ವಕೀಲ ಜಗದೀಶ ಬಂಧನ ಪ್ರಶ್ನಿಸಿ ಕನ್ನಡ ಪರ ಸಂಘಟನೆಗಳಿಂದ ವಿಧಾನಸೌಧದ ಮುಂದೆ ಹೋರಾಟ
ಬೆಂಗಳೂರು, ಫೆ. 25: ಭ್ರಷ್ಟರ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ನಿಂದನೆ ಮಾಡುವ ಮೂಲಕ ಖ್ಯಾತಿ ಪಡೆದಿದ್ದ ವಕೀಲ ಜಗದೀಶ್ ವಿರುದ್ಧ ಸುಳ್ಳು ಕೇಸು ದಾಖಲಿಸಿ ಬಂಧಿಸಿರುವ ಪೊಲೀಸರ ಕ್ರಮ ಖಂಡಿಸಿ ವಕೀಲರ ಸಮುದಾಯ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಸದಸ್ಯರು ಶುಕ್ರವಾರ ವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಭ್ರಷ್ಟಾಚಾರ ವಿರುದ್ಧ ಧ್ವನಿಯೆತ್ತಿದ ಜಗದೀಶ್ ವಿರುದ್ಧ ಸುಳ್ಳು ಕೇಸು ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ. ಜಗದೀಶ್ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದೇ ತಪ್ಪೇ ? ಸುಳ್ಳು ಕೇಸು ದಾಖಲಿಸಿದ ಅಧಿಕಾರಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಕೆಆರ್ಎಸ್ ಪಕ್ಷದ ಕಾರ್ಯಕರ್ತರು, ವಕೀಲರು ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಜಗದೀಶ್ ಬಂಧನ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಕೇಸುಗಳಿಂದಲೇ 'ವಕೀಲ್ ಸಾಬ್' ಆದ ಜಗದೀಶ್
ವಕೀಲ ಜಗದೀಶ್ ಯಾವುದೇ ತಪ್ಪು ಮಾಡಿಲ್ಲ. ಅವರದ್ದೇ ಶೈಲಿಯಲ್ಲಿ ಭ್ರಷ್ಟರ ವಿರುದ್ಧ ಹೋರಾಟ ಮಾಡುತ್ತಿದ್ದರು. ಯಾವುದೇ ತಪ್ಪು ಮಾಡದಿದ್ದರೂ ಕೊಲೆ ಯತ್ನ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಇದಲ್ಲದೇ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ. ಭ್ರಷ್ಟರ ವಿರುದ್ಧ ಹೋರಾಟ ಮಾಡಿದ್ದೇ ತಪ್ಪೇ ಎಂದು ವಕೀಲರು ಪ್ರಶ್ನಿಸಿದ್ದಾರೆ.
ವಕೀಲ ಜಗದೀಶ್ ಬಂಧನ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಮತ್ತು ವಕೀಲರು ವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಿದರು. ಜಗದೀಶ್ ಮೇಲೆ ಸುಳ್ಳು ಕೇಸು ದಾಖಲಿಸಿ ಪೊಲೀಸ್ ಆಯುಕ್ತರು ಪಿತೂರಿ ನಡೆಸಿದ್ದಾರೆ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್ ಕಿಡಿ ಕಾರಿದ್ದಾರೆ.
— oneindiakannada (@OneindiaKannada) February 25, 2022
#Kannada #Police #Jagadish #ಒನ್ಇಂಡಿಯಾಕನ್ನಡಸುದ್ದಿ pic.twitter.com/aIuRkNS4wz
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್,'' ವಕೀಲ ಜಗಧೀಶ್ ಮೇಲೆ ಸುಳ್ಳು ಕೇಸು ಮಾಡಿದ್ದನ್ನು ಪ್ರಶ್ನಿಸಬಾರದೇ. ಪೊಲೀಸ್ ಕಮೀಷನರ್ ಅವರೇ ಒತ್ತಾಯ ಪೂರ್ವಕವಾಗಿ ಪಿತೂರಿ ನಡೆಸಿ ಈ ಕೇಸು ದಾಖಲಿಸಿದ್ದಾರೆ. ಸುಮೊಟೋ ಕೇಸು ದಾಖಲಿಸುವ ಶಕ್ತಿ ಪೊಲೀಸರಿಗೆ ಇರಲಿಲ್ಲವೇ? ಬಿಟ್ ಕಾಯಿನ್ ಪ್ರಕರಣದಲ್ಲಿ ಸಿಕ್ಕಿದ ಪೊಲೀಸರ ಮೇಲೆ ಏನು ಕ್ರಮ ತಗೊಂಡಿದ್ದೀರಿ ? ರಾಜ್ಯದಲ್ಲಿ ಗೃಹ ಮಂತ್ರಿ ಒಳ್ಳೆಯವರಾದ್ರೆ ಏನು ಪ್ರಯೋಜನ? ಗೃಹ ಮಂತ್ರಿ ರಾಜ್ಯದಲ್ಲಿದ್ದಾರೆಯೇ? ವಕೀಲ ಜಗದೀಶ್ ಮೇಲೆ ಇದೀಗ ಅಟ್ರಾಸಿಟಿ ಕೇಸು ದಾಖಲಿಸಿದ್ದಾರೆ. ವಕೀಲರನ್ನು ಜೈಲಿಗೆ ಕಳುಹಿಸಿ ವಕೀಲರ ಸಂಘದ ಅಧ್ಯಕ್ಷ ಅಧಿಕಾರ ದುರುಪಯೋಗ ಪಡಿಸಿಕೊಳ್ಳಬಾರದಿತ್ತು,'' ಎಂದು ಕಿಡಿ ಕಾರಿದರು.
ಜಗದೀಶ್ ಮೇಲೆ ಸುಳ್ಳು ಕೇಸು ದಾಖಲಿಸಿ ದಬ್ಬಾಳಿಕೆ ಮಾಡಿರುವದನ್ನು ಖಂಡಿಸಬೇಕು. ಈ ನಿಟ್ಟಿನಲ್ಲಿ ಹೋರಾಟ ಮುಂದುವರೆಸಬೇಕು. ಜಗದೀಶ್ ಮಾತನಾಡುವ ಶೈಲಿ ಇಲ್ಲ. ಜಗದೀಶ್ ಮಾತನಾಡುವ ಶೈಲಿ ಸರಿಯಿಲ್ಲ ಎನ್ನುತ್ತಿದ್ದಾರೆ. ಜನರ ಕೋಟ್ಯಂತರ ರೂ. ಲೂಟಿ ಮಾಡ್ತಿದ್ದಾರಲ್ಲ. ಆ ಶೈಲಿ ಸರಿಯಿದೆಯೇ? ರಾಜ್ಯದಲ್ಲಿ ನಲವತ್ತು ಪರ್ಸೆಂಟ್ ಕಮೀಷನ್ ಬಗ್ಗೆ ಗುತ್ತಿಗೆದಾರರೇ ಪ್ರಧಾನಿಗೆ ದೂರು ನೀಡಿದ್ದಾರೆ. ದಾಖಲೆಗಳ ಸಮೇತ ರವಿ ಚನ್ನಣ್ಣನವರ್ ವಿರುದ್ಧ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಚನ್ನಣ್ಣನವರ್ ವಿರುದ್ಧ ಯಾಕೆ ಕೇಸು ದಾಖಲಿಸಲಿಲ್ಲ. ಜಗದೀಶ್ ತೋರಿಸಿದ ದಾಖಲೆಗಳು ಸರಿಯಿದೆಯೇ ಇಲ್ಲವೋ ಎಂಬುದನ್ನು ಪರಿಶೀಲಿಸಲಲ್ಲ. ಬದಲಿಗೆ ನ್ಯಾಯಾಯಕ್ಕೆ ಬಂದ ಜಗದೀಶ್ ಮೇಲೆ ಹಲ್ಲೆ ಮಾಡಿ, ಅವರ ಮಗನ ಮೇಲೆ ಹಲ್ಲೆ ಮಾಡಿ ಸುಳ್ಳು ಕೇಸು ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ. ಇದೀಗ ಮತ್ತೊಂದು ಜಾತಿ ನಿಂದನೆ ಕೇಸು ದಾಖಲಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ವಕೀಲರು ಪ್ರಶ್ನಿಸಿದರು.
ಇದು ಜಗದೀಶ್ ಪರ ಹೋರಾಟವಲ್ಲ. ಭ್ರಷ್ಟಾಚಾರ ವಿರುದ್ಧದ ಹೋರಾಟ. ಜಗದೀಶ್ ವಿರುದ್ಧ ಹಾಕಿರುವ ಸುಳ್ಳು ಕೇಸು ವಾಪಸು ತೆಗೆದುಕೊಳ್ಳಬೇಕು. ಮುಖ್ಯಮಂತ್ರಿಗಳೇ ಈ ಸುಳ್ಳು ಕೇಸು ಗಮನಕ್ಕೆ ಬರಲಿಲ್ಲವೇ ಎಂದು ವಕೀಲರು ಪ್ರಶ್ನಿಸಿದ್ದಾರೆ. ಈ ಹೋರಾಟದಲ್ಲಿ ಕೆಆರ್ಎಸ್ ಪಕ್ಷದ ಮುಖಂಡ ರವಿ ಕೃಷ್ಣಾರೆಡ್ಡಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್ ಮತ್ತಿತರರು ಹಾಜರಿದ್ದರು.