ಜಮೀರ್ ಜೆಡಿಎಸ್ ಬಿಟ್ಟಿದ್ಯಾಕೆ, ರೇವಣ್ಣ ಕಂಡುಕೊಂಡ ಸತ್ಯ ಇದೇನಾ?
ಏಳು ಬಂಡಾಯ ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುತ್ತಿರುವುದರ ಬಗ್ಗೆ ಮಾತನಾಡುತ್ತಿದ್ದ ರೇವಣ್ಣ, ಕಾಂಗ್ರೆಸ್ ಪಕ್ಷದಲ್ಲಿ ಡ್ರೈವರ್ ಕೆಲಸ ಖಾಲಿಯಿದೆ ಹಾಗಾಗಿ ಅವರೆಲ್ಲಾ ಆ ಪಕ್ಷಕ್ಕೆ ಸೇರುತ್ತಿದ್ದಾರೆಂದು ಲೇವಡಿ ಮಾಡಿದ್ದಾರೆ.
ಹಾಸನ, ಜುಲೈ 25: ದೇವೇಗೌಡ್ರಾಗಲಿ, ಕುಮಾರಸ್ವಾಮಿಯಾಗಲಿ ಸುಮ್ಮನಿದ್ದರೆ ಒಳ್ಳೆಯದು, ಇಲ್ಲದಿದ್ದರೆ ಅವರ ಬಗ್ಗೆ ಇನ್ನಷ್ಟು ವಿಷಯ ಬಹಿರಂಗ ಪಡಿಸಬೇಕಾದೀತು ಎನ್ನುವ ಜಮೀರ್ ಅಹಮದ್ ಹೇಳಿಕೆಗೆ ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಸರಿಯಾಗಿ ಲೇವಡಿ ಮಾಡಿದ್ದಾರೆ.
ಏಳು ಬಂಡಾಯ ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುತ್ತಿರುವುದರ ಬಗ್ಗೆ ನಗರದಲ್ಲಿ ಸೋಮವಾರ (ಜುಲೈ 24) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರೇವಣ್ಣ, ಕಾಂಗ್ರೆಸ್ ಪಕ್ಷದಲ್ಲಿ ಡ್ರೈವರ್ ಕೆಲಸ ಖಾಲಿಯಿದೆ ಹಾಗಾಗಿ ಅವರೆಲ್ಲಾ ಆ ಪಕ್ಷಕ್ಕೆ ಸೇರುತ್ತಿದ್ದಾರೆಂದು ಲೇವಡಿ ಮಾಡಿದ್ದಾರೆ.
ನಿಮ್ಮನ್ನು ಬೆಳೆಸಿದ ದೇವೇಗೌಡರಿಗೇ ಚಾಲೆಂಜಾ
ತನ್ನದೇ ಶೈಲಿಯಲ್ಲಿ ಬಂಡಾಯ ಶಾಸಕರನ್ನು ಬೆಂಡೆತ್ತಿದ ರೇವಣ್ಣ, ರಾಜಕೀಯ ನಿಂತ ನೀರಲ್ಲ ಅನ್ನೋದು ಈ ಶಾಸಕರಿಗೆ ಗೊತ್ತಾಗುವ ದಿನ ದೂರವಿಲ್ಲ. ಏಳು ಶಾಸಕರಿಗೆ ತಾಕತ್ತಿದ್ದರೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳಲಿ ಎಂದು ಸವಾಲೆಸೆದರು.
ಚಾಮರಾಜಪೇಟೆಯಲ್ಲಿ ಜೆಡಿಎಸ್ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ್ರು, ಜಮೀರ್ ವಿರುದ್ದ ಹರಿಹಾಯ್ದಿದಿದ್ದರು. ಇದಾದ ನಂತರ ಗೌಡ್ರ ಕುಟುಂಬ ಮತ್ತು ಜಮೀರ್ ಮಧ್ಯೆ ಮತ್ತೊಂದು ಸುತ್ತಿನ ವಾಕ್ಸಮರ ಆರಂಭವಾಗಿದೆ.
ನನ್ನ ಕ್ಷೇತ್ರದ ಜನ ನನ್ನನ್ನು ಮನೆಯ ಮಗನಂತೆ ನೋಡುತ್ತಿದ್ದಾರೆ, ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಜಯಗಳಿಸುವುದು ದೂರದ ಮಾತು, ಆ ಪಕ್ಷದ ಅಭ್ಯರ್ಥಿಗೆ ಠೇವಣಿ ಕೂಡಾ ಸಿಗುವುದಿಲ್ಲ ಎಂದು ಜಮೀರ್, ಗೌಡ್ರು ಮತ್ತು ಕುಮಾರಸ್ವಾಮಿಗೆ ಚಾಲೆಂಜ್ ಮಾಡಿದ್ದರು. ರೇವಣ್ಣ, ಏಳು ಬಂಡಾಯ ಶಾಸಕರ ವಿರುದ್ದ ಉದುರಿಸಿದ ರಾಜಕೀಯ ಡೈಲಾಗ್, ಮುಂದೆ ಓದಿ..
ರುಂಡ ಕತ್ತರಿಸುತ್ತೇನೆಂದು ಜಮೀರ್ ಹೇಳಿಕೆ
ಚಾಮರಾಜಪೇಟೆಯಲ್ಲಿ ಜೆಡಿಎಸ್ ಜಯಗಳಿಸಿದರೆ ನಾನು ನನ್ನ ರುಂಡ ಕತ್ತರಿಸುತ್ತೇನೆಂದು ಜಮೀರ್ ಹೇಳುತ್ತಾರೆ. ಅವರ ರುಂಡವನ್ನು ತೆಗೆದುಕೊಂಡು ನಾವೇನು ಮಾಡೋಣ? ಆ ಪಾಪ ನಮಗ್ಯಾಕೆ ಬೇಕು, ಅವರ ರುಂಡವನ್ನು ಅವರೇ ಇಟ್ಟುಕೊಳ್ಳಲಿ - ರೇವಣ್ಣ.
ಅವರ ರುಂಡ ನಮಗ್ಯಾಕೆ
ಜಮೀರ್ ಅವರ ರುಂಡದ ಬಗ್ಗೆ ಮಾತನಾಡುತ್ತಾರೆ, ಇಲ್ಲಿ ನೋಡಿದರೆ ಸಚಿವ ಕಾಗೋಡು ತಿಮ್ಮಪ್ಪ ಕುರಿಯ ರುಂಡವನ್ನೂ ಕಡಿಯದಂತೆ ಕಾನೂನು ರೂಪಿಸಲಿದ್ದಾರೆ. ಏಳು ಬಂಡಾಯ ಶಾಸಕರು ಕಾಂಗ್ರೆಸ್ ಸೇರುವುದರಿಂದ ನಮಗೇನು ನಷ್ಟವಿಲ್ಲ. ಆದರೆ, ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದರೆ ಅವರದ್ದು ಧೈರ್ಯದ ರಾಜಕೀಯ ನಡೆ ಅನ್ನಬಹುದಿತ್ತು - ರೇವಣ್ಣ.
ವೃತ್ತಿಧರ್ಮವನ್ನು ಎಳೆದುತಂದ ರೇವಣ್ಣ
ಜಮೀರ್ ವಿರುದ್ದ ಹರಿಹಾಯಲು ಅವರ ವೃತ್ತಿಧರ್ಮವನ್ನು ಎಳೆದುತಂದ ರೇವಣ್ಣ, ಕಾಂಗ್ರೆಸ್ ಪಕ್ಷದಲ್ಲಿ ಡ್ರೈವರ್ ಕೆಲಸ ಖಾಲಿಯಿದೆ. ಹಾಗಾಗಿ ಏಳೂ ಜನ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ನಮ್ಮಲ್ಲಿ ಅನುಭವೀ ಚಾಲಕರು ಇದ್ದಾರೆ, ಹಾಗಾಗಿ ಅವರೆಲ್ಲಾ ಕಾಂಗ್ರೆಸ್ ನಲ್ಲಿ ಮಿಠಾಯಿ ತಿಂದುಕೊಂಡು ಇರಲಿ - ರೇವಣ್ಣ.
ಏಕಾಂಗಿಯಾಗಿ ಜೆಡಿಎಸ್ ಸ್ಪರ್ಧೆ
ಮುಂದಿನ ಚುನಾವಣೆಯಲ್ಲಿ ಯಾರ ಜೊತೆಯೂ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ದ ಸ್ಪರ್ಧಿಸಲಿದ್ದೇವೆ. ನಮ್ಮ ಕುಟುಂಬದಿಂದ ಯಾರ್ಯಾರು ಸ್ಪರ್ಧಿಸಬೇಕು ಅನ್ನೋದನ್ನಾ ದೇವೇಗೌಡರು ಮತ್ತು ಕುಮಾರಸ್ವಾಮಿ ನಿರ್ಧರಿಸಲಿದ್ದಾರೆ - ರೇವಣ್ಣ.
ಪ್ರಜ್ವಲ್ ವಿಚಾರ ನಾವು ನೋಡಿಕೊಳ್ಳುತ್ಟೇವೆ
ಪ್ರಜ್ವಲ್ ವಿಚಾರದಲ್ಲಿ ಜಮೀರ್ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ನಮ್ಮ ಮನೆಯ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ, ಮೊದಲು ಜಮೀರ್ ಅವರ ಮನೆಯ ವಿಚಾರವನ್ನು ನೋಡಿಕೊಳ್ಳಲಿ ಎಂದು ರೇವಣ್ಣ ಹೇಳಿದ್ದಾರೆ. ಪ್ರಜ್ವಲ್ ಸೂಟ್ಕೇಸ್ ವಿಚಾರದಲ್ಲಿ, ಆ ದೇವರೇ ಪ್ರಜ್ವಲ್ ಬಾಯಿಯಿಂದ ಸತ್ಯ ಹೇಳಿಸಿದ್ದಾನೆಂದು ಜಮೀರ್ ಹೇಳಿದ್ದರು.