಿ "ರಾಜಕೀಯ" ಅಧಿಕಾರ ದುರ್ಬಳಕೆ ಮಾಡಿ ಕಬಳಿಸಿದಾಗ ಅಹಿಂದ ನೆನಪಾಗಲಿಲ್ಲವೇ ಸಿದ್ದಹಸ್ತ @siddaramaiah ನವರೇ?
— Janata Dal Secular (@JanataDal_S) December 5, 2024
ಮುಡಾ ಹಗರಣ ಬುಡಕ್ಕೆ ಬಂದಿರುವಾಗ ನಿಮಗೆ ಅಹಿಂದ ನೆನಪಾಗುತ್ತಿದೆ. ಮೆತ್ತಿಕೊಂಡಿರುವ ಕಪ್ಪುಮಸಿ ಅರ್ಥಾತ್ ವೈಟ್ನರ್ ಮರೆಮಾಚಲು ಸ್ವರಕ್ಷಣೆಗಾಗಿ…
ಮುಡಾದಲ್ಲಿ ಮುಕ್ಕಿ ತಿಂದಿರುವ ಬೊಗಳೆ ಭಾಷಣಕಾರ, ಜಾತಿವಾದಿ ಭ್ರಷ್ಟಾರಾಮಯ್ಯಗೆ "ಅಹಿಂದ" ಎಂಬುದು ಒಂದು ರಕ್ಷಾಕವಚಷ್ಟೇ ಎಂದಿದ್ದು, ಅಹಿಂದ ಎನ್ನುವ ಟ್ಯಾಗ್ ಇಟ್ಟುಕೊಂಡು ಇಷ್ಟೆಲ್ಲಾ ಅಸಹ್ಯ ಮಾಡಿಕೊಳ್ಳುತ್ತಿರುವ ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ. ಅತ್ತ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಭಾಷಣ ಮಾಡುತ್ತಿದ್ದಂತೆಯೇ ಒಂದೊಂದು ಹೇಳಿಕೆಗಳಿಗೂ ಜೆಡಿಎಸ್ ಟ್ವೀಟ್ನ ಮೂಲಕ ತಿರುಗೇಟು ಕೊಡುತ್ತಿದೆ.












Click it and Unblock the Notifications