ಸಂತೋಷ್ ಲಾಡ್ vs ಪ್ರಹ್ಲಾದ ಜೋಶಿ ಗುದ್ದಾಟ: ಹುಬ್ಬಳ್ಳಿ - ಧಾರವಾಡ ಪಾಲಿಕೆಯ ಮಹತ್ವದ ಕೆಲಸ ಸ್ಥಗಿತ!
Hubballi-Dharwad Corporation: ಕರ್ನಾಟಕದ ಮಹಾನಗರ ಪಾಲಿಕೆಗಳಲ್ಲಿ ಹುಬ್ಬಳ್ಳಿ - ಧಾರವಾಡ ಪಾಲಿಕೆಯೂ ಒಂದಾಗಿದೆ. ಈ ಪಾಲಿಕೆ ಸಣ್ಣದಾಗಿದ್ದರೂ ಹಲವು ಅತ್ಯುತ್ತಮ ಕಾರ್ಯಗಳಿಂದ ಜನ ಮನ್ನಣೆ ಗಳಿಸಿದೆ. ಅಚ್ಚರಿಯ ವಿಷಯವೆಂದರೆ ಬೆಂಗಳೂರು ಸಹ ಸ್ವಚ್ಛತೆಯ ವಿಷಯದಲ್ಲಿ ಮಾಡದ ಸಾಧನೆ ಹಾಗೂ ಪ್ರಗತಿಯನ್ನು ಈ ಪಾಲಿಕೆ ಮಾಡಿದೆ. ಆದರೆ, ಅವಳಿ ನಗರ ಖ್ಯಾತಿಯ ಹುಬ್ಬಳ್ಳಿ - ಧಾರವಾಡದಲ್ಲಿ ಮಹತ್ವದ ಕೆಲಸವೊಂದು ನಿಂತಲ್ಲೇ ನಿಂತಿದೆ. ಹಲವು ತಿಂಗಳುಗಳಿಂದ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ನೂತನ ಸಭಾಭವನ ಕಟ್ಟಡ ನಿರ್ಮಾಣ ಕಾಮಗಾರಿ ಇನ್ನೇನು ಆರಂಭಗೊಂಡಿತು ಎನ್ನುವಷ್ಟರಲ್ಲೇ ಮತ್ತೆ ಸ್ಥಗಿತಗೊಂಡಿದೆ.
ಈಗ ಇರುವ ಹುಬ್ಬಳ್ಳಿ - ಧಾರವಾಡ ಪಾಲಿಕೆಯ ಸಭಾಂಗಣವು ಪಾಲಿಕೆಯ ಮಾಸಿಕ ಸಭೆಗಳನ್ನು ನಡೆಸುವಷ್ಟು ಸುವ್ಯವಸ್ಥಿತವಾಗಿಲ್ಲ. ಇನ್ನು ಜೂನ್ ಕೊನೆಯ ವಾರದಲ್ಲಿ ಆರಂಭವಾಗಿದ್ದ 40 ಕೋಟಿ ರೂಪಾಯಿ ವೆಚ್ಚ ಕಾಮಗಾರಿಗೆ ಸಾಕಷ್ಟು ವಿಳಂಬವಾಗುತ್ತಿದೆ. ಅಡಿಪಾಯಕ್ಕಾಗಿ 15 ಅಡಿ ಆಳ ತಗ್ಗು ತೋಡಲಾಗಿತ್ತು. ಆದರೆ, ಜುಲೈ ತಿಂಗಳಿನಿಂದ ಆರಂಭವಾದ ಮಳೆಯಿಂದ ಅಡಿಪಾಯಕ್ಕೆ ತೆಗೆಯಲಾದ ತಗ್ಗು ಪ್ರದೇಶದಲ್ಲಿ ಸಂಪೂರ್ಣವಾಗಿ ನೀರು ಆವರಿಸಿ ಸಮಸ್ಯೆ ಆಗಿತ್ತು. ಹೀಗಾಗಿ, ಕಾಮಗಾರಿ ಆರಂಭವಾದ ಎರಡೇ ವಾರದಲ್ಲಿ ಅದು ಸ್ಥಗಿತಗೊಂಡಿತ್ತು.

ಈ ಬೆಳವಣಿಗೆ ನಡೆದು ಇದೀಗ ಎರಡು ತಿಂಗಳುಗಳೇ ಕಳೆದಿವೆ. ಮಳೆ ನಿಂತು ಎರಡು ತಿಂಗಳುಗಳೇ ಕಳೆದರೂ, ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಮೊದಲ ಹಂತದಲ್ಲಿ ಅಂದಾಜು 5 ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಭಿಸಲಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಸಭಾಭವನ ಕಟ್ಟಡದ ನಿರ್ಮಾಣ ಕಾಮಗಾರಿ ಮಳೆಯಿಂದಾಗಿ ಸ್ಥಗಿತವಾಗಿದೆ. ಜಿ ಪ್ಲಸ್ 3 ಮಾದರಿಯ 14 ಸಾವಿರ ಚೆದರ ಅಡಿ ವಿಸ್ತೀರ್ಣದ ಕಟ್ಟಡದ ಅಡಿಪಾಯಕ್ಕಾಗಿ 15 ಅಡಿಯಷ್ಟು ಆಳವನ್ನು ತೆಗೆಯಲಾಗಿತ್ತು.
ಪ್ರಾರಂಭದ ಎರಡು ವಾರ ಆದಷ್ಟು ಕೆಲಸ ಬಿಟ್ಟರೆ ಬೇರೆ ಏನೂ ಆಗಿಲ್ಲ. ಸಭಾಭವನ ನಿರ್ಮಾಣಕ್ಕೆ ಅಗತ್ಯವಾಗಿದೆ. ಆದರೆ, ಹು-ಧಾ ಮಹಾನಗರ ಪಾಲಿಕೆಯ ನೂತನ ಸಭಾಭವನ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿದೆ. ಅಲ್ಲದೇ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಹಳೇ ಜಲ ಮಂಡಳಿ ಕಚೇರಿ ಕೊಠಡಿಯನ್ನು ನೆಲಸಮಗೊಳಿಸಲಾಗಿದೆ. ಇಲ್ಲಿ ಜಲಮಂಡಳಿಯ ಕತೆ ಬೇರೆಯೇ ಆಗಿದೆ. ಇಲ್ಲಿ ನೀರಿನ ಸಮಸ್ಯೆ ಸಹ ಪರಿಹಾರವಾಗಿಲ್ಲ.

ಇನ್ನು ಮಹಾನಗರ ಪಾಲಿಕೆಯ ನಿವೃತ್ತ ನೌಕರರ ಸಂಘದ ಕಟ್ಟಡ ಹಾಗೂ ಇನ್ನೊಂದು ಬದಿಯಲ್ಲಿರುವ ಮಹಾನಗರ ಪಾಲಿಕೆ ನೌಕರರ ಸಂಘದ ಕಟ್ಟಡ ಕೆಡವುವಲ್ಲಿ ವಿಳಂಬವಾಗಿದೆ. ಈ ಎರಡೂ ಸಂಘಗಳನ್ನು ಚಿಟಗುಪ್ಪಿ ಆಸ್ಪತ್ರೆಯ ಹಳೇ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಕಟ್ಟಡ ತೆರವು ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ. ನೂತನ ಸಭಾಭವನ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಸ್ಥಳಾವಕಾಶಕ್ಕಾಗಿ ಬ್ರಿಟಿಷ್ ಕಾಲದ ಸಾಮಾನ್ಯ ಆಡಳಿತ ಶಾಖೆಯ (ಜಿ.ಎ. ಬ್ರಾಂಚ್) ಕಟ್ಟಡದ ವ್ಯಾಪ್ತಿಯಲ್ಲಿ ಕಾಮಗಾರಿ ನಡೆದಿದೆ.
ಸಾಮಾನ್ಯ ಆಡಳಿತ ಶಾಖೆ ಕಟ್ಟಡಕ್ಕೆ ಹೊಂದಿಕೊಂಡು ಹಿಂಭಾಗದಲ್ಲಿ ಸಭಾಭವನ ನಿರ್ಮಾಣಕ್ಕೆ ತಕ್ಕಂತೆ ದೊಡ್ಡ ಪ್ರಮಾಣದಲ್ಲಿ ನೆಲ ಅಗೆಯಲಾಗಿದೆ. ಇಲ್ಲಿಯವರೆಗೆ ಸಾಮಾನ್ಯ ಆಡಳಿತ ಶಾಖೆ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ. ಈ ಕಟ್ಟಡದಲ್ಲಿ ಸಾಮಾನ್ಯ ಆಡಳಿತ ಸಹಾಯಕ ಆಯುಕ್ತ, ಕಾನೂನು ಸಲಹೆಗಾರರು ಹಾಗೂ ಮಾರುಕಟ್ಟೆ ವಿಭಾಗ ಪ್ರಮುಖ ಕಚೇರಿಗಳಿವೆ. ಈ ಕಚೇರಿಗಳಲ್ಲಿ ಇಂದಿಗೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಬ್ರಿಟಿಷ್ ಕಾಲದ ಕಟ್ಟಡವಾಗಿರುವುದರಿಂದ ಸ್ಥಿರತೆ ಪರೀಕ್ಷೆಗೂ ಪಾಲಿಕೆ ಮುಂದಾಗಿದೆ.

ಶೀಘ್ರವೇ ಕಟ್ಟಡ ಕಾಮಗಾರಿ ಆರಂಭ ಮಾಡಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ ಹೇಳಿದ್ದಾರೆ. ಈ ಕಟ್ಟಡ ನೆಲಸಮಗೊಳಿಸಲು ಸರ್ಕಾರದಿಂದ ಒಪ್ಪಿಗೆ ಪಡೆದಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾರ್ಚ್ 10ರಂದು ಆಯೋಜಿಸಿದ್ದ ಪಾಲಿಕೆಯ ನೂತನ ಸಭಾಭವನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಿಂದ ಮುನಿಸಿಕೊಂಡು ಹೊರ ನಡೆದಿದ್ದರು.
ಬಳಿಕ ಕೇಂದ್ರ ಸಚಿವ ಪಲ್ಲಾದ ಜೋಶಿ ಅವರು ಅಂದೇ ಶಂಕುಸ್ಥಾಪನೆ ನೆರವೇರಿಸಿದ್ದರು. ಸಾಮಾನ್ಯ ಆಡಳಿತ ಶಾಖೆ ಕಟ್ಟಡ ನೆಲಸಮಗೊಳಿಸಿಯೇ ಸಭಾಭವನ ಕಟ್ಟಡ ನಿರ್ಮಾಣಕ್ಕೆ ವಿನ್ಯಾಸ, ಡಿಪಿಆರ್ ಸಿದ್ಧಪಡಿಸಲಾಗಿದೆ. ಸಾಮಾನ್ಯ ಆಡಳಿತ ಶಾಖೆ ಕಡ ನೆಲಸಮಗೊಳಿಸಲು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಠರಾವು ಸ್ವೀಕರಿಸಲಾಗಿದೆ. ಆದರೆ, ಈಗಾಗಲೇ ಈ ಬಗ್ಗೆ ಹುಬ್ಬಳ್ಳಿ - ಧಾರವಾಡ ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಕಮತಿ ಸಹ ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ಯಾವಾಗ ಕಾಮಗಾರಿ ಆರಂಭ ಆಗುತ್ತದೆ ಎನ್ನುವುದು ಇನ್ನೂ ಗೊಂದಲಮಯವಾಗಿದೆ.












Click it and Unblock the Notifications