ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವರೇ : ಆರೆಸ್ಸೆಸ್
ಹುಬ್ಬಳ್ಳಿ, ನವೆಂಬರ್, 06: ದೇಶದಲ್ಲಿ ಜನಸಂಖ್ಯೆ ಅಸಮಾನತೆಯಿಂದ ಹಿಂದೂಗಳು ಅಲ್ಪಸಂಖ್ಯಾತರಾಗುವ ಭೀತಿ ಎದುರಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (rss) ಕರ್ನಾಟಕ ಉತ್ತರ ಪ್ರಾಂತ ಕಾರ್ಯನಿರ್ವಾಹಕ ಅರವಿಂದ ರಾವ್ ದೇಶಪಾಂಡೆ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಸಂಘದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ ರಾವ್ ದೇಶಪಾಂಡೆ ಅವರು, 'ಈಶಾನ್ಯ ರಾಜ್ಯಗಳಾದ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರಗಳ ಗಡಿ ಜಿಲ್ಲೆಗಳಲ್ಲಿ ಮುಸಲ್ಮಾನರು ಹೆಚ್ಚಿದ್ದಾರೆ. ಬಾಂಗ್ಲಾ ದೇಶದಿಂದ ನಿರಂತರ ಒಳನುಸುಳುವಿಕೆಯಿಂದಲೂ ಮುಸಲ್ಮಾನರ ಸಂಖ್ಯೆ ಏರಿಕೆ ಕಂಡಿದೆ. ಅರುಣಾಚಲದಲ್ಲಿ ಕ್ರಿಶ್ಚಿಯನ್ ಸಮುದಾಯ ಜನಸಂಖ್ಯೆ ಹತ್ತು ವರ್ಷಗಳಲ್ಲಿ ಶೇ. 13 ರಷ್ಟು ಏರಿಕೆಯಾಗಿದೆ' ಎಂದು ವಿವರಿಸಿದರು.[ಗೋಮಾಂಸ ಸೇವನೆ ವಿರುದ್ಧ ಹುಬ್ಬಳ್ಳಿಯಲ್ಲಿ ಆರೆಸ್ಸೆಸ್ ಜಾಥಾ]
50 ವರ್ಷಗಳಲ್ಲಿ ಜನಸಂಖ್ಯೆ ಸಾಕಷ್ಟು ಏರಿಕೆಯಾಗಿದೆ. ಜನಸಂಖ್ಯೆ ಏರಿಕೆಗನುಗುಣವಾಗಿ ಮತ-ಪಂಥಗಳ ಸಂಖ್ಯೆಯಲ್ಲಿಯೂ ಅಪಾರ ಪ್ರಮಾಣದ ಬದಲಾವಣೆಯಾಗಿದೆ. ಭಾರತೀಯ ಮೂಲದವರ ಮತ-ಪಂಥ ಅನುಯಾಯಿಗಳ ಪ್ರಮಾಣ ಮೊದಲು ಶೇ. 88 ರಷ್ಟಿತ್ತು. ಇದು ಶೇ. 83.8 ಕ್ಕೆ ಇಳಿಕೆಯಾಗಿದೆ. ಆದರೆ ಶೇ.9.8 ರಷ್ಟಿದ್ದ ಮುಸಲ್ಮಾನರ ಜನಸಂಖ್ಯೆ ಶೇ.14.23 ಕ್ಕೆ ಏರಿದೆ ಎಂದು ಅಂಕಿ ಅಂಶಗಳ ದಾಖಲೆಗಳನ್ನು ವಿವರಿಸಿದರು.[ಗೋವಿನ ವಧೆ ಹಿಂದೂ ಮಹಿಳೆ ಅತ್ಯಾಚಾರಕ್ಕೆ ಸಮಾನ!]
ಮತ-ಪಂಥಗಳ ನಡುವಿನ ಅಸಮತೋಲನ ಇದೇ ರೀತಿ ಮುಂದುವರಿದರೆ 2050 ರಲ್ಲಿ ಹಿಂದೂಗಳು ಭಾರತದಲ್ಲಿ ಅಲ್ಪಸಂಖ್ಯಾತರಾಗುವ ಸಾಧ್ಯತೆಗಳಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಶಾಲ ಸಂಗಣ್ಣವರ, ಶಂಕರಾನಂದ, ರಘುನಂದನ ಮತ್ತಿತರರು ಉಪಸ್ಥಿತರಿದ್ದರು.