ಹೆಬ್ಬಾಳದಲ್ಲಿ ಸೋತ್ರೆ ನನ್ನ ರಾಜಕೀಯ ಭವಿಷ್ಯ ಮುಗಿದಂತೆ ಅಂದಿದ್ರು ಸಿದ್ದು
ಹೆಬ್ಬಾಳದಲ್ಲಿ ಈ ಹಿಂದೆ ನಡೆದ ಎರಡು ಅಸೆಂಬ್ಲಿ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿಯ ಚುನಾವಣೆ ಕಾಂಗ್ರೆಸ್ ಪಾಲಿಗೆ, ಅದಕ್ಕಿಂತಲೂ ಮುಖ್ಯವಾಗಿ ಸಿದ್ದರಾಮಯ್ಯನವರಿಗೆ ನಿರ್ಣಾಯಕವಾಗಿತ್ತು.
ಮೂಲ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಬಯಸಿದ ಅಭ್ಯರ್ಥಿಗೆ ಹೆಬ್ಬಾಳದಲ್ಲಿ ಟಿಕೆಟ್ ಸಿಕ್ಕ ನಂತರ, ಈ ಕ್ಷೇತ್ರವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಬಿದ್ದವರಲ್ಲಿ ಸಿದ್ದರಾಮಯ್ಯ ಮೊದಲಿಗರು. ನಂತರವಷ್ಟೇ ಖರ್ಗೆ, ಡಿಕೆಶಿ, ಬೆಂಗಳೂರು ವ್ಯಾಪ್ತಿಯ ಸಚಿವರುಗಳು. (ಸಿದ್ದು ಸರಕಾರಕ್ಕೆ ಟೈಂ ಸರಿಯಿಲ್ಲ)
ಸಿದ್ದರಾಮಯ್ಯನವರೇ ತಮ್ಮ ಆಪ್ತರಲ್ಲಿ ಹೆಬ್ಬಾಳದಲ್ಲಿ ಸೋತರೆ ನನ್ನ ರಾಜಕೀಯ ಭವಿಷ್ಯವೇ ಮಂಕಾದಂತೆ ಎಂದು ಹೇಳಿಕೊಂಡಿದ್ದರು. ವಾರ್ಡಿಗೆ ಒಂದಿಬ್ಬರು ಸಚಿವರನ್ನು ನೇಮಿಸಿದ್ದರು.
ಪ್ರಬಲ ಒಕ್ಕಲಿಗ ಸಮುದಾಯದ ಮತ್ತು ಪಕ್ಷದ ವಿನ್ನಿಂಗ್ ಲೀಡರ್ ಎಂದೇ ಕರೆಯಲ್ಪಡುವ ಡಿ ಕೆ ಶಿವಕುಮಾರ್ ಅವರಿಗೆ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ವಹಿಸಿದ್ದರು. ಮುನಿಸಿಕೊಂಡಿದ್ದ ಆಪ್ತ ಬೈರತಿ ಸುರೇಶ್ ಅವರನ್ನೂ ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಹೋಗಿದ್ದರು.
ಹೆಬ್ಬಾಳ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತ ಪ್ರಮುಖವಾದರೂ, ಕಳೆದೆರಡು ಚುನಾವಣೆಯಲ್ಲಿ ಬಿಜೆಪಿ ಗೆದ್ದ ಅಂತರ ಈ ಬಾರಿಯ ಚುನಾವಣೆಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿರುವುದು, ಮತದಾರನ ನಾಡಿಮಿಡಿತ ಬೇರೇಯದ್ದೇ ಎಂದು ರುಜುವಾತಾಗಿದೆ. (ಹೆಬ್ಬಾಳದಲ್ಲಿ ಕಾಂಗ್ರೆಸ್ ಬೀಳಲು 7 ಕಾರಣ)
ಹೆಬ್ಬಾಳ ಸೋಲಿಗೆ ಈ ಕಾರಣವೂ ಇರಬಹುದು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಡಿಕೆಶಿ ಸಂಘಟನಾ ಚಾತುರ್ಯ
ಡಿ ಕೆ ಶಿವಕುಮಾರ್ ಅವರ ಸಂಘಟನಾ ಚಾತುರ್ಯ ಹೆಬ್ಬಾಳದಲ್ಲಿ ವರ್ಕೌಟ್ ಆಗಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ, ಬಿಜೆಪಿ ಅಭ್ಯರ್ಥಿ ಸ್ಥಳೀಯರಲ್ಲ, ಕ್ಷೇತ್ರದ ವ್ಯಾಪ್ತಿಯ ಸಂಸದ (ಬೆಂಗಳೂರು ಉತ್ತರ) ಸದಾನಂದ ಗೌಡ ಅವರೇನೂ ಅಂತಹ ಮಾಸ್ ಲೀಡರ್ ಅಲ್ಲ ಎನ್ನುವ ಅತಿಯಾದ ವಿಶ್ವಾಸದಿಂದಾಗಿ ಕಾಂಗ್ರೆಸ್ಸಿಗೆ ಇಂದು ಈ ರೀತಿಯ ಮುಖಭಂಗವಾಗಲು ಕಾರಣವಾಗಿರಬಹುದು.

ಹೆಬ್ಬಾಳದ ಎಂಟು ವಾರ್ಡುಗಳು
ಹೆಬ್ಬಾಳ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಾರ್ಡುಗಳು, ಅದರಲ್ಲಿ ಬಹುಸಂಖ್ಯಾತ ಸಮುದಾಯವರು ಹೆಚ್ಚಾಗಿರುವ ವಾರ್ಡುಗಳು ಮೂರು ಮತ್ತು ಇನ್ನು ಐದರಲ್ಲಿ ಅಲ್ಪಸಂಖ್ಯಾತ ಸಮುದಾಯದ್ದೇ ಪಾರುಪತ್ಯ. ಅಸಲಿಗೆ ಈ ಐದು ವಾರ್ಡುಗಳ ಪೈಕಿ ಮೂರು ವಾರ್ಡುಗಳಲ್ಲೇ ಮತದಾನ ಹೆಚ್ಚಾಗಿ ಆಗಿರುವುದು. ಆದರೂ ಬಿಜೆಪಿಗೆ ಈ ಅಂತರದ ಜಯಕ್ಕೆ ಕಾರಣ ಏನಿರಬಹುದು ಅಂದರೆ ಅದಕ್ಕೆ ಪದ್ಮನಾಭನಗರದ ಕಡೆ ಬೊಟ್ಟು ತೋರಿಸಿದರೆ ಅದಕ್ಕೆ ಕಾರಣವೂ ಇದೆ.

ಜಮೀರ್ ಅಹಮದ್
ಜೆಡಿಎಸ್ ಭಿನ್ನಮತ ಶಾಸಕ ಜಮೀರ್ ಅಹಮದ್ ಅವರನ್ನು ಮುಖ್ಯಮಂತ್ರಿಗಳು ತನ್ನ ಹತ್ತಿರಕ್ಕೆ ಬಿಟ್ಟುಕೊಂಡಿದ್ದು ಸೋಲಿಗೆ ಮಗುದೊಂದು ಕಾರಣ ಇದ್ದರೂ ಇರಬಹುದು. ಮುಂದಿನ ಸ್ಲೈಡ್ ನಲ್ಲಿ ಕಾಂಗ್ರೆಸ್ ಸೋಲಿಗೆ ಜಮೀರ್ ಪಾತ್ರ ಏನಿರಬಹುದು ಎನ್ನುವ ಸಾಧ್ಯತೆ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಪ್ರತೀ ಚುನಾವಣೆಯಲ್ಲಿ ಗೌಡ್ರ ಉಪಸ್ಥಿತಿ ಇಲ್ಲದಿದ್ದರೆ ಹೇಗೆ
ಒಕ್ಕಲಿಗ ಸಮುದಾಯದ ಅಘೋಷಿತ ಲೀಡರ್ ದೇವೇಗೌಡ್ರ ವಿರುದ್ದ ಹಿಂಬಾಗಿಲಿನಿಂದ ಮೌಲ್ವಿಗಳ ಮೂಲಕ ಜಮೀರ್ ಪ್ರತಿಭಟನೆ ಆಯೋಜಿಸಿದ್ದರು. ಪ್ರತಿಭಟನೆಯ ವೇಳೆ 'ದೇವೇಗೌಡ ಮುರ್ದಾಬಾದ್' ಘೋಷಣೆ ಕೂಗಲಾಯಿತು. ಸಮುದಾಯದ ಹಿರಿಯ ನಾಯಕನನ್ನು ಇಷ್ಟು ಕೇವಲವಾಗಿ ನಡೆಸಿಕೊಂಡ ಮೇಲೆ ಎಲ್ಲೋ ಒಂದು ಕಡೆ 'ಸೆಂಟಿಮೆಂಟ್ ಟಚ್' ಆಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ. ಹೆಬ್ಬಾಳ ವ್ಯಾಪ್ತಿಯ ಸಂಸದ ಮತ್ತು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇಬ್ಬರೂ ಒಕ್ಕಲಿಗ ಸಮುದಾಯದವರು. ಇಷ್ಟು ಅಂತರದ ಜಯ ಸಿಗಬೇಕಾದರೆ ಇದೂ ಒಂದು ಕಾರಣ ಇದ್ದರೂ ಇರಬಹುದು.

ಸದಾನಂದ ಗೌಡ
ಸಾರ್ವಜನಿಕವಾಗಿ ಉತ್ತಮ ಹೆಸರನ್ನೇ ಉಳಿಸಿಕೊಂಡಿರುವ ಮತ್ತು ಜನಸ್ನೇಹಿಯಾಗಿರುವ ಬೆಂಗಳೂರು ಉತ್ತರ ಸಂಸದ, ಕೇಂದ್ರ ಕಾನೂನು ಸಚಿವ ಸದಾನಂದ ಗೌಡ, ತನ್ನ ಆಪ್ತನಿಗೆ ಹಠಕ್ಕೆ ಬಿದ್ದು ಸೀಟ್ ಕೊಡಿಸಿದ್ದರು. ಜೊತೆಗೆ ಅಹೋರಾತ್ರಿ ತಂತ್ರಗಾರಿಕೆ ಹಣೆದಿದ್ದರು. ಮುಂಜಾನೆ ವಾಕಿಂಗ್ ನಲ್ಲಿ, ಕ್ರಿಕೆಟ್ ಗ್ರೌಂಡ್ ನಲ್ಲಿ ಜನರನ್ನು ಭೇಟಿಯಾಗಿದ್ದರು, ಮತ ಯಾಚಿಸಿದರು.

ಜಗದೀಶ್ ಕುಮಾರ್
ಮೇಲಿನ ಎಲ್ಲಾ ಕಾರಣದ ಜೊತೆ ಪ್ರಮುಖವಾಗಿ ಯಾರ ನಿಧನದಿಂದ ಮರುಚುನಾವಣೆ ನಡೆಯುತ್ತಿದೆಯೋ (ಜಗದೀಶ್ ಕುಮಾರ್) ಅವರು ಬಿಟ್ಟು ಹೋದ ಒಳ್ಳೆ ಕೆಲಸ, ಜನರ ಪ್ರೀತಿ ಇಂದು ಬಿಜೆಪಿಗೆ ವರವಾಗಿ ಪರಿಣಮಿಸಿರಬಹುದು. ಈ ಮಟ್ಟಿನ ವಿನ್ನಿಂಗ್ ಮಾರ್ಜಿನ್ ಗೆ ಬಿಜೆಪಿ, ಜಗದೀಶ್ ಕುಮಾರ್ ಅವರಿಗೆ ಇನ್ನೊಮ್ಮೆ ಶ್ರದ್ದಾಂಜಲಿ ಅರ್ಪಿಸಲೇ ಬೇಕು.

ಸಿದ್ದರಾಮಯ್ಯ
ಉಪಚುನಾವಣೆಯ ಸೋಲು, ಮುಂದಿನ ಅಸೆಂಬ್ಲಿ ಚುನಾವಣೆಯ ಫಲಿತಾಂಶದ ದಿಕ್ಸೂಚಿ ಎನ್ನುವುದು ಗೆದ್ದವರು ಹೇಳಿದರೂ, ಅದು ಒಪ್ಪಿಕೊಳ್ಳಲು ದೂರವಾದಂತಹ ಮಾತು. ಆದರೂ, ಸಿದ್ದರಾಮಯ್ಯನವರಿಗೆ ಹೆಬ್ಬಾಳ ಸೋಲಿನ ಟಿಕ್.. ಟಿಕ್ ಬಡಿತದ ಸದ್ದು ತೀವ್ರವಾದರೂ ಆಗಬಹುದು.

ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ
ಅಧಿಕಾರಕ್ಕೆ ಬಂದ ನಂತರ ಒಂದು ರೀತಿಯಲ್ಲಿ ಹೈಕಮಾಂಡ್ ಮೇಲೆ ತನ್ನ ಛಾಪು ತೋರಿಸಿದ್ದ ಸಿದ್ದರಾಮಯ್ಯ, ಒಂದು ವೇಳೆ ಚಾಲ್ತಿಯಲ್ಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದರೆ ಮತ್ತೆ ಪಕ್ಷದಲ್ಲಿ ಹಿಡಿತ ಮುಂದುವರಿಸಬಹುದು. ಇಲ್ಲಾಂದ್ರೆ ಮಾತ್ರ ಸಿದ್ದುಗೆ ಕಷ್ಟ.. ಕಷ್ಟ..












Click it and Unblock the Notifications