ಕನಕಪುರದಲ್ಲಿ ‘ಬಂಡೆ’ಗೆ ಆರ್. ಅಶೋಕ್ ಗುದ್ದು!
ಕನಕಪುರ: ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ ಒಂದಾದ ಕನಕಪುರ ಅಖಾಡ ಮತ್ತಷ್ಟು ರಂಗೇರಿದೆ. ಡಿ.ಕೆ. ಶಿವಕುಮಾರ್ ಹಾಗೂ ಆರ್. ಅಶೋಕ್ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದು, ಅಶೋಕ್ ಜೊತೆಗೆ ಕಮಲ ಪಾಳಯದ ನಾಯಕರು ಕನಕಪುರದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ವೇಳೆ ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದದ ಬಗ್ಗೆ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
'ಬಂಡೆ' ಎಂದೇ ಫೇಮಸ್ ಆಗಿರುವ ಡಿಕೆ ಬ್ರದರ್ಸ್ ವಿರುದ್ಧ ಬಿಜೆಪಿ ರಣತಂತ್ರ ರೂಪಿಸಿದೆ. ಅಶೋಕ್ ಮುಂದಾಳತ್ವದಲ್ಲೇ ಕನಕಪುರ ಕೋಟೆ ಗೆಲ್ಲಲು ಬಿಜೆಪಿ ಸಿದ್ಧವಾಗಿದೆ. ಆದರೆ ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸಲು ಕಮಲ ಪಾಳಯ ಸಕ್ಸಸ್ ಆಗುತ್ತಾ? ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ಹೆಣೆದಿರುವ ರಣತಂತ್ರ ವರ್ಕೌಟ್ ಆಗುತ್ತಾ? ಎಂಬ ಕುತೂಹಲ ಇಡೀ ರಾಜ್ಯವನ್ನು ಕಾಡುತ್ತಿದೆ. ಮತ್ತೊಂದು ಕಡೆ ಇಂದು ಸ್ವತಃ ಡಿ.ಕೆ. ಶಿವಕುಮಾರ್ ಊರಿಗೂ ಲಗ್ಗೆ ಇಟ್ಟು ಪ್ರಚಾರ ಮಾಡಿ ಬಂದಿದ್ದಾರೆ ಆರ್. ಅಶೋಕ್. ಆದರೆ ಇದೇ ಸಂದರ್ಭದಲ್ಲಿ ಗಂಭೀರ ಆರೋಪ ಒಂದನ್ನ ಅಶೋಕ್ ಮಾಡಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದ?
ಹೌದು, ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಫೈಟ್ ಕಾಣಿಸುತ್ತಿಲ್ಲ ಎಂದು ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಇದು ಒಳ ಒಪ್ಪಂದವೋ ಅಥವಾ ಹೊರ ಒಪ್ಪಂದವೋ ಗೊತ್ತಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಕೆಣಕಿದ್ದಾರೆ ಆರ್. ಅಶೋಕ್. ಡಿಕೆಶಿಗೆ ಫೈಟ್ ಕೊಡೋದು ಆರ್. ಅಶೋಕ್ ಮಾತ್ರ ಎಂಬುದು ಜನರಿಗೂ ಅನ್ನಿಸಿದೆ. ಡಿ.ಕೆ.ಶಿವಕುಮಾರ್ ಹುಟ್ಟೂರಿನಲ್ಲೂ ನನಗೆ ಭರ್ಜರಿ ಸ್ವಾಗತ ಸಿಕ್ಕಿದೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ವರಿಷ್ಠರ ರಣತಂತ್ರ ಹೇಗಿದೆ?
ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಜಗದೀಶ್ ಶೆಟ್ಟರ್ ಸೋಲಿಗೆ ಬಿಜೆಪಿ ನಾಯಕರು ಶಪಥ ಮಾಡಿದ್ದಾರೆ. ಹಿಂದೆ ಖುದ್ದು ಕಾಂಗ್ರೆಸ್ ಮುಖಂಡರೇ ಆರೋಪ ಮಾಡಿದಂತೆ ಬಿಜೆಪಿ ಕೇಂದ್ರ ನಾಯಕರ ವಿರುದ್ಧ ಡಿಕೆ ಬ್ರದರ್ಸ್ ವಾಗ್ದಾಳಿ ನಡೆಸುತ್ತಿರುವ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಬಿಜೆಪಿ ವರಿಷ್ಠರ ಟಾರ್ಗೆಟ್ ಆಗಿದ್ದಾರಂತೆ. ಈ ಬಾರಿ ಡಿಕೆಶಿ ಸೋಲಿಗೆ ಬಿಜೆಪಿ ವರಿಷ್ಠರು ಪಣತೊಟ್ಟು ನಿಂತಿರುವ ಕಾರಣಕ್ಕೆ ಆರ್.ಅಶೋಕ್ಗೆ 2 ಕಡೆ ಚುನಾವಣೆಗೆ ಸ್ಪರ್ಧಿಸುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿತ್ತು. ಈಗ ನಡೆಯುತ್ತಿರುವ ಪ್ರಚಾರ ನೋಡಿದರೆ ಬಿಜೆಪಿ ಮಾಸ್ಟರ್ ಪ್ಲ್ಯಾನ್ ಪಕ್ಕಾ ಆಗುತ್ತಿದೆ.

ಒಕ್ಕಲಿಗ ನಾಯಕನೇ ಡಿಕೆಶಿಗೆ ಎದುರಾಳಿ!
ಡಿಕೆಶಿ ಗೆಲುವಿಗೆ ಈ ಅಂಶ ಕೂಡ ಅಡ್ಡಿಯಾಗಬಹುದು. ಡಿ.ಕೆ. ಶಿವಕುಮಾರ್ ಒಕ್ಕಲಿಗರು ಹಾಗೂ ಡಿಕೆಶಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕೆ ಎಂಟ್ರಿಯಾಗಿರುವ ಆರ್.ಅಶೋಕ್ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಕನಕಪುರ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ 1 ಲಕ್ಷಕ್ಕೂ ಹೆಚ್ಚಾಗಿವೆ. ಇದು ಕೂಡ ಕೆಪಿಸಿಸಿ ಅಧ್ಯಕ್ಷರಿಗೆ ಎಫೆಕ್ಟ್ ಕೊಡಬಹುದು. ಆರ್. ಅಶೋಕ್ ಎಂಟ್ರಿಯಿಂದ ಒಕ್ಕಲಿಗರ ವೋಟ್ ಒಡೆದು ಚುನಾವಣೆಯಲ್ಲಿ ಪರಿಣಾಮ ಬೀರಬಹುದು. ಈ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಳ ಒಪ್ಪಂದ ನಡೆದಿದೆ ಎಂಬ ಬಗ್ಗೆ ಆರೋಪ ಮಾಡಿದ್ದಾರೆ ಸಚಿವ ಆರ್. ಅಶೋಕ್.
ಒಟ್ನಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಏನೇ ಇದ್ದರೂ ಮತದಾರ ಪ್ರಭು ಯಾವ ನಿಲುವು ಕೈಗೊಳ್ಳಲಿದ್ದಾನೆ ಎಂಬ ಅಂಶದ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ. ಮೇ 10ರಂದು ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂದೇ ಕನಕಪುರದ ಕಿಂಗ್ ಯಾರು ಎಂಬುದನ್ನ ಮತದಾರ ಪ್ರಭು ನಿರ್ಧಾರ ಮಾಡಲಿದ್ದಾನೆ.












Click it and Unblock the Notifications