ಸಿಎಂ ಸ್ಥಾನ ದೂರದ ಮಾತು, ಇರುವ ಸ್ಥಾನವನ್ನು ಉಳಿಸಿಕೊಳ್ಳಿ?
ಲೋಕಸಭಾ ಚುನಾವಣೆ ಮುಗಿದಿದೆ. ಕಾಂಗ್ರೆಸ್ ಹೇಳಿಕೊಳ್ಳುವಂತಹ ಸಾಧನೆ ಮಾಡದೆ ಇದ್ದರೂ, ಸಾಧಾರಣ ಸಾಧನೆ ಮಾಡಿದೆ. ಈಗ ರಾಜ್ಯ ರಾಜಕಾರಣದಲ್ಲಿ ಡಿಸಿಎಂ ಸ್ಥಾನದ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಈ ಮಧ್ಯೆ ಸಿದ್ಧರಾಮಯ್ಯ ಬಣ ಹಾಗೂ ಡಿಕೆ ಶಿವಕುಮಾರ್ ಬಣದ ಶಾಸಕರು ತಮ್ಮ ತಮ್ಮ ನಾಯಕರ ಪರ ಬ್ಯಾಟ್ ಮಾಡುತ್ತಿದ್ದಾರೆ.
ಲೋಕಸಭಾ ಚುನಾವಣೆಗಳು ಮುಗಿದ ಬೆನ್ನಲ್ಲೆ ಕರ್ನಾಟಕದ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತದೆ ಎಂಬ ಮಾತಿತ್ತು. ಆದರೆ ಅದು ಸದ್ಯಕ್ಕಂತು ದೂರವಾಗಿದೆ. ಒಂದು ವೇಳೆ ಕಾಂಗ್ರೆಸ್ ದೊಡ್ಡ ಸಾಧನೆ ಮಾಡಿದ್ದರೆ, ಈ ಮಾತು ಸತ್ಯವಾಗುತ್ತಿತ್ತು. ಆದರೆ ಈಗಿನ ರಾಜಕೀಯ ಚಿತ್ರಣವೇ ಬೇರೆ ಇದ್ದು, ದೊಡ್ಡ ಸ್ಥಾನ ಬಿಡಿ ಇರುವ ಸ್ಥಾನವನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.

ಇರುವ ಸ್ಥಾನ ಉಳಿಸಿಕೊಳ್ಳಿ?
ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಇಟ್ಟುಕೊಂಡು ಡಿಕೆಶಿ ಅವರನ್ನು ಹಣಿಯಲು ಬೆಂಬಲಿಗರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಸದ್ಯ ಡಿಕೆಶಿ ಇರುವ ಕುರ್ಚಿಯ ಕಾಲು ಮುರಿಯಲು ಸಿದ್ಧು ಬೆಂಬಲಿಗರು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಲ್ಲದೆ ಈ ಸ್ಥಾನದ ಮೇಲೆ ಸಿಎಂ ಬಣದವರನ್ನು ಕೂರಿಸಲು ರಣ ತಂತ್ರವನ್ನು ಹೆಣೆದುಕೊಳ್ಳಲಾಗಿದೆ. ಹಳೆ ಮೈಸೂರು ಭಾಗದಲ್ಲಿ ತಮ್ಮ ಪ್ರಭಾವ ಬೀರಿ ಮತಗಳನ್ನು ಸೆಳೆಯುವಲ್ಲಿ ವಿಫಲರಾಗಿದ್ದಾರೆ ಎಂದು ಸಿದ್ದರಾಮಯ್ಯ ಬಣ ಹೈಕಮಾಂಡ್ ಮುಂದೆ ಹೈಲೈಟ್ ಮಾಡುವ ಸಾಧ್ಯತೆ ಇದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು
ಡಿಕೆ ಶಿವಕುಮಾರ್ ಅವರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಇದು ಉತ್ತಮ ಅವಕಾಶ ಎಂದು ಮನಗೊಂಡಿರುವ ಸಿಎಂ ನಿಷ್ಠರು ಹೆಚ್ಚಿನ ಡಿಸಿಎಂ ಸ್ಥಾನಗಳನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಇನ್ನು ಸಹಕಾರ ಸಚಿವ ಎಸ್ ಟಿ ಮುಖಂಡ ಕೆ.ಎನ್.ರಾಜಣ್ಣ ಇತ್ತೀಚಿಗೆ ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ, ಸಚಿವ ಸ್ಥಾನ ತ್ಯಜೀಸಲು ಸಿದ್ಧ ಎಂದಿದ್ದರು.

ಕೆಪಿಸಿಸಿ ಗಾದಿಯ ಮೇಲೆ ಸಚಿವ ಸತೀಶ್ ಜಾರಕಿಹೊಳಿ ಕೂಡ ಕಣ್ಣು ನೆಟ್ಟಿದ್ದಾರೆ. ಅಲ್ಲದೆ ತಮ್ಮದೇ ಪ್ರಭಾವ ಬೆಳಸಿ ಲಾಭಿ ಸಹ ನಡೆಸಿದ್ದಾರೆ. ಬೆಂಗಳೂರು ಗ್ರಾಮಂತರ ಲೋಕಸಭಾ ಕ್ಷೇತ್ರದಲ್ಲಿ ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ಅವರ ವಿರುದ್ಧ ವಿರೋಧಿಗಳು ಬೊಟ್ಟು ಮಾಡಿ ತೋರಿಸುವಂತೆ ಆಗಿದೆ.
ಇನ್ನು ಸದ್ಯ ಹೈಕಮಾಂಡ್ ಸಹ ಈ ರೀತಿ ನಿರ್ಧಾರಗಳನ್ನು ಸದ್ಯಕ್ಕೆ ಮಾಡುವಂತಹ ಕೆಲಸ ಮಾಡುವುದು ಡೌಟ್.. ಏಕೆಂದರೆ ಇನ್ನೇನು ಕೆಲವೇ ತಿಂಗಳು ಗಳಲ್ಲಿ ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿದೆ. ಈ ಸಮಯದಲ್ಲಿ ಹೈಕಮಾಂಡ್ ಇಂತಹ ಕಾರ್ಯವನ್ನು ಮಾಡುವುದು ಡೌಟ್..
ಉಪ ಚುನಾವಣೆಯ ಮೇಲೆ ಕಣ್ಣು
ಈಗ ಡಿಕೆ ಶಿವಕುಮಾರ್ ಅವರಿಗೆ ಚನ್ನಪಟ್ಟಣ ಉಪಚುನಾವಣೆಯನ್ನು ಗೆಲ್ಲುವುದು ದೊಡ್ಡ ಟಾಸ್ಕ್ ಆಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಯಾರನ್ನು ಕಣಕ್ಕೆ ಇಳಿಸಲಿದೆ ಎಂಬ ಕುತೂಹಲ ಹೆಚ್ಚಿದೆ. ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಅಖಾಡಕ್ಕೆ ಇಳಿಯಬಹುದು ಎಂಬ ಮಾತುಗಳು ಕೇಳಿ ಬರುತ್ತವೆ. ಅಲ್ಲದೆ ಡಿಕೆ ಸುರೇಶ್ ಈ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಮತ್ತೆ ಸೋಲು ಕಾಣಬಹುದು ಎಂಬ ಉದ್ದೇಶದಿಂದ ಡಿಕೆಶಿ ಸ್ವತಃ ಅಂಗಳ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.












Click it and Unblock the Notifications