ರಾಜ್ಯದ ವಿದ್ಯುತ್ ಸಮಸ್ಯೆ ಏಕೆ, ನಿವಾರಣೆ ಹೇಗೆ?
ಬೆಂಗಳೂರು, ಸೆಪ್ಟೆಂಬರ್, 12 : ಕರ್ನಾಟಕದಲ್ಲಿ ಸದ್ಯ ವಿದ್ಯುತ್ ಕಡಿತದ್ದೇ ಚರ್ಚೆ. ಮುಂಗಾರು ಮಳೆ ಕೈ ಕೊಟ್ಟು ಜಲ ವಿದ್ಯುತ್ ಉತ್ಪಾದನೆ ಕುಸಿತಗೊಂಡಿದೆ. ಇತರ ಇಂಧನ ಮೂಲಗಳು ಬೇಡಿಕೆಯಷ್ಟು ವಿದ್ಯುತ್ ಉತ್ಪಾದನೆ ಮಾಡುತ್ತಿಲ್ಲ. ಆದ್ದರಿಂದ, ಬೀದರ್ನಿಂದ ಚಾಮರಾಜನಗರದ ತನಕ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆ. ಹಾಗಾದರೆ ಕೊರತೆ ಏಕೆ, ನಿವಾರಣೆ ಹೇಗೆ ಮುಂತಾದ ವಿವರಗಳು ಇಲ್ಲಿವೆ.
ಕರ್ನಾಟಕ ರಾಜ್ಯದ ಮೇಲೆ 40 ವರ್ಷಗಳಲ್ಲೇ ಇಲ್ಲದಂತಹ ಬರದ ಕಾರ್ಮೋಡ ಬಾರಿ ಕವಿದಿದೆ. 136 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲೂ ಈ ಬಾರಿ ಬಾರದ ಛಾಯೆ ಇದೆ. [ಬೀದಿ ದೀಪಕ್ಕೂ ಬಂತು ಲೋಡ್ ಶೆಡ್ಡಿಂಗ್]

ಕರ್ನಾಟಕ 3600 ಮೆಗಾವಾಟ್ ಜಲ ವಿದ್ಯುತ್ ಉತ್ಪಾದನೆ ಮಾಡುವ ಶಕ್ತಿ ಹೊಂದಿದೆ. ಶರಾವತಿ ನದಿಯಿಂದ 1400 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಕಾಳಿಯಿಂದ 1250 ಮೆಗಾವಾಟ್, ಆಲಮಟ್ಟಿಯಿಂದ 290 ಮೆಗಾವಾಟ್ ಹೀಗೆ ವಿವಿಧ ಜಲವಿದ್ಯುತ್ ಯೋಜನೆಗಳಿವೆ. [ಬೆಂಗಳೂರಲ್ಲಿ 4 ಗಂಟೆ ಲೋಡ್ ಶೆಡ್ಡಿಂಗ್]
ಆದರೆ, ಈ ಬಾರಿ ಬರದ ಕಾರಣ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಜಲಾಶಯದಲ್ಲಿರುವ ನೀರನ್ನು ಕುಡಿಯುವ ನೀರಿಗಾಗಿ ಮೀಸಲಾಗಿಡಲಾಗಿದೆ. ಆದ್ದರಿಂದ ಜಲ ವಿದ್ಯುತ್ ಉತ್ಪಾದನೆ ಕುಸಿದಿದೆ. ಇದರಿಂದ ವಿದ್ಯುತ್ ಕೊರತೆ ಎದುರಾಗಿದ್ದು, ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ.
ತಾತ್ಕಾಲಿಕ ಕ್ರಮಗಳು : ಕರ್ನಾಟಕ ಸರ್ಕಾರ ವಿದ್ಯುತ್ ಕೊರತೆಯನ್ನು ನಿವಾರಿಸಲು ತಾತ್ಕಾಲಿಕ ಕ್ರಮಗಳನ್ನು ಕೈಗೊಂಡಿದೆ. ಇಂಧನ ಇಲಾಖೆ 900 ಮೆಗಾವಾಟ್ ವಿದ್ಯುತ್ ಅನ್ನು ಎಲ್ಲಾ ಮೂಲಗಳಿಂದ ಖರೀದಿ ಮಾಡಲಿದೆ. ವಿದ್ಯುತ್ ಕೊರತೆ ಇನ್ನೂ ಹೆಚ್ಚಳವಾದರೆ ಅಗತ್ಯಕ್ಕೆ ಅನುಗುಣವಾಗಿ ಖರೀದಿ ಮಾಡಲು ಸರ್ಕಾರ ಸಿದ್ಧವಾಗಿದೆ.
ವಿದ್ಯುತ್ ಕಾಯ್ದೆ ಸೆಕ್ಷನ್ 11 ಅನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಇದು ಜಾರಿಗೆ ಬಂದರೆ ರಾಜ್ಯದಲ್ಲಿ ಖಾಸಗಿಯವರು ಉತ್ಪಾದಿಸುವ ವಿದ್ಯುತ್ ಅನ್ನು ಹೊರರಾಜ್ಯಗಳಿಗೆ ಮಾರಾಟ ಮಾಡುವಂತಿಲ್ಲ. ಕಡ್ಡಾಯವಾಗಿ ರಾಜ್ಯದ ವಿದ್ಯುತ್ ಸ್ಥಾವರಗಳಿಗೆ ಪೂರೈಸಬೇಕು ಇದರಿಂದ ಸುಮಾರು 200 ಮೆಗಾವಾಟ್ ವಿದ್ಯುತ್ ಸಿಗಲಿದೆ.
ಯುಪಿಸಿಎಲ್, ಬಿಟಿಪಿಎಸ್, ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸೇರಿಸಿ ಸುಮಾರು 2000 ಮೆಗಾವಾಟ್ ವಿದ್ಯುತ್ ಸಿಗಲಿದೆ. ಸರ್ಕಾರ ಈ ಘಟಕಗಳ ತುರ್ತು ದುರಸ್ತಿಗಳನ್ನು ಪೂರ್ಣಗೊಳಿಸಿ, ವಿದ್ಯುತ್ ಉತ್ಪಾದನೆ ಮಾಡುವಂತೆ ಸೂಚನೆ ನೀಡಿದೆ. [ಮಾಹಿತಿ : Karnataka Government - Updates]












Click it and Unblock the Notifications