ಮಹಿಳಾ ಟಿ20 ವಿಶ್ವಕಪ್ 2026; ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಜೆಮಿಮಾಗೆ ವಾಚ್ಮ್ಯಾನ್ ಎಚ್ಚರಿಕೆ ಸಂದೇಶ
Jemimah Rodrigues: ಈಗಾಗಲೇ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಿದ್ದು, ಭಾನುವಾರ (ಜೂನ್ 14) ಟೀಂಮ್ ಇಂಡಿಯಾವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಆರಂಭಿಸುತ್ತಿದೆ. ಈ ಹೈವೋಲ್ಟೇಜ್ ಸಮರಕ್ಕೂ ಮುನ್ನ ಭಾರತ ತಂಡದ ಸ್ಟಾರ್ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ತಮ್ಮ ಅಪಾರ್ಟ್ಮೆಂಟ್ ವಾಚ್ಮ್ಯಾನ್ ನೀಡಿದ ಎಚ್ಚರಿಕೆ ಸಂದೇಶವನ್ನು ರಿವೀಲ್ ಮಾಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಭಾರತ-ಪಾಕ್ ಪಂದ್ಯದ ಸುತ್ತಲಿರುವ ಕೆಲವು ಒತ್ತಡದ ಬಗ್ಗೆ ಜೆಮಿಮಾ ರೊಡ್ರಿಗಸ್ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಈ ಆರಂಭಿಕ ಪಂದ್ಯದ ಕುರಿತು ಮಾತನಾಡಿರುವ ಅವರು, ಈ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಹಣಾಹಣಿಯು ಇತರ ಯಾವುದೇ ಪಂದ್ಯಗಳಿಗಿಂತ ಭಿನ್ನವ ಮತ್ತು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ.

ಜೆಮಿಮಾ ರೊಡ್ರಿಗಸ್ ಹೇಳಿದ್ದೇನು?
ತಾವು ಆಡಿದ ಮೊದಲ ಭಾರತ-ಪಾಕಿಸ್ತಾನ ಪಂದ್ಯದ ನೆನಪುಗಳನ್ನು ಹಂಚಿಕೊಂಡ ಜೆಮಿಮಾ, 'ನಾನು ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಆಡಲು ಸಜ್ಜಾಗಿದ್ದಾಗ ಡ್ರೆಸ್ಸಿಂಗ್ ರೂಮ್ನಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್ ನಮ್ಮೊಂದಿಗೆ ಮಾತನಾಡಿದ್ದರು. ನಾವು ಸತ್ಯವನ್ನು ನಿರಾಕರಿಸುವುದು ಬೇಡ. ಹೊರಗಿನಿಂದ ಈ ಪಂದ್ಯಕ್ಕೆ ಭಾರಿ ಒತ್ತಡ ಇರುವುದು ನಿಜ. ಏಕೆಂದರೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಇತಿಹಾಸ ಏನೆಂಬುದು ನಮಗೆ ಗೊತ್ತು. ಅಭಿಮಾನಿಗಳು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾರೆ ಎಂಬ ಅರಿವೂ ನಮಗಿದೆ ಎಂದು ಹರ್ಮನ್ ಧೈರ್ಯ ತುಂಬಿದ್ದರು,' ಎಂದು ನೆನಪಿಸಿಕೊಂಡಿದ್ದಾರೆ.
ವಾಚ್ಮನ್ ನೀಡಿದ ಎಚ್ಚರಿಕೆ ಏನು?
ಭಾರತದಲ್ಲಿ ಈ ಪಂದ್ಯದ ಕ್ರೇಜ್ ಎಷ್ಟಿರುತ್ತದೆ ಎಂಬುದಕ್ಕೆ ತಮ್ಮ ವೈಯಕ್ತಿಕ ಜೀವನದ ಉದಾಹರಣೆಯೊಂದನ್ನು ಜೆಮಿಮಾ ನೀಡಿದ್ದಾರೆ. 'ನನ್ನ ಅಪಾರ್ಟ್ಮೆಂಟ್ನ ವಾಚ್ಮನ್ ಕೂಡ ನನ್ನ ಬಳಿ ಬಂದು ಅಮ್ಮಾವ್ರೇ.. ನೀವು ಯಾರ ವಿರುದ್ಧ ಬೇಕಾದರೂ ಸೋತು ಬನ್ನಿ, ಆದರೆ ಪಾಕಿಸ್ತಾನದ ವಿರುದ್ಧ ಮಾತ್ರ ಯಾವುದೇ ಕಾರಣಕ್ಕೂ ಸೋಲಬಾರದು ಎಂದು ಹೇಳುತ್ತಿರುತ್ತಾರೆ. ಜನರು ಕ್ರಿಕೆಟ್ ಅನ್ನು ಅಷ್ಟೊಂದು ಪ್ರೀತಿಸುವುದರಿಂದ ಮತ್ತು ಈ ಪೈಪೋಟಿಯನ್ನು ಇಷ್ಟಪಡುವುದರಿಂದ ಇಂತಹ ಒತ್ತಡಗಳು ಸಹಜವಾಗಿಯೇ ಇರುತ್ತವೆ,' ಎಂದು ಜೆಮಿಮಾ ಹೇಳಿದ್ದಾರೆ.
ಟಿ20 ವಿಶ್ವಕಪ್ ಗೆಲ್ಲಲು ಭರ್ಜರಿ ತಯಾರಿ
ಪಂದ್ಯದ ಸುತ್ತ ಎಷ್ಟೇ ಒತ್ತಡ ಮತ್ತು ಉತ್ಸಾಹವಿದ್ದರೂ ಭಾರತ ತಂಡದ ಪ್ರಮುಖ ಗುರಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಮುಡುಗೇರಿಸಿಕೊಳ್ಳುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದಕ್ಕಾಗಿ ತಂಡ ಸಜ್ಜಾಗಿದೆ ಎಂದು ತಿಳಿಸಿದ್ದಾರೆ. 'ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವುದನ್ನು ನಾವು ಕಣ್ಣುಮುಚ್ಚಿ ಕಲ್ಪಿಸಿಕೊಳ್ಳುತ್ತೇವೆ. ನಮ್ಮ ತಂಡ ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದೇವೆ,' ಎಂದು ಹೇಳಿದ್ದಾರೆ.
'ನಾವು ಯಾವುದನ್ನಾದರೂ ದೀರ್ಘಕಾಲದವರೆಗೆ ದೃಢವಾಗಿ ಮನಸ್ಸಿನಲ್ಲಿ ಕಂಡರೆ, ನಮ್ಮ ಹೆಜ್ಜೆಗಳು ಆ ದಿಕ್ಕಿನತ್ತಲೇ ಸಾಗುತ್ತವೆ ಎಂದು ನಾವು ನಂಬುತ್ತೇವೆ. ಇದು ನಮ್ಮ ತಂಡದ ಪ್ರಮುಖ ಸೂತ್ರವಾಗಿದೆ. ಕಳೆದ 2025ರ ಏಕದಿ ವಿಶ್ವಕಪ್ ವೇಳೆಯೂ ನಾವು ಇದನ್ನೇ ಅನುಸರಿಸಿದ್ದೆವು. ಈಗಿನ ಮುಖ್ಯ ಕೋಚ್ ಅಮೋಲ್ ಮಜುಂದಾರ್ ಸರ್ ಕೂಡ ಇಲ್ಲಿ ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಿದ್ದಾರೆ,' ಎಂದಿದ್ದಾರೆ.
ಒತ್ತಡ ನಿಭಾಯಿಸಲು ಕಠಿಣ ಸಿದ್ಧತೆ
'ಮೈದಾನದಲ್ಲಿ ಎದುರಾಗುವ ಕಠಿಣ ಸವಾಲುಗಳು ಮತ್ತು ಒತ್ತಡಗಳನ್ನು ನಿಭಾಯಿಸಲು ಭಾರತ ತಂಡವು ನೆಟ್ಸ್ನಲ್ಲಿ ಕಠಿಣ ಅಭ್ಯಾಸ ನಡೆಸಿದೆ. ಇತ್ತೀಚಿನ ಪಂದ್ಯಗಳಲ್ಲಿ ಅನುಭವಿಸಿದ ಸೋಲುಗಳಿಂದ ತಂಡವು ಉತ್ತಮ ಪಾಠಗಳನ್ನು ಕಲಿತಿದೆ,' ಎಂದು ಟೀಮ್ ಇಂಡಿಯಾ ಸ್ಟಾರ್ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಅವರು ತಿಳಿಸಿದ್ದಾರೆ.
'ಮುಖ್ಯ ಕೋಚ್ ಅಮೋಲ್ ಮಜುಂದಾರ್ ಅವರು ಕೂಡ ಆಟಗಾರರಿಗೆ ಯಾವುದೇ ನಿರ್ದಿಷ್ಟ ಎದುರಾಳಿ ಅಥವಾ ಆಟಗಾರ್ತಿಯ ಬಗ್ಗೆ ಅತಿಯಾಗಿ ಯೋಚಿಸದಂತೆ ಸೂಚಿಸಿದ್ದಾರೆ. ಟಿ20ಯಂತಹ ಪಂದ್ಯಗಳನ್ನು ಆಡುವಾಗ ಮೈದಾನದಲ್ಲಿ ತಾಳ್ಮೆಯಿಂದ ಇರುವುದು ಅತ್ಯಂತ ಮುಖ್ಯ ಅಂತಲೂ ಅವರು ತಂಡಕ್ಕೆ ಮಾರ್ಗದರ್ಶನ ನೀಡಿದ್ದಾರೆ,' ಎಂದು ತಿಳಿಸಿದ್ದಾರೆ. ಇನ್ನೂ ಉತ್ತಮ ಆಟಗಾರ್ತಿಯರನ್ನ ಒಳಗೊಂಡ ಭಾರತ ತಂಡವು ಈ ಬಾರಿ ಭರ್ಜರಿ ಪ್ರದರ್ಶನ ನೀಡಿ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ವಿಶ್ವಸದಲ್ಲಿದೆ.












Click it and Unblock the Notifications