ಕರ್ನಾಟಕದಲ್ಲಿ ಅವಧಿಗೆ ಪೂರ್ವ ಚುನಾವಣೆಯ: ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದೇನು?
ಬೆಂಗಳೂರು, ಮಾ.31: ಕರ್ನಾಟಕದಲ್ಲಿ ಅವಧಿಗೆ ಪೂರ್ವ ಚುನಾವಣೆಗೆ ಹೋಗುವ ಯೋಚನೆ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದರು.
ಬಸವರಾಜ ಬೊಮ್ಮಾಯಿ ಸರ್ಕಾರ ಅವಧಿಗೆ ಪೂರ್ಣ ಚುನಾವಣೆಗೆ ಹೋಗುತ್ತದೆ, ಗುಜರಾತ್ ಚುನಾವಣೆಯ ಜೊತೆಗೆ ಕರ್ನಾಟಕದ ಚುನಾವಣೆಯೂ ನಡೆಯಲಿದೆ ಎಂಬುದು ಕೇವಲ ಊಹಾಪೋಹಗಳು ಎಂದು ಅವರು ತಿಳಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಎರಡು ದಿನಗಳ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬಂದಿರುವ ಅಮಿತ್ ಶಾ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಆಲೋಚನೆಯೂ ಸಹ ಇಲ್ಲ. ಇಂತಹ ಪ್ರಸ್ತಾಪವೂ ಹೈಕಮಾಂಡ್ ಮುಂದೆ ಇಲ್ಲ. ಸದ್ಯ ಯಾವ ರೀತಿಯಲ್ಲಿ ಇದೆಯೋ ಅದೇ ಮಾದರಿಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಅರುಣ್ ಸಿಂಗ್ ಸ್ಪಷ್ಟಪಸಿದರು.
ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಮತ್ತು ಪುನಾರಚನೆಯ ಪ್ರಸ್ತಾಪ ಇದೆ. ಆದರೆ, ಅದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿವೇಚನೆಗೆ ಬಿಟ್ಟಿದೆ ಎಂದು ಅರುಣ್ ಸಿಂಗ್ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ನಾಯಕರು ಲೋಕಪ್ರಿಯರಿದ್ದಾರೆ, ಜನಪ್ರಿಯರಿದ್ದಾರೆ. ಬೊಮ್ಮಾಯಿಯವರು ತಮ್ಮ ಆಡಳಿತ ವೈಖರಿಯಿಂದ ಹೆಸರು ಮಾಡಿದ್ದಾರೆ. ಈ ಆಧಾರದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದರು.
ರಾಹುಲ್ಗಾಂಧಿ ಧೈರ್ಯ ಮೆಚ್ಚಬೇಕಾಗಿದ್ದು:
ರಾಹುಲ್ ಗಾಂಧಿ ರಾಜ್ಯ ಭೇಟಿ ಕುರಿತು ಮಾತನಾಡಿದ ಅರುಣ್ಸಿಂಗ್, ದೇಶಾದ್ಯಂತ ಕಾಂಗ್ರೆಸ್ ಸೋಲುತ್ತಿದೆ. ಈಗಾಗಲೇ ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಹೀನಾಯ ಸೋಲು ಕಂಡಿದೆ. ಈ ಬಾರಿ ಕರ್ನಾಟಕದಲ್ಲೂ ಕಾಂಗ್ರೆಸ್ ಗೆ ಸೋಲು ಕಟ್ಟಿಟ್ಟ ಬುತ್ತಿ. ಸೋಲಾಗುತ್ತೆ ಅಂತ ಗೊತ್ತಿದ್ದರೂ ರಾಹುಲ್ ಗಾಂಧಿ ಇಲ್ಲಿಗೆ ಬರೋ ಧೈರ್ಯ ತೋರಿಸಿರೋದು ಮೆಚ್ಚಬೇಕಾದದ್ದೇ ಎಂದು ವ್ಯಂಗ್ಯವಾಡಿದರು.
ಬಹಳ ಧೈರ್ಯದಿಂದ ರಾಹುಲ್ ಗಾಂಧಿ ಇಲ್ಲಿಗೆ ಬಂದಿದ್ದಾರೆ. ಅವರು ಬಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ. ಆದರೆ, ಅವರ ನೇತೃತ್ವದಲ್ಲಿ ಯಾವುದೂ ನೆಟ್ಟಗೆ ನಡೀತಿಲ್ಲ, ಅವರಿಂದ ಹೊಸದೇನನ್ನೂ ಮಾಡುವುದಕ್ಕೆ ಆಗುತ್ತಿಲ್ಲ. ಕಾಂಗ್ರೆಸ್ ದೇಶದಲ್ಲಿ ಎಲ್ಲಾ ಕಡೆ ಸೋಲುತ್ತದೆ. ಅದರಂತೆ ಮುಂದೆ ಕರ್ನಾಟಕದಲ್ಲಿಯೂ ಸೋಲುತ್ತದೆ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡುವ ವಿದ್ಯಮಾನಗಳು ನಡೆಯುತ್ತಿರುವ ವಿಚಾರ ಕುರಿತು ಮಾತನಾಡಿದ ಅರುಣ್ಸಿಂಗ್, ನಾವು ಅಭಿವೃದ್ಧಿ ಕೆಲಸಗಳನ್ನು ಇಟ್ಟುಕೊಂಡೆ ಚುನಾವಣೆ ಎದುರಿಸ್ತೇವೆ. ಆದರೆ, ಕಾಂಗ್ರೆಸ್ ನಮ್ಮ ಮೇಲೆ ವೃಥಾ ಆರೋಪ ಮಾಡುತ್ತಿದೆ. ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಏನೇ ಮಾಡಿದರೂ ನಮ್ಮ ಗಮನ ಅಭಿವೃದ್ಧಿ ಮೇಲೆ ಮಾತ್ರ ಇರುತ್ತದೆ ಎಂದು ಹೇಳಿದರು.












Click it and Unblock the Notifications