ರಾಹುಲ್ ಗಾಂಧಿ ರೋಡ್ ಶೋ ಹೀಗಿತ್ತು
ತುಮಕೂರು, ಫೆ. 17 : ಮುಂದಿನ ಲೋಕಸಭೆ ಚುನಾವಣೆಗೆ ಜನರನ್ನು ಸೆಳೆಯಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೂರು ಜಿಲ್ಲೆಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಆರಂಭವಾದ ರೋಡ್ ಶೋ ಮೈಸೂರಿನಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆ ಸಾಗುವ ರಸ್ತೆಯುದ್ಧಕ್ಕೂ ಇಕ್ಕೆಲಗಳಲ್ಲಿ ನೆರೆದಿದ್ದ ಜನಸ್ತೋಮ, ಕಾಂಗ್ರೆಸ್ ಯುವರಾಜನಿಗೆ ಭವ್ಯ ಸ್ವಾಗತ ಕೋರಿತು.
ಭಾನುವಾರ ಮಧ್ಯಾಹ್ನ ತುಮಕೂರಿನಲ್ಲಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ನಂತರ, 3.40ರ ಸುಮಾರಿಗೆ ಕುಣಿಗಲ್ ಗೆ ಆಗಮಿಸಿದರು ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ರಾಹುಲ್ ಗಾಂಧಿ ಅವರಿಗೆ ಕುಣಿಗಲ್ ನ ಬನ್ನಿವಾರ ಕಟ್ಟೆ ಗಡಿಯಲ್ಲಿ ಭವ್ಯ ಸ್ವಾಗತ ಕೋರಿದರು. ನಂತರ ತೆರೆದ ಕಾರಿನಲ್ಲಿ ಕುಣಿಗಲ್ನಿಂದ ರಾಹುಲ್ ರೋಡ್ ಶೋ ಆರಂಭಿಸಿದರು. ಚಿತ್ರಗಳಲ್ಲಿ ನೋಡಿ ರಾಹುಲ್ ಗಾಂಧಿ ರೋಡ್ ಶೋ [ಮಹಿಳಾ ಸಮಾವೇಶದಲ್ಲಿ ರಾಹುಲ್ ಹೇಳಿದ್ದೇನು]
ಹಸ್ತಲಾಘವ ನೀಡಲು ಮುಗಿಬಿದ್ದ ಜನರು
ಕುಣಿಗಲ್ ನಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಜನರು ರಾಹುಲ್ ಗಾಂಧಿಗೆ ಹಸ್ತಲಾಘವ ಮಾಡಲು ಮುಗಿಬಿದ್ದರು. ಜನರನ್ನು ನೋಡಿದ ರಾಹುಲ್, ಕಾರಿನಿಂದ ಕೆಳಗಿಳಿದು ಜನರತ್ತ ಧಾವಿಸಿದರು. ಭದ್ರತಾ ಸಿಬ್ಬಂದಿಯನ್ನೂ ಲೆಕ್ಕಿಸಿದೆ ಜನರತ್ತ ಹೋಗಿ ಅವರ ಕೈ ಕುಲುಕಿದರು. ಇದರಿಂದಾಗಿ ಭದ್ರತಾ ಸಿಬ್ಬಂದಿಗೆ ಕೆಲಕಾಲ ಆತಂಕ ಉಂಟಾಗಿತ್ತು.
ಅಂಬರೀಶ್ ರಿಂದ ಆತ್ಮೀಯ ಸ್ವಾಗತ
ಕುಣಿಗಲ್ ನಿಂದ ಮದ್ದೂರಿಗೆ ಆಗಮಿಸಿದ ರಾಹುಲ್ ಗಾಂಧಿಯನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ತಾಲೂಕಿನ ಛತ್ರಲಿಂಗನದೊಡ್ಡಿ ಬಳಿ ಆತ್ಮೀಯವಾಗಿ ಬರಮಾಡಿಕೊಂಡರು. ಸಂಸದೆ ರಮ್ಯಾ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮುಂತಾದವರು ಜೊತೆಗಿದ್ದರು. ನಂತರ ಮಲ್ಲನಕುಪ್ಪೆ, ಕೆಸ್ತೂರು, ತೊರೆಶೆಟ್ಟಹಳ್ಳಿ, ಹೆಮ್ಮನಹಳ್ಳಿ, ಕೆಸ್ತೂರು ಅಡ್ಡರಸ್ತೆ, ಮದ್ದೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಪ್ರವಾಸಿ ಮಂದಿರ ವೃತ್ತ, ಗೆಜ್ಜಲಗೆರೆಗೆಯಲ್ಲಿ ರೋಡ್ ಶೋ ನಡೆಸಿದರು.
ರಾಹುಲ್ ಸ್ವಾಗತಿಸಿದ ಎಸ್.ಎಂ.ಕೃಷ್ಣ
ಮದ್ದೂರಿನಲ್ಲಿ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ರಾಹುಲ್ ಗಾಂಧಿ ಅವರನ್ನು ಬರಮಾಡಿಕೊಂಡರು. ಕಾರಿನಿಂದ ಇಳಿದ ರಾಹುಲ್ ಗಾಂಧಿ, ಎಸ್.ಎಂ.ಕೃಷ್ಣ ಇದ್ದ ಸ್ಥಳಕ್ಕೆ ತೆರಳಿ ಅವರ ಪಾದ ಸ್ಪರ್ಶಿಸಿ ನಮಸ್ಕರಿಸಿದರು. ಕೃಷ್ಣ ಯುವರಾಜನಿಗೆ ಮಾಲಾರ್ಪಣೆ ಮಾಡಿ ಸ್ವಾಗತ ಕೋರಿದರು. ಸುಮಾರು 15 ನಿಮಿಷಗಳ ಕಾಲ ಕೃಷ್ಣ ಮತ್ತು ಇತರ ನಾಯಕರ ಜೊತೆ ಮಾತುಕತೆ ನಡೆಸಿದ ರಾಹುಲ್, ಮಂಡ್ಯ ಮೂಲಕ ಶ್ರೀರಂಗಪಟ್ಟಣಕ್ಕೆ ತೆರಳಿದರು.
ಶ್ರೀರಂಗಪಟ್ಟಣದಲ್ಲಿ ಗೊಂದಲ
ಕಾಂಗ್ರೆಸ್ ಪಕ್ಷದ ಭಿನ್ನಮತವಿರುವ ಶ್ರೀರಂಗಪಟ್ಟಣದಲ್ಲಿ ರಾಹುಲ್ ರೋಡ್ ಶೋಗೆ ಅದರ ಬಿಸಿ ತಟ್ಟಿತ್ತು. ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ರಾಹುಲ್ಗೆ ಸ್ವಾಗತ ಕೋರುವ ವಿಷಯವಾಗಿ ಅಂಬರೀಶ್ ಮತ್ತು ರವೀಂದ್ರ ಬಣಗಳ ನಡುವೆ ಘರ್ಷಣೆ ನಡೆದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.
ಮೈಸೂರಿಗೆ ಆಗಮನ
ಶ್ರೀರಂಗಪಟ್ಟಣದಿಂದ ಹೊರಟ ರಾಹುಲ್ ಗಾಂಧಿ ಸಂಜೆ 7.15ರ ಸುಮಾರಿಗೆ ಕಳಸವಾಡಿ ಮೂಲಕ ಮೈಸೂರು ಜಿಲ್ಲೆಗೆ ಆಗಮಿಸಿದರು. ಟೋಲ್ಗೇಟ್ ಬಳಿ ಮಾಜಿ ಸಚಿವ ತನ್ವೀರ್ ಸೇಠ್ ಮುಂತಾದ ನಾಯಕರು ರಾಹುಲ್ ಅವರನ್ನು ಬರಮಾಡಿಕೊಂಡರು. ಸಯ್ಯಾಜಿರಾವ್ ರಸ್ತೆ, ಕೆ.ಆರ್.ಸರ್ಕಲ್ ಮೂಲಕ ರೋಡ್ ಶೋ ನಡೆಸಿದ ರಾಹುಲ್, 8.30ರ ವೇಳೆ ಮಂಡಕಳ್ಳಿ ವಿಮಾನ ನಿಲ್ದಾಣ ತಲುಪಿದರು. ರಾತ್ರಿ 9 ಗಂಟೆಗೆ ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು.
ಮೈಸೂರು ತಲುಪುವಾಗ ರಾತ್ರಿಯಾಗಿತ್ತು
ಶ್ರೀರಂಗಪಟ್ಟಣದಿಂದ ಹೊರಟ ರಾಹುಲ್ ಗಾಂಧಿ ಸಂಜೆ 7.15ರ ಸುಮಾರಿಗೆ ಕಳಸವಾಡಿ ಮೂಲಕ ಮೈಸೂರು ಜಿಲ್ಲೆಗೆ ಆಗಮಿಸಿದರು. ಟೋಲ್ಗೇಟ್ ಬಳಿ ಮಾಜಿ ಸಚಿವ ತನ್ವೀರ್ ಸೇಠ್ ಮುಂತಾದ ನಾಯಕರು ರಾಹುಲ್ ಅವರನ್ನು ಬರಮಾಡಿಕೊಂಡರು.
ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ
ಮೈಸೂರು ನಗರದಲ್ಲಿಯೂ ರಾಹುಲ್ ಗಾಂಧಿ ಅವರಿಗೆ ಅದ್ದೂರಿ ಸ್ವಾಗತ ದೊರೆಯಿತು. ನಗರದ ಸಯ್ಯಾಜಿರಾವ್ ರಸ್ತೆ, ಕೆ.ಆರ್.ಸರ್ಕಲ್ ಗಳಲ್ಲಿ ರೋಡ್ ಶೋ ನಡೆಸಿದ ರಾಹುಲ್, 8.30ರ ವೇಳೆ ಮಂಡಕಳ್ಳಿ ವಿಮಾನ ನಿಲ್ದಾಣ ತಲುಪಿದರು. ರಾತ್ರಿ 9 ಗಂಟೆಗೆ ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು.
ರಾಹುಲ್ ಜೊತೆಗಿದ್ದವರು
ಮೂರು ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ ರೋಡ್ ಶೋ ನಡೆಸುವಾಗ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಇಂಧನ ಸಚಿವ ಡಿಕೆ ಶಿವಕುಮಾರ್ ಮುಂತಾದವರು ರಾಹುಲ್ ಗಾಂಧಿ ಅವರ ಜೊತೆಗಿದ್ದರು. ಮಾರ್ಗ ಮಧ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸಹ ಕಾರಿನಿಂದಲೇ ರಸ್ತೆ ಬದಿ ನಿಂತಿದ್ದ ಜನರತ್ತ ಕೈ ಬೀಸಿದರು.