ನಾಡಿನ ಪೀಠಾಧಿಪತಿಗಳಿಗೆ ಸಚಿವ ಆಂಜನೇಯ ಹೇಳಿದ್ದೇನು?
ಮಠಗಳಿಗೆ ಅನುದಾನ ನೀಡುವವರು ಇವರೇ, ಪೀಠಾಧಿಪತಿಗಳಿಗೆ ಪಾದಪೂಜೆ, ತುಲಾಭಾರ ಮಾಡುವವರು ಇವರೇ, ಅವರಿಂದ ಸಲಹೆ ಮಾರ್ಗದರ್ಶನ ಪಡೆಯುವವರು ಇವರೇ, ಜೊತೆಗೆ ಸ್ವಾಮೀಜಿಗಳಿಗೆ ಕಿವಿಮಾತನ್ನು ಹೇಳುವವರು ಇದೇ ನಮ್ಮ ರಾಜಕೀಯ ಧುರೀಣರು.
ಮಾಜಿ ಸಿಎಂ ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯ ಐಡಿಯಾಗೆ ಹೊಸ ಲೇಪನ ನೀಡಿ, ಅದನ್ನು ಅನುಸರಿಸಿ ಕೆಲ ಸಮುದಾಯಗಳಲ್ಲಿ ಜನಮನ್ನಣೆ ಗಳಿಸುತ್ತಿರುವ ಸಮಾಜಕಲ್ಯಾಣ ಸಚಿವ ಆಂಜನೇಯ ನಾಡಿನ ಸಮಸ್ತ ಪೀಠಾಧಿಪತಿಗಳಿಗೊಂದು ಸಂದೇಶ ರವಾನಿಸಿದ್ದಾರೆ. (ದೈವ ಭಕ್ತರಾಗಿದ್ದರೆ ಕೋತಿ ಎನ್ನುವ ಹೆಸರು ಇರುತ್ತಿತ್ತು)
ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರ 'ಮಹತ್ವಾಕಾಂಕ್ಷೆಯ ಸಿಎಂ' ಪಟ್ಟಕ್ಕಾಗಿ ನಡೆಯುತ್ತಿರುವ ಮುಸುಕಿನ ಗುದ್ದಾಟ ಮತ್ತು ಸದ್ಯ ಚರ್ಚೆಯಲ್ಲಿರುವ 'ದಲಿತ ಸಿಎಂ'ವಿಚಾರದ ಬಗ್ಗೆ ಆಂಜನೇಯ, ನಾಡಿನ ಸಮಸ್ತ ಪೀಠಾಧಿಪತಿಗಳಿಗೊಂದು ಕಿವಿಮಾತೊಂದನ್ನು ಹೇಳಿದ್ದಾರೆ.
ಮುಖ್ಯಮಂತ್ರಿಗಳು ಯಾರಾಗಬೇಕು ಎನ್ನುವ ಚಿಂತೆ ಸ್ವಾಮೀಜಿಗಳಿಗೆ ಯಾಕೆ ಎಂದು ಸಚಿವ ಆಂಜನೇಯ ಪ್ರಶ್ನಿಸಿದ್ದಾರೆ. ಸಚಿವರ ಈ ಹೇಳಿಕೆ ಒಂದು ರೀತಿಯಲ್ಲಿ ಸ್ವಾಮೀಜಿಯಾದವರು ಪೂಜೆ, ಪುನಸ್ಕಾರ, ದಾನಧರ್ಮ, ವಿದ್ಯಾದಾನ, ಅನ್ನದಾನ ಮಾಡಿಕೊಂಡಿರಲಿ ಎನ್ನುವ ಅರ್ಥದಲ್ಲಿ ಇದ್ದರೂ ಇರಬಹುದು.
ಚಿತ್ರದುರ್ಗದ ಕಾರ್ಯಕ್ರಮದಲ್ಲಿ ಸಚಿವರು ಹೇಳಿದ್ದೇನು?

ಮಠಾಧೀಶರ ಹಸ್ತಕ್ಷೇಪ ಹೊಸದಲ್ಲ
ರಾಜ್ಯ ರಾಜಕಾರಣದಲ್ಲಿ ಅಥವಾ ಪ್ರಮುಖ ರಾಜಕೀಯ ನಿರ್ಧಾರಗಳಲ್ಲಿ ಸ್ವಾಮೀಜಿಗಳ ಹಸ್ತಕ್ಷೇಪ ನಮ್ಮಲ್ಲಿ ಹೊಸದಲ್ಲ. ಹಿಂದೆಯೂ ನಡೆದುಕೊಂಡು ಬಂದಿದೆ, ಮುಂದೆಯೂ ನಡೆದುಕೊಂಡು ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.

ಚಿತ್ರದುರ್ಗದ ಕಾರ್ಯಕ್ರಮದಲ್ಲಿ ಸಚಿವ ಆಂಜನೇಯ
ಯಾರು ಸಿಎಂ ಆಗಬೇಕು ಎನ್ನುವುದನ್ನು ನಾವು (ಕಾಂಗ್ರೆಸ್) ನಿರ್ಧರಿಸುತ್ತೇವೆ. ಸ್ವಾಮೀಜಿಗಳು ತಮಗಿರುವ ಬೇಲಿಯನ್ನು ಮೀರಿ ಮಾತನಾಡಬಾರದು ಎಂದು ಬೇಸರ ಮಿಶ್ರಿತ ಸಂದೇಶವನ್ನು ಸಚಿವ ಆಂಜನೇಯ ಗುರುವಾರ (ಫೆ 26) ಚಿತ್ರದುರ್ಗದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಶ್ರೀಗಳು ಆಶೀರ್ವಚನ ಮಾಡುತ್ತಿರಲಿ
ಸುಖಾಸುಮ್ಮನೆ ಶ್ರೀಗಳು ರಾಜಕೀಯ ಪಕ್ಷದ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುವುದು ತರವಲ್ಲ. ಅಲ್ಲದೇ, ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸುವ ಹಕ್ಕನ್ನು ಭಕ್ತರು ಶ್ರೀಗಳಿಗೆ ನೀಡಿದ್ದಾರೆಯೇ ಎಂದು ಸಚಿವ ಆಂಜನೇಯ ಪ್ರಶ್ನಿಸಿದ್ದಾರೆ.

ನಮಗೆ ಬೇಕಿದ್ದಲ್ಲಿ ನಾವೇ ಬರುತ್ತೇವೆ
ಶ್ರೀಗಳು ಪೂಜೆ, ಪುನಸ್ಕಾರ ಮಾಡಿಕೊಂಡಿರಲಿ, ಭಕ್ತರಿಗೆ ಆಶೀರ್ವಚನ ನೀಡುತ್ತಿರಲಿ. ನಾವು ತಪ್ಪು ದಾರಿ ಹಿಡಿದರೆ ನಮ್ಮನ್ನು ತಿದ್ದಿ, ಬುದ್ದಿ ಹೇಳಲಿ ಎಂದು ಸಚಿವರು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಖಾರವಾಗಿ ಉತ್ತರಿಸಿದ್ದಾರೆ.

ಸಚಿವರ ಹೇಳಿಕೆಗೆ ಕಾರಣ
ತುಮಕೂರಿನಲ್ಲಿ ಬುಧವಾರ (ಫೆ 25) ನಡೆದ ಸಮಾರಂಭವೊಂದರಲ್ಲಿ ರುದ್ರಮುನಿ ಶ್ರೀಗಳು, ದಲಿತರು ರಾಜ್ಯದ ಸಿಎಂ ಆಗಬೇಕು. ಪರಮೇಶ್ವರ್ ಆ ಸ್ಥಾನಕ್ಕೆ ಅರ್ಹರಾಗಿದ್ದಾರೆ, ಅದು ನಮ್ಮೆಲ್ಲರ ಆಸೆ ಕೂಡಾ ಎಂದು ಹೇಳಿದ್ದರು. ಸಚಿವ ಆಂಜನೇಯ ಶ್ರೀಗಳ ಹೇಳಿಕೆಯನ್ನು ಉಲ್ಲೇಖಿಸಿ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.












Click it and Unblock the Notifications