ಪಿಎಸ್ಐ ಪರೀಕ್ಷಾ ಅಕ್ರಮ: ಪೊಲೀಸ್ ನೇಮಕಾತಿ ವಿಭಾಗದ ಅಧಿಕಾರಿಗಳ ಕೈವಾಡ ಶಂಕೆ
ಬೆಂಗಳೂರು, ಮೇ. 08: ಪಿಎಸ್ಐ ನೇಮಕಾತಿ ಅಕ್ರಮದ ಈವರೆಗಿನ ಬೆಳವಣಿಗೆ ನೋಡಿದ್ರೆ, ಪೊಲೀಸ್ ಇಲಾಖೆ ನೇಮಕಾತಿ ವಿಭಾಗದ ದೊಡ್ಡ ಕೈಗಳೇ ಶಾಮೀಲಾಗಿರುವ ಗುಮಾನಿ ವ್ಯಕ್ತವಾಗಿದೆ.
ಕೆಲವು ಪರೀಕ್ಷಾ ಕೇಂದ್ರಗಳಿಗೆ ಅಷ್ಟೇ ಸೀಮಿತಗೊಳಿಸಿ ಅಕ್ರಮ ಎಸಗಲಾಗಿದೆ. ಹಣ ಕೊಟ್ಟು ಡೀಲ್ ಕುದುರಿಸಿದ ಅಭ್ಯರ್ಥಿಗಳನ್ನು ಮೊದಲೇ ಪ್ಲಾನ್ ರೂಪಿಸಿ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮಾಡುವಂತೆ ಮಾಡಿರುವುದು. ಪಿಎಸ್ಐ ನೇಮಕಾತಿ ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆ ತಡವಾಗಿ ಸಲ್ಲಿಸಿದ್ರೂ ಅದನ್ನು ಅಂಗೀಕರಿಸಿರುವುದು, ಡೀಲ್ ಕೋರರ ಕೈಗೆ ಪ್ರಶ್ನೆ ಪತ್ರಿಕೆ ಪರೀಕ್ಷೆ ಮೊದಲೇ ಹೋಗಿರುವ ಅಂಶಗಳು ಇವರೆಗಿನ ತನಿಖೆಯಿಂದ ಬಳಕಿಗೆ ಬಂದಿದೆ. ಈ ಎಲ್ಲಾ ಅಕ್ರಮಗಳನ್ನು ನೋಡಿದ್ರೆ ಪರೀಕ್ಷಾ ಅಕ್ರಮದಲ್ಲಿ ನೇಮಕಾತಿ ವಿಭಾಗದ ದೊಡ್ಡ ಕೈಗಳು ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಈಗಾಗಲೇ ಓರ್ವ ಡಿವೈಎಸ್ಪಿ ಇನ್ನೊಬ್ಬ ಪೊಲೀಸ್ ಇನ್ಸ್ಪೆಕ್ಟರ್ ಕಲಬುರಗಿಯಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನಲ್ಲಿ ನೇಮಕಾತಿ ವಿಭಾಗದ ಡಿವೈಎಸ್ಪಿ ಕೂಡ ವಿಚಾರಣೆಗೆ ಒಳಗಾಗಿದ್ದು, ಅವರನ್ನು ನೇಮಕಾತಿ ವಿಭಾಗದಿಂದ ಹೊರ ಹಾಕಲಾಗಿದೆ. ಕೇವಲ ಇವರಷ್ಟೇ ಶಾಮೀಲಾಗಿದ್ದರೆ ಇಷ್ಟು ದೊಟ್ಟ ಮಟ್ಟದಲ್ಲಿ ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿದರೆ ಅಕ್ರಮದಲ್ಲಿ ಮತ್ತಷ್ಟು ದೊಡ್ಡ - ದೊಡ್ಡವರು ಸಿಕ್ಕಿ ಬೀಳುವ ಸಾಧ್ಯತೆಯಿದೆ. ಈಗಾಗಲೇ ಈ ಪ್ರಕರಣವನ್ನು ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸಚಿವ ಅಶ್ವತ್ಥ್ ನಾರಾಯಣ ಅವರ ಹೆಸರು ಈ ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ. ಬಂಧನಕ್ಕೆ ಒಳಗಾಗಿರುವ ಕಿಂಗ್ ಪಿನ್ ಗಳಿಬ್ಬರಲ್ಲಿ ಒಬ್ಬರು ಕಾಂಗ್ರೆಸ್ ಪಕ್ಷ, ಇನ್ನೊಬ್ಬರದ್ದು ಬಿಜೆಪಿ ಪಕ್ಷ. ಈ ಹಿಂದೆ ನಡೆದಿರುವ ಪಿಎಸ್ಐ ಪರಿಕ್ಷೆಯಲ್ಲಿ ಅಕ್ರಮ ಎಸಗಿರುವುದು ಅಲ್ಲದೇ ಅನೇಕ ಪರೀಕ್ಷೆಗಳಲ್ಲಿ ಅಕ್ರಮ ಆಗಿರುವುದನ್ನು ಸಿಐಡಿ ಪೊಲೀಸರೇ ತನಿಖೆ ನಡೆಸಿದ್ದಾರೆ. ಇವುಗಳಿಂದ ಬುದ್ಧಿ ಕಲಿತು ಕಟ್ಟು ನಿಟ್ಟಾಗಿ ಪರೀಕ್ಷೆ ನಡೆಸಬೇಕಾದ ನೇಮಕಾತಿ ವಿಭಾಗ ಹಣದ ಆಸೆಗೆ ಬಿದ್ದು ತನ್ನ ಮೂಗಿನ ನೇರದಂತೆ ಪರೀಕ್ಷೆ ನಡೆಸಿದೆ. ಹೀಗಾಗಿ ಪರೀಕ್ಷೆಯಲ್ಲಿ ರಾಜಾ ರೋಷವಾಗಿ ಅಕ್ರಮಗಳು ನಡೆದಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

8 ಪ್ರತ್ಯೇಕ ತಂಡ ರಚನೆ:
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ತನಿಖೆಗೆ ಮತ್ತಷ್ಟು ಚುರುಕು ನೀಡಲು ಡಿವೈಎಸ್ಪಿಗಳ ನೇತೃತ್ವದಲ್ಲಿ ಎಂಟು ತಂಡ ರಚನೆ ಮಾಡಲಾಗಿದೆ. ಎಂಟು ತಂಡಗಳಿಗೆ ಪ್ರತ್ಯೇಕ ಜವಾಬ್ಧಾರಿ ನೀಡಲಾಗಿದೆ. ಎಂಟು ಡಿವೈಎಸ್ಪಿಗಳಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.

ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸದಂತೆ ಈವರೆಗೂ ಬೆಂಗಳೂರು ಮತ್ತು ಕಲಬುರಗಿಯ ಪರೀಕ್ಷಾ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ. ಬೆಂಗಳೂರು ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದಂತೆ ಈವರೆಗೂ ಎರಡು ಪರೀಕ್ಷಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು 92 ಮಂದಿ ಪಿಎಸ್ ಐ ಅಭ್ಯರ್ಥಿಗಳ ಓಎಂಆರ್ ಶೀಟ್ ನ್ನು ಪರೀಕ್ಷೆಗೆ ಒಳಪಡಿಸಿ 22 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಮೈಸೂರು, ತುಮಕೂರು, ಬೆಂಗಳೂರಿನ ಇತರೆ ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದಂತೆ ಪಿಎಸ್ಐ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಪಡೆದು ಪರಿಶೀಲನೆ ನಡೆಸಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ. ಅಲ್ಲದೇ , ಎಲೆಕ್ಟ್ರಿಕ್ ಡಿವೈಎಸ್ ಬಳಿಸಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳ ಪತ್ತೆಗೆ ತಂತ್ರಜ್ಞಾನ ಆಧರಿಸಿ ಪಟ್ಟಿ ಸಿದ್ಧಪಡಿಸಲು ಎರಡು ತಂಡಗಳಿಗೆ ಜವಾಬ್ದಾರಿ ವಹಿಸಲಾಗಿದೆ.

ಪರೀಕ್ಷೆಯಲ್ಲಿ ಉತ್ತರ ಪತ್ರಿಕೆ ತಿದ್ದುಪಡಿ ಮಾಡಿದ್ದರು, ಇಲ್ಲವೇ ಬ್ಲೂಟೂತ್ ಡಿವೈಎಸ್ ಬಳಸಿ ಪರಿಕ್ಷೆ ಬರೆದಿದ್ದರೂ ಅಕ್ರಮ ಎಸಗಿದವರನ್ನು ಒಬ್ಬರನ್ನೂ ಬಿಡದಂತೆ ತಲಾಷೆ ಮಾಡಲು ಸಿಐಡಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಮತ್ತಷ್ಟು ತನಿಖಾಧಿಕಾರಿಗಳನ್ನು ನಿಯೋಜಿಸಿಕೊಂಡು ತನಿಖೆ ಜವಾಬ್ದಾರಿ ನೀಡಲಾಗಿದೆ.
ಇಬ್ಬರು ಪಿಎಸ್ಐ ಅಭ್ಯರ್ಥಿಗಳು ಸೆರೆ:
ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪಿಎಸ್ಐ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. 22 ಆರೋಪಿಗಳ ಪೈಕಿ ಇದೀಗ 18 ಅಭ್ಯರ್ಥಿಗಳು ಸಿಕ್ಕಿಬಿದ್ದಂತಾಗಿದ್ದು, ಉಳಿದ ಆರು ಅಭ್ಯರ್ಥಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಪಿಎಸ್ಐ ಆಗಿ ನೇಮಕವಾಗಿದ್ದ ವೆಂಕಟೇಶ್ ಹಾಗೂ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.












Click it and Unblock the Notifications