ಪತ್ನಿ ಪಾರ್ವತಿಗೆ ರಾಜ್ಯಸಭಾ ಸ್ಥಾನ, ಯತೀಂದ್ರಗೆ ಡಿಸಿಎಂ! ರಾಹುಲ್ ಗಾಂಧಿ ಆಫರ್ಗೆ ಸಿದ್ದರಾಮಯ್ಯ ರೆಸ್ಪಾನ್ಸ್
ನವದೆಹಲಿ/ಬೆಂಗಳೂರು: ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುವ ಮುನ್ನ ಸೋಮವಾರ (ಜೂನ್ 1) ಸಂಪುಟ ರಚನೆಯು ಮಹತ್ವದ ಘಟ್ಟ ತಲುಪಿದೆ. ಇಂದು ಬೆಳಗ್ಗೆ ಹೈಕಮಾಂಡ್ ಕಂಡು ಸಂಭಾವ್ಯ ಸಚಿವರ ಪಟ್ಟಿ ಅಂತಿಗೊಳಿಸಲು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ಪುತ್ರ ಯತೀಂದ್ರ ಅವರಿಗೆ ಸ್ವತಃ ರಾಹುಲ್ ಗಾಂಧಿಯವರೇ ಬಿಗ್ ಆಫರ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜೀನಾಮೆ ಮಾತುಕತೆಯಿಂದ ಹಿಡಿದು ಇಂದಿನ ಸಚಿವ ಸಂಪುಟ ರಚನೆವರೆಗೂ ಹೈಕಮಾಂಡ್ ಮತ್ತು ಸಿದ್ದರಾಮಯ್ಯರ ಮಧ್ಯೆ ನಿರಂತರ ಸಂಪರ್ಕ ಇದೆ. ಪದತ್ಯಾಗದ ವೇಳೆ ಸಿದ್ದರಾಮಯ್ಯ ಅವರಿಗೆ ರಾಜ್ಯಸಭಾ ಸ್ಥಾನದ ಆಫರ್ ನೀಡಲಾಗಿತ್ತು. ಆದರೆ ಅವರು ತಾವು ರಾಜ್ಯ ರಾಜಕೀಯದಲ್ಲೇ ಮುಂದುವರಿಯುವುದಾಗಿ ತಿಳಿಸಿದ್ದರು. ಅದರಂತೆ ಅವರೀಗ ತಮ್ಮ ಬಣದ ನಾಯಕರಿಗೆ ಸಚಿವರ ಸ್ಥಾನ, ಡಿಸಿಎಂ ಸ್ಥಾನ ಕೊಡಿಸಲು ಕಸರತ್ತು ನಡೆಸಿದ್ದಾರೆ.

ಪತ್ನಿ, ಪುತ್ರನಿಗೆ 'ರಾಗಾ' ಬಿಗ್ ಆಫರ್: ಸಿದ್ದರಾಮಯ್ಯ ರೆಸ್ಪಾನ್ಸ್
ಸಿದ್ದರಾಮಯ್ಯ ಅವರು ಪಕ್ಷಕ್ಕೆ ಧಕ್ಕೆ ಆಗದಂತೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟ ಬೆನ್ನಲ್ಲೆ ಅವರ ಪತ್ನಿ ಪಾರ್ವತಿ ಅವರಿಗೆ ರಾಜ್ಯಸಭಾ ಸ್ಥಾನದ ಆಫರ್ ನೀಡಲಾಗಿದೆ. ಖುದ್ದು ರಾಹುಲ್ ಗಾಂಧಿ ಅವರೇ ನೀವಂತೂ ರಾಷ್ಟ್ರ ರಾಜಕಾರಣಕ್ಕೆ ಬರದಂತೆ ನಿರ್ಧರಿಸಿದ್ದೀರಿ. ನಿಮ್ಮ ಪತ್ನಿ ಅವರನ್ನಾದರೂ ರಾಜ್ಯಸಭೆ ಕಳುಹಿಸುವಂತೆ ಆಫರ್ ನೀಡಿದ್ದಾರೆ ಎಂದು ವರದಿ ಆಗಿದೆ.
ರಾಹುಲ್ ಗಾಂಧಿಯವರ ಈ ಆಫರ್ ಅನ್ನು ಸಿದ್ದರಾಮಯ್ಯ ಅವರು ನಯವಾಗಿಯೇ ತಿರಸ್ಕರಿಸಿದ್ದಾರೆ. ಪತ್ನಿ ಪಾರ್ವತಿ ಅವರು ರಾಜಕೀಯದಲ್ಲಿ ಇಲ್ಲ. ಹಿಂದೆಯೂ ಇರಲಿಲ್ಲ. ಆಕೆ ಹೊರ ಜಗತ್ತಿನೊಡನೆ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಅವರು ರಾಜ್ಯಸಭೆ ಪ್ರವೇಶಿಸುವ ಪ್ರಶ್ನೆಯೇ ಇಲ್ಲ ಎಂದು ಗೌರವಯುತವಾಗಿ ಆಫರ್ ತಿರಸ್ಕೃರಿಸಿದ್ದಾರೆ.
ಇತ್ತ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಡಿಸಿಎಂ ಮಾಡುವುದಾಗಿ ರಾಹುಲ್ ಗಾಂಧಿಯವರು ಮತ್ತೊಂದು ಆಫರ್ ನೀಡಿದ್ದಾರೆ. ಇದಕ್ಕೂ ಒಪ್ಪಿಗೆ ನೀಡದ ಸಿದ್ದರಾಮಯ್ಯ ಅವರು, ಪಕ್ಷದಲ್ಲಿ ಹಿಂದುಳಿದ ವರ್ಗದ ನಮ್ಮ ಮೂವರು ಇಲ್ಲವೇ ನಾಲ್ವರು ನಾಯಕರಿಗೆ ಡಿಸಿಎಂ ಸ್ಥಾನ ನೀಡುವಂತೆ ಕೋರಿದ್ದಾರೆ. ಈ ಸಂಬಂಧ ಅವರು ಹೈಕಮಾಂಡ್ ಮೇಲೆ ಒತ್ತಡ ತರಲು ನಿರ್ಧರಿಸಿದ್ದಾರೆ ಅನ್ನುವ ಮಾಹಿತಿ ಸಿಕ್ಕಿದೆ.
ದೆಹಲಿಯಲ್ಲಿ ಇಂದು ಮಹತ್ವದ ಸಭೆ
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದು, ಇಂದಿನ ಸಭೆಯಲ್ಲಿ ಸಂಭಾವ್ಯ ನಾಯಕರ ಪಟ್ಟಿ ನೀಡಲಿದ್ದಾರೆ. ಪಟ್ಟಿಯಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಇಬ್ಬರು ಬಣದವರು ಇರಲಿದ್ದಾರೆ. ಇಂದೇ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಿಸಿಎಂ ಹುದ್ದೆ ಸೃಷ್ಟಿ ಸದ್ಯಕ್ಕಿಲ್ಲ ಎಂದಿದ್ದರು. ಡಿಸಿಎಂ ಹುದ್ದೆಗಳ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿಲ್ಲ. ಹೀಗಿರುವಾಗಲೇ ಸಿದ್ದರಾಮಯ್ಯ ಅವರು ಮಾತ್ರ ಜಮೀರ್ ಅಹ್ಮದ್ ಖಾನ್, ಎಂಬಿ ಪಾಟೀಲ್ ಹಾಗೂ ಜಿ.ಪರಮೇಶ್ವರ್ ಅವರಿಗೆ ಡಿಸಿಎಂ ಪಟ್ಟ ಕಟ್ಟಲು ಕಸರತ್ತು ನಡೆಸಿದ್ದಾರೆ. ಮೂರು ಇಲ್ಲವೇ ನಾಲ್ಕು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸುವಂತೆ ಹೈಕಮಾಂಡ್ ಮೇಲೆ ಸಿದ್ದರಾಮಯ್ಯ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.













Click it and Unblock the Notifications