ಕೆಪಿಸಿಸಿಗೆ ಸಲೀಂ ಅಹಮದ್: ಅಚ್ಚರಿ ಆಯ್ಕೆಯ ಹಿಂದೆ ಪ್ರಭಾವೀ ಕೈ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಗೆ ಮೂರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಈಗಾಗಲೇ ಕಾರ್ಯಾಧ್ಯಕ್ಷರಾಗಿರುವ ಈಶ್ವರ್ ಖಂಡ್ರೆಯವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಲಾಗಿದೆ.
ಇನ್ನೆರಡು ಹೆಸರು ಸತೀಶ್ ಜಾರಕಿಹೊಳಿ ಮತ್ತು ಸಲೀಂ ಅಹಮದ್. ಕರ್ನಾಟಕ ಕಾಂಗ್ರೆಸ್ ವಲಯದಲ್ಲಿ ಅತ್ಯಂತ ಅಚ್ಚರಿಗೆ ಕಾರಣವಾಗಿದ್ದು ಸಲೀಂ ಅಹಮದ್ ಅವರ ಹೆಸರು. ಇದುವರೆಗಿನ ಕೆಪಿಸಿಸಿ ಬೆಳವಣಿಗೆಯಲ್ಲಿ ಎಲ್ಲೂ ಸಲೀಂ ಹೆಸರು ಕೇಳಿ ಬರುತ್ತಿರಲಿಲ್ಲ.
ಕೆಪಿಸಿಸಿಗೆ ಡಿ.ಕೆ.ಶಿವಕುಮಾರ್ ಬಾಸ್: ಪತರುಗುಟ್ಟಿದ ಬಿಜೆಪಿ
ಈ ಹಿಂದೆ, ಹಲವು ಬಾರಿ ಸಲೀಂ ಅಹಮದ್ ಅವರನ್ನು, ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಡೆಗಣಿಸಿದ್ದ ಕಾಂಗ್ರೆಸ್, ಈ ಬಾರಿ, ಕಾರ್ಯಾಧ್ಯಕ್ಷ ಹುದ್ದೆಯನ್ನು ನೀಡಿದ್ದು ಹಲವರ ಹುಬ್ಬೇರುವಂತೆ ಮಾಡಿದೆ.
ಸಾತನೂರು ಟು ಕೆಪಿಸಿಸಿ : ಡಿಕೆಶಿ ರಾಜಕಾರಣ & 'ಆನೆ ನಡಿಗೆ'
ಒಂದು ಸಮುದಾಯವನ್ನು ತೃಪ್ತಿಗೊಳಿಸಲು ಕಾಂಗ್ರೆಸ್, ಸಲೀಂ ಅಹಮದ್ ಅವರನ್ನು ಆಯ್ಕೆ ಮಾಡಿದೆ ಎಂದು ಹೇಳಲಾಗುತ್ತಿದ್ದರೂ, ಸಲೀಂ ಆಯ್ಕೆಯ ಹಿಂದೆ, ಸ್ಪಷ್ಟವಾಗಿ ಹೈಕಮಾಂಡ್ ಒಬ್ಬರ ಶಿಫಾರಸಿಗೆ ಮಣೆಹಾಕಿದೆ ಎಂದೇ ಹೇಳಲಾಗುತ್ತಿದೆ.
ಹಾವೇರಿ ಲೋಕಸಭಾ ಕ್ಷೇತ್ರ
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಲೀಂ ಅಹಮದ್, ಹಾವೇರಿ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಇದಕ್ಕಾಗಿ ಸಾಧ್ಯವಾದ ಎಲ್ಲಾ ಪ್ರಯತ್ನವನ್ನೂ ಅವರು ಮಾಡಿದ್ದರು. ಆದರೆ, ಕೊನೆಯ ಗಳಿಗೆಯಲ್ಲಿ ಹೈಕಮಾಂಡ್, ಡಿ.ಆರ್.ಪಾಟೀಲ್ ಅವರಿಗೆ ಟಿಕೆಟ್ ನೀಡಿತ್ತು. ಬಿಜೆಪಿಯ ಶಿವಕುಮಾರ್ ಉದಾಸಿ, ಪಾಟೀಲ್ ಅವರನ್ನು 140,882 ಮತಗಳ ಅಂತರದಿಂದ ಸೋಲಿಸಿದ್ದರು.
ಶಿವಾಜಿನಗರ ಕ್ಷೇತ್ರದ ಟಿಕೆಟ್
ಇದಾದ ನಂತರ ಹದಿನೈದು ಕ್ಷೇತ್ರಗಳ ಅಸೆಂಬ್ಲಿಗಳ ಉಪಚುನಾವಣೆಯ ವೇಳೆ, ಸಲೀಂ ಅಹಮದ್, ಶಿವಾಜಿನಗರ ಕ್ಷೇತ್ರದ ಟಿಕೆಟ್ ಬಯಸಿದ್ದರು. ಅಲ್ಲೂ, ಸಿದ್ದರಾಮಯ್ಯನವರ ಕೈಮೇಲಾಗಿ, ಅವರ ಆಪ್ತ ರಿಜ್ವಾನ್ ಅರ್ಷದ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ರಿಜ್ವಾನ್, ಸಲೀಂ ಅಹಮದ್ ಮತ್ತು ನಜೀರ್ ಅಹಮದ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು.
ರಾಷ್ಟ್ರೀಯ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿದ್ದ ಸಲೀಂ ಅಹಮದ್
1993-98ರ ಅವಧಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿದ್ದ ಸಲೀಂ ಅಹಮದ್, ಹೈಕಮಾಂಡ್ ವಲಯದಲ್ಲಿ ಉತ್ತಮ ಬಾಂಧ್ಯವ್ಯವನ್ನು ಹೊಂದಿದ್ದವರು. ಆ ವೇಳೆ, ಕೆ.ಸಿ.ವೇಣುಗೋಪಾಲ್, ಕೇರಳ ವಿದ್ಯಾರ್ಥಿ ಘಟಕದ ಮುಖ್ಯಸ್ಥರಾಗಿದ್ದರು. ಇವರಿಬ್ಬರ ನಡುವೆ ಉತ್ತಮ ಒಡನಾಟ, ಅಂದಿನಿಂದಲೂ ಇತ್ತು.
ಕೆ.ಸಿ.ವೇಣುಗೋಪಾಲ್ ಕೈ
ಸಲೀಂ ಅಹಮದ್ ಈ ಹಿಂದೆ ಟಿಕೆಟ್ ಬಯಸಿದ್ದರೂ, ಅವರಿಗೆ ಪಕ್ಷ ಟಿಕೆಟ್ ನೀಡಲಿಲ್ಲ. ಹಾಗಾಗಿ, ಕಾರ್ಯಾಧ್ಯಕ್ಷರನ್ನಾಗಿ ಅವರನ್ನು ಆಯ್ಕೆ ಮಾಡಬೇಕು ಎನ್ನುವ ವೇಣುಗೋಪಾಲ್ ಒತ್ತಡ ವರ್ಕೌಟ್ ಆಗಿದೆ. ಹಾಗಾಗಿಯೇ, ಸಲೀಂ ಅಹಮದ್ ಗೆ ಈ ಹುದ್ದೆ ಲಭಿಸಿದೆ ಎಂದು ಹೇಳಲಾಗುತ್ತಿದೆ.