ಕುತೂಹಲ ಮೂಡಿಸಿದ ಸಿದ್ದರಾಮಯ್ಯ ಹೇಳಿಕೆ: ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಖಚಿತ?
ಬೆಂಗಳೂರು, ಫೆ. 05: ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ್ದ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ಹಿನ್ನೆಲೆಯಲ್ಲಿ ನಡೆದ ಚರ್ಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಸುದೀರ್ಘ ಉತ್ತರ ನೀಡಿದ್ದಾರೆ. ಆರು ದಿನಗಳ ಕಾಲ ನಡೆದ ಚರ್ಚೆಗೆ ಸಿಎಂ ಯಡಿಯೂರಪ್ಪ ಅವರು ಉತ್ತರ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಕೂತೂಹಲಕಾರಿ ವಿಚಾರ ಹಂಚಿಕೊಂಡಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಸಿಎಂ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಉತ್ತರ ಕೊಡುವಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ನಡೆಸಿದ್ದರು. ನಾನೆಂದು ದ್ವೇಷದ ರಾಜಕಾರಣ ಮಾಡಿದವನಲ್ಲ. ನಾಡಿನ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾದ್ದಾರೆ. ಹೀಗಾಗಿಯೆ ಲೋಕಸಭೆ ಚುನಾವಣೆಯಲ್ಲಿ 25 ಸಂಸದರನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಇಂತ ಹೀನಾಯ ಸ್ಥಿತಿ ಎಂದೂ ಬಂದಿರಲಿಲ್ಲ ಎಂದು ಪರೋಕ್ಷವಾಗಿ ಇದಕ್ಕೆ ಸಿದ್ದರಾಮಯ್ಯ ಕಾರಣ ಎಂದು ಯಡಿಯೂರಪ್ಪ ಹೇಳಿದ್ದರು.
ಸಿಎಂ ಯಡಿಯೂರಪ್ಪ ಅವರ ಲೇವಡಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸದನದಲ್ಲಿಯೇ ತಿರುಗೇಟು ಕೊಟ್ಟಿದ್ದರು. ನೀವು ಬಳ್ಳಾರಿ, ಮಂಡ್ಯದಲ್ಲಿ ಸೋಲಲಿಲ್ವೇ? ಯಡಿಯೂರಪ್ಪನವರೇ ಗುಂಡ್ಲುಪೇಟೆ, ನಂಜನಗೂಡಿನಲ್ಲಿ ಸೋಲಲಿಲ್ವೇ? ಅದ್ಯಾಕಪ್ಪಾ ಅಲ್ಲಿ ಸೋತಿದ್ದು? ಎಂದು ಯಡಿಯೂರಪ್ಪ ಹೇಳಿಕೆಗೆ ಎದಿರೇಟು ಕೊಟ್ಟಿದ್ದರು. ನಂತರ ವಿಧಾನಸೌಧದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕತ್ವ ಬದಲಾವಣೆ ಕುರಿತು ಕುತೂಹಲಕಾರಿ ಮಾತುಗಳನ್ನು ಆಡಿದ್ದಾರೆ.
ಯಡಿಯೂರಪ್ಪ ಬದಲಾವಣೆ ಖಂಡಿತ
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಕೇಳಗಿಳಿಯುತ್ತಾರೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ಅವರ ಪಕ್ಷದವರೇ ಹೇಳುತ್ತಿದ್ದಾರಲ್ಲವಾ? ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯುಗಾದಿ ನಂತರ ಯಡಿಯೂರಪ್ಪ ಬದಲಾವಣೆ ಆಗ್ತಾರೆ ಎಂದು ಹೇಳುತ್ತಿಲ್ಲವಾ? ನಯಡಿಯೂರಪ್ಪ ಅವರು ಅಮಿತ್ ಶಾ, ಪ್ರಧಾನಿ ಮೋದಿ ಆಶೀರ್ವಾದ ಇರೋವರೆಗೆ ನಾನು ಬದಲಾಗಲ್ಲ ಎನ್ನುತ್ತಿದ್ದಾರೆ. ನಾನು ಹೇಳುತ್ತೇನೆ ಅವರನ್ನು ತೆಗೆಯುತ್ತಾರೆ ಎಂದು ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಹೇಳಿಕೆ ನೀಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಸಿಎಂ ಎದುರೇ ಹೇಳಿದ್ದೇನೆ
ವಿಧಾನಸಭೆಯಲ್ಲಿ ಯಡಿಯೂರಪ್ಪ ಎದುರಿಗೆ ನಿಮ್ಮ ಉತ್ತರ ತೃಪ್ತಿ ತಂದಿಲ್ಲ ಹೇಳಿದ್ದೇನೆ. ನೀರಾವರಿಗೆ ಹಣ ಬಿಡುಗಡೆ ಮಾಡಿಲ್ಲ. ರೈತರ ಸಾಲ ಮನ್ನಾ ಮಾಡುತ್ತೇನೆ ಅಂದಿದ್ದರು, ಮಾಡಿಲ್ಲ. ಇಸ್ರೇಲ್ಗೆ ಮೂರು ಸಾವಿರ ರೈತರನ್ನು ಕೃಷಿ ಅಧ್ಯಯನಕ್ಕೆ ಕಳಿಸುತ್ತೇವೆ ಎಂದಿದ್ದರು. ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ ಹಣವನ್ನು ಕಡಿಗಿಳಿಸಿದ್ದಾರೆ. ನಮ್ಮ ಸರ್ಕಾರ ಇದ್ದಾಗ 35 ಸಾವಿರ ಕೋಟಿ ರೂ. ಅನುದಾನ ಕೊಡುತ್ತಿದ್ದೇವು. ಈಗ ಅದನ್ನು ಕಡಿತ ಮಾಡಿ ಎಸ್ಸಿ, ಎಸ್ಟಿ ವಿಧ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಆರೋಪಿಸಿದರು.
ಒಂದೇ ಒಂದು ಮನೆ ಕೊಟ್ಟಿದ್ದಾನಾ?
ವಸತಿ ಸಚಿವ ವಿ. ಸೋಮಣ್ಣ ಒಂದೇ ಒಂದು ಮನೆ ಕೊಟ್ಟಿದ್ದಾನಾ? ಎಂದು ಏಕವಚನದಲ್ಲಿಯೇ ಸಿದ್ದರಾಮಯ್ಯ ಅವರು ವಾಗ್ದಾಳಿ ಮಾಡಿದ್ದಾರೆ. ಮನೆಗಳ ನಿರ್ಮಾಣವೇ ನಿಂತು ಹೋಗಿದೆ. ನಾವು ಪ್ರತಿವರ್ಷ 3 ಲಕ್ಷ ಮನೆ ಕಟ್ಟಿದ್ದೆವು. ಈಗ ಇವರು ಮನೆಗಳನ್ನೇ ನಿರ್ಮಾಣ ಮಾಡುತ್ತಿಲ್ಲ. ಜೊತೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲಂಚವಿಲ್ಲದೆ ಅಧಿಕಾರಿಗಳ ವರ್ಗಾವಣೆ ಆಗುತ್ತಿಲ್ಲ ಎಂದು ಸರ್ಕಾರದ ಮೇಲೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇದು ವಚನ ಭ್ರಷ್ಟ ಸರ್ಕಾರ
ಬಿಜೆಪಿಯವರದ್ದು ವಚನ ಭ್ರಷ್ಟ ಸರ್ಕಾರ. ಅವರು ಕೊಟ್ಟಿದ್ದ ಯಾವ ಭರವಸೆಯನ್ನೂ ಈಡೇರಿಸಿಲ್ಲ, ಈಡೇರಿಸಲ್ಲ. ನೀರಾವರಿ ಯೋಜನೆಗಳಿಗೆ 1.5 ಲಕ್ಷ ಕೋಟಿ ರೂ.ವ್ಯಯಿಸುತ್ತೇವೆ ಎಂದಿದ್ದರು. ರೈತರ ಬ್ಯಾಂಕ್ ಸಲಾ ಸಾಲಮನ್ನಾ ಮಾಡುತ್ತೇವೆ ಎಂದಿದ್ದರು. ರೈತರ ಮಕ್ಕಳ ಶಿಕ್ಷಣಕ್ಕೆ 5 ಸಾವಿರ ಕೋಟಿ ರೂ. ಕಾಯ್ದಿರಿಸುತ್ತೇವೆ ಇಟ್ಟಿದ್ದಾರಾ? ಇನ್ನು ಶಾಸಕರ ಅನುದಾನದ ಬಗ್ಗೆ ಸರ್ಕಾರದ ಬಳಿ ಉತ್ತರವಿಲ್ಲ. ಜೊತೆಗೆ 15ನೇ ಹಣಕಾಸು ಆಯೋಗದಿಂದ 5,498 ಕೋಟಿ ರೂ. ಬರಬೇಕು, ಇವರು ಕೇಂದ್ರದಲ್ಲಿ ಅದನ್ನೂ ಕೇಳಲಿಲ್ಲ ಎಂದು ಸಿದ್ದರಾಮಯ್ಯ ಅವರು ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
Recommended Video