Prajwal Revanna Case:ಕಮಲ ಕಲಿಗಳಿಗೆ ಬಿಸಿ ತುಪ್ಪವಾದ ಪ್ರಜ್ವಲ್ ಪ್ರಕರಣ; ಬಿಜೆಪಿ-ಜೆಡಿಎಸ್ ಮೈತ್ರಿಗೆ ಬೀಳುತ್ತಾ ಬ್ರೇಕ್ ?
ಬೆಂಗಳೂರು, ಮೇ 09: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಲು ಬಿಜೆಪಿ-ಜೆಡಿಎಸ್ ಮೈತ್ರಿಯಾಗಿತ್ತು. ಆದರೆ, ಹಾಸನ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು, ಎನ್ನಲಾದ 'ಪೆನ್ಡ್ರೈವ್' ಲೈಂಗಿಕ ಹಗರಣ ರಾಜ್ಯಾದ್ಯಂತ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲೂ ಬಾರೀ ಸದ್ದು ಮಾಡಿದ್ದು, ಮೈತ್ರಿ ನಾಯಕರಿಗೆ ಈ ಪ್ರಕರಣ ತೀವ್ರ ಮುಜುಗರವನ್ನುಂಟು ಮಾಡಿದೆ.
ಹೌದು, ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಮೊದಲ ಹಂತ ಮತದಾನ ಏಪ್ರಿಲ್ 26 ರಂದು ನಡೆದಿದ್ದು, ಈ ಮತದಾನ ನಡೆಯುವ ಒಂದು ದಿನ ಮುನ್ನ ಪೆನ್ಡ್ರೈವ್ ಹಗರಣ ಸಣ್ಣಗೆ ಸದ್ದು ಮಾಡಿತು, ಈ ನಡುವೆಯೇ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯೂ ನಡೆದಿತ್ತು. ಇತ್ತ ಪೆನ್ ಡ್ರೈವ್ ಪ್ರಕರಣದ ಕಿಡಿ ಹೊತ್ತಿಕೊಳ್ಳುತ್ತಿದ್ದಂತೆ ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಮತದಾನ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದಾರೆ. ಇತ್ತ ಪ್ರಜ್ವಲ್ ವಿದೇಶಕ್ಕೆ ಹಾರಿದ್ದೇ ತಡ ಪೆನ್ ಡ್ರೈವ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ದೇಶಾದ್ಯಂತ ಸಂಚಲನ ಸೃಷ್ಟಿಸಿತು.

ಹಾಸನ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈ ಪ್ರಕರಣ ರಾಜ್ಯದಲ್ಲೂ ತೀವ್ರವಾಗಿ ಸದ್ದು ಮಾಡುತ್ತಿದ್ದು, ಈ ಪ್ರಕರಣದ ಕುರಿತು ಕಾಂಗ್ರೆಸ್ ನಾಯಕರು ಮೋದಿ ಇದಕ್ಕೆ ಉತ್ತರಿಸಬೇಕು ಎಂದು ಸಾಕಷ್ಟು ಟೀಕೆ ಟಿಪ್ಪಣೆಗಳನ್ನ ನಡೆಸಿದ್ದಾರೆ. ಪೆನ್ ಡ್ರೈವ್ ಪ್ರಕರಣ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ಬಿಜೆಪಿಯ ಆಂತರಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿದೆ.
ಆರಂಭದಲ್ಲೇ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಹಾಗೂ ಒಕ್ಕಲಿಗ ಸಮುದಾಯದ ನಾಯಕರಿಗೆ ಈ ಮೈತ್ರಿ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಒಪ್ಪಿಗೆ ಇರಲಿಲ್ಲ, ಮೈತ್ರಿ ಕುರಿತು ಬಹಿರಂಗವಾಗಿಯೇ ತೀವ್ರ ಅಸಮಾಧಾನವನ್ನ ವ್ಯಕ್ತಪಡಸಿದ್ರು. ಇದೀಗ ಪ್ರಜ್ವಲ್ ರೇವಣ್ಣ ಅವರ ಪ್ರಕರಣದಿಂದ ತೀವ್ರ ಮುಜುಗರವನ್ನ ಅನುಭವಿಸುತ್ತಿರುವ ಬಿಜೆಪಿ ನಾಯಕರಲ್ಲಿಯೇ ಮೈತ್ರಿ ಮುಂದುವರೆಸಬೇಕಾ ಇಲ್ಲವೇ ಎನ್ನುವ ಕುರಿತು ಚರ್ಚೆಗಳು ನಡೆಯುತ್ತಿವೆ. ಅಲ್ಲದೇ ಕಾಂಗ್ರೆಸ್ ನಾಯಕರು ಸಹ ಈ ವಿಚಾರವಾಗಿ ಬಿಜೆಪಿ ನಾಯಕರ ಮೌನವನ್ನ ಕುಟುಕುವಂತಹ ಕೆಲಸ ಮಾಡುತ್ತಿದ್ದು, ಈ ಹಿನ್ನೆಲೆ ಮೈತ್ರಿ ಕುರಿತು ಕಮಲ ಕೋಟೆಯಲ್ಲಿ ಅಪಸ್ವರಗಳು ಕೇಳಿ ಬರುತ್ತಿವೆ.
ದೇವೇಗೌಡರ ರಾಜಕೀಯದ ಬದುಕಿನಲ್ಲಿ ಹಾಸನ ಕ್ಷೇತ್ರದ ಜನ ಅವರ ಕೈಬಿಟ್ಟಿರಲಿಲ್ಲ. ಇಂತಹ ಕ್ಷೇತ್ರವನ್ನು 2019 ರ ಲೋಕಸಭಾ ಚುನಾವಣೆಯಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣನ ಕೈಗೆ ನೀಡಿದ್ದರು. ಮುಂದೊಂದು ದಿನ ರಾಷ್ಟ್ರ ಮಟ್ಟದಲ್ಲಿ ತನ್ನ ಹೆಸರು ಮೊಮ್ಮಗ ಉಳಿಸುತ್ತಾನೆ ಎಂಬ ಭರವಸೆಯಲ್ಲಿದ್ದರು. ಜನ ಕೂಡ ಪ್ರಜ್ವಲ್ ರೇವಣ್ಣನಿಗೆ ರಾಜಕೀಯ ಜೀವನದಲ್ಲಿ ಭವಿಷ್ಯವಿದೆ. ತಾತನ ಹೆಸರನ್ನು ಉಳಿಸುತ್ತಾನೆ ಎಂಬ ಮಾತುಗಳು ಕೇಳಿ ಬಂದಿದ್ದು, ಈ ವಯಸ್ಸಿನಲ್ಲಿ ಪ್ರಜ್ವಲ್ ಪ್ರಕರಣದಿಂದ ದೇವೇಗೌಡ್ರು ಸಹ ತೀವ್ರ ಮುಜುಗರವನ್ನ ಅನುಭವಿಸುವಂತಾಗಿದೆ.
ಮೈತ್ರಿ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು?
ಈಗಾಗಲೇ ಮೈತ್ರಿ ಕುರಿತು ರಾಜ್ಯದಲ್ಲಿ ಅಪಸ್ವರಗಳು ಕೇಳಿ ಬರುತ್ತಿವೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ಮೈತ್ರಿ ಮುಂದುವರಿಯುತ್ತೋ, ಮುಂದುವರಿಯಲ್ವಾ ಎಂಬುದು ನಮ್ಮಲ್ಲಿಲ್ಲ. ಮೈತ್ರಿ ಒಪ್ಪಂದ ಸುದೀರ್ಘವಾಗಿ ಹೋಗಬೇಕು ಎನ್ನುವುದು ನಮ್ಮ ಉದ್ದೇಶ. ಈ ಪ್ರಕರಣದಿಂದ ಮುಜುಗರ ಆದ್ರೆ ಅವರು ತೀರ್ಮಾನ ತೆಗೆದುಕೊಳ್ಳಬೇಕು. ಈ ಮೈತ್ರಿ ಯಿಂದಲೇ ಕಾಂಗ್ರೆಸ್ ನಿದ್ದೆಗೆಟ್ಟಿದೆ ಈ ಪ್ರಕರಣದಲ್ಲಿ ಮುಜುಗರ ಆಗುತ್ತೆ ಎಂದು ಮೈತ್ರಿ ಮುರಿದರೆ ನನ್ನ ತಕರಾರು ಇಲ್ಲ ಎಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದೇನು?
ಪ್ರಜ್ವಲ್ ರೇವಣ್ಣ ಅವರು ಗೆದ್ರೆ ಅವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅವರನ್ನ ಉಚ್ಚಾಟನೆ ಮಾಡುತ್ತೇವೆ. ನಮ್ಮ ಹೊಂದಾಣಿಕೆಯಲ್ಲಿ ಪ್ರಜ್ವಲ್ ರೇವಣ್ಣ ಇನ್ನೂ ಗೆದ್ದಿಲ್ಲ. ಪ್ರಜ್ವಲ್ ಗೆದ್ದರೆ ಅವರ ಪಕ್ಷದ ನಾಯಕರು ಕ್ರಮ ಕೈಗೊಳ್ಳಲಿ. ನಾವು ಕೂಡ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದರು.
ಒಟ್ನಾಲಿ, ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಇದರ ಜೊತೆ ಜೊತೆಗೆ ಆಂತರಿಕವಾಗಿಯೂ ಬಿಜೆಪಿಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗಾಗಲೇ ಮೂರು ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ನಡೆಸಿದ್ದು, ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆಯೇ ಎಲ್ಲಾವೂ ನಿರ್ಧಾರವಾಗಲಿದೆ. ಒಂದು ವೇಳೆ ಜೆಡಿಎಸ್ ಗೆ ಕೊಟ್ಟಿರುವ ಮೂರು ಕ್ಷೇತ್ರದಲ್ಲೂ ಜೆಡಿಎಸ್ ಸೋಲು ಕಂಡರೇ ಮೈತ್ರಿ ಮುರಿದು ಬೀಳುವ ಎಲ್ಲಾ ಸಾಧ್ಯತೆ ಇದೆ.












Click it and Unblock the Notifications