ಬಜೆಟ್ ಮುನ್ನ ಪ್ರಧಾನಿ ಮೋದಿ ಬಗ್ಗೆ ದೇವೇಗೌಡರ ಶಾಕಿಂಗ್ ಹೇಳಿಕೆ
Recommended Video

ಇತ್ತ ಪುತ್ರ, ಸಿಎಂ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ವಿರುದ್ದ ಹರಿಹಾಯುತ್ತಿದ್ದರೆ, ಅತ್ತ ತಂದೆ ದೇವೇಗೌಡ್ರು, ಪ್ರಧಾನಿ ಮೋದಿ ವಿರುದ್ದ ಸಾಫ್ಟ್ ಕಾರ್ನರ್ ತೋರುತ್ತಿದ್ದಾರೆ.
ಬಜೆಟ್ ಅಧಿವೇಶನಕ್ಕೆ ಮುನ್ನ, ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿ ಶಾಸಕಾಂಗ ಸಭೆ ನಡೆಸಲು ನಿರ್ಧರಿಸಿರುವುದು ಒಂದೆಡೆ, ಇನ್ನೊಂದೆಡೆ, ಸಿಎಂ ಕುಮಾರಸ್ವಾಮಿ, ಸಮ್ಮಿಶ್ರ ಸರಕಾರ ಉರುಳಿಸಲು ಬಿಜೆಪಿಯ ಆಫರ್ ಬಗ್ಗೆ ಮಾತನಾಡುತ್ತಿದ್ದಾರೆ.
ಕೋಲ್ಕತ್ತಾದಲ್ಲಿ ಮಮತಾ ವರ್ಸಸ್ ಸಿಬಿಐ ನಡುವಿನ ಘರ್ಷಣೆಯ ವಿಚಾರದಲ್ಲಿ ಮೋದಿ ವಿರುದ್ದ ಕೆಂಡಾಮಂಡಲವಾಗಿದ್ದ ದೇವೇಗೌಡ್ರು, ಸಮ್ಮಿಶ್ರ ಸರಕಾರ ಅಲುಗಾಡಿಸುವಲ್ಲಿ ಮೋದಿಯವರ ಯಾವ ಪಾತ್ರವೂ ಇಲ್ಲ ಎನ್ನುವ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಸಿಎಂ ಕುಮಾರಸ್ವಾಮಿ, ಸರಕಾರ ಉರುಳಿಸಲು ಬಿಜೆಪಿ ನೀಡುತ್ತಿರುವ ಆಫರ್ ಬಗ್ಗೆ ನೀಡಿದ ಹೇಳಿಕೆಯ, 24ಗಂಟೆಯೊಳಗೆ ಗೌಡ್ರು ಆಡಿರುವ ಮಾತು, ಪ್ರಸಕ್ತ ರಾಜಕೀಯದಲ್ಲಿ ಭಾರೀ ಅರ್ಥಗರ್ಭಿತವಾಗಿದೆ.

ಮೋದಿಯವರ ಪಾತ್ರ ಇದೆ ಎಂದು ನನಗನಿಸುವುದಿಲ್ಲ
ಸಮ್ಮಿಶ್ರ ಸರಕಾರ ಅಲುಗಾಡಿಸುವಲ್ಲಿ ಪ್ರಧಾನಿ ಮೋದಿಯವರ ಪಾತ್ರ ಇದೆ ಎಂದು ನನಗನಿಸುವುದಿಲ್ಲ. ರಾಜ್ಯ ಬಿಜೆಪಿ ನಾಯಕರಿಂದಲೇ ಸರಕಾರ ಉರುಳಿಸಲು ಪ್ರಯತ್ನ ನಡೆದಿದೆಯೇ ಹೊರತು, ನಾನು ಮೋದಿಯನ್ನು ಇದಕ್ಕೆ ದೂರುವುದಿಲ್ಲ - ದೇವೇಗೌಡ.

ರಾಜ್ಯದ ಜನತೆ ಶಾಕ್ ಆಗುತ್ತಾರೆ
ಬಿಜೆಪಿ ಒಡ್ಡುತ್ತಿರುವ ಆಮಿಷದ ಮೊತ್ತ ಕೇಳಿದರೆ ರಾಜ್ಯದ ಜನತೆ ಶಾಕ್ ಆಗುತ್ತಾರೆ. ಇವರಿಗೆ ಇಷ್ಟೊಂದು ದುಡ್ಡು ಯಾವ ಮೂಲದಿಂದ ಬರುತ್ತಿದೆ. ರಾಜ್ಯದ ಜನರು ಇದನ್ನು ಅರ್ಥಮಾಡಿಕೊಳ್ಳಬೇಕು. ನಳಿನ್ ಕುಮಾರ್ ಕಟೀಲ್ ಹಣ ಹೊಂದಿಸುತ್ತಿದ್ದಾರಾ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶಂಕೆ ವ್ಯಕ್ತಪಡಿಸಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ
ಕೇವಲ ಮೂರು ದಿನ ಸಿಎಂ ಆದೆ ಎನ್ನುವ ನೋವು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಕಾಡುತ್ತಿದೆ. ಮುಖ್ಯಮಂತ್ರಿ ಕುರ್ಚಿಯ ಮೇಲಿನ ವ್ಯಾಮೋಹದಿಂದ, ಅವರು ಸರಕಾರ ಉರುಳಿಸುವ ಕೆಲಸಕ್ಕೆ ಕೈಹಾಕಿದ್ದಾರೆ, ಪ್ರಯತ್ನ ಮುಂದುವರಿಸುತ್ತನೇ ಇದ್ದಾರೆ. - ದೇವೇಗೌಡ.

ಕೇಂದ್ರದ ಯಾವುದೇ ನಾಯಕರ ಪಾತ್ರವಿಲ್ಲ
ಬರೀ ಮೋದಿಯಲ್ಲ, ಕೇಂದ್ರದ ಯಾವುದೇ ನಾಯಕರ ಪಾತ್ರ ಆಪರೇಶನ್ ಕಮಲದಲ್ಲಿಲ್ಲ. ಇದೆಲ್ಲಾ ನಡೆಯುತ್ತಿರುವುದು ಯಡಿಯೂರಪ್ಪನವರ ಹುಕುಂನಂತೆ, ಅವರ ಮಾತನ್ನು ಪಾಲಿಸಲು, ರಾಜ್ಯದ ಇತರ ಮುಖಂಡರು ಪ್ರಯತ್ನಿಸುತ್ತಿದ್ದಾರೆಂದು ದೇವೇಗೌಡ, ಬಿಎಸ್ವೈ ವಿರುದ್ದ ಕಿಡಿಕಾರಿದ್ದಾರೆ. ಬಜೆಟ್ ಅಧಿವೇಶನ ಆರಂಭವಾಗುತ್ತಿರುವುದರಿಂದ ಗೌಡ್ರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಸರಕಾರ ಇದ್ದರೂ ಒಂದೇ, ಬಿದ್ದರೂ ಒಂದೇ
ಬಿಜೆಪಿ ಇನ್ನೂ ಲೆಕ್ಕಾಚಾರದ ಹಿಂದೆಯೇ ಬಿದ್ದಿದೆ. ಇಬ್ಬರು ಪಕ್ಷೇತರರು ತಮ್ಮ ಜೊತೆಗಿದ್ದಾರೆ. ಜೊತೆಗೆ, ತಾವು ಲೆಕ್ಕ ಹಾಕುತ್ತಿರುವ ಹನ್ನೊಂದು ಆಡಳಿತಾರೂಢ ಪಕ್ಷದ ಸದಸ್ಯರು ಕೈಜೋಡಿಸಿದರೆ 106+2+11=119 ಆಗುತ್ತದೆ. ಆವಾಗ, ಬಜೆಟ್ ಅನುಮೋದನೆ ಪಡೆಯಲು ಸಾಧ್ಯವಾಗುವುದಿಲ್ಲ. ಬಜೆಟಿಗೆ ಆಂಗೀಕಾರವಾಗದೇ ಇದ್ದಲ್ಲಿ, ನಯಾಪೈಸೆ ಬೊಕ್ಕಸದಿಂದ ಖರ್ಚು ಮಾಡುವಂತಿಲ್ಲ. ಒಂದು ರೀತಿಯಲ್ಲಿ ಸರಕಾರ ಇದ್ದರೂ ಒಂದೇ, ಬಿದ್ದರೂ ಒಂದೇ..











Click it and Unblock the Notifications