ಫೋನ್ ಕದ್ದಾಲಿಕೆ ಆರೋಪ: ಕುಮಾರಸ್ವಾಮಿ ಸ್ಪಷ್ಟನೆ
ಬೆಂಗಳೂರು, ಆಗಸ್ಟ್ 14: 'ನನ್ನದೂ ಸೇರಿದಂತೆ ಅನರ್ಹ ಶಾಸಕರ ಫೋನ್ ಕದ್ದಾಲಿಕೆ ಮಾಡಿದ್ದಾರೆ' ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಮಾಡಿರುವ ಆರೋಪಕ್ಕೆ ಕುಮಾರಸ್ವಾಮಿ ಅವರು ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಕುಮಾರಸ್ವಾಮಿ ಅವರು, ಎಚ್.ವಿಶ್ವನಾಥ್, ಅನರ್ಹ ಶಾಸಕರು ಸೇರಿದಂತೆ ಹಲವು ಹಿರಿಯ ರಾಜಕಾರಣಿಗಳ, ಪತ್ರಕರ್ತರ ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ ಎಂಬ ಗುರುತರ ಆರೋಪವನ್ನು ಮಾಡಲಾಗಿತ್ತು. ಆದರೆ ಈ ಆರೋಪವನ್ನು ಕುಮಾರಸ್ವಾಮಿ ಅವರು ತಳ್ಳಿ ಹಾಕಿದ್ದಾರೆ.
ಪೋನ್ ಕದ್ದಾಲಿಕೆ: ಕುಮಾರಸ್ವಾಮಿ ವಿರುದ್ಧ ವಿಶ್ವನಾಥ್ ಗರಂ
ಟ್ವಿಟ್ಟರ್ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ, ಮುಖ್ಯಮಂತ್ರಿ ಅಧಿಕಾರ ಶಾಶ್ವತವಲ್ಲ ಎಂದು ಪದೇ ಪದೇ ಹೇಳುತ್ತಿದ್ದವನು ನಾನು. ಈ ಕುರ್ಚಿಗಾಗಿ ಟೆಲಿಫೋನ್ ಕದ್ದಾಲಿಕೆ ಮಾಡಿ ಅಧಿಕಾರ ಉಳಿಸಿಕೊಳ್ಳುವ ಅವಶ್ಯಕತೆ ನನಗಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ವಿಚಾರದಲ್ಲಿ ಕೆಲವರು ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಕುಮಾರಸ್ವಾಮಿ ಅವರು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.
"ಮೈತ್ರಿ ಸರ್ಕಾರವಿದ್ದಾಗ ನನ್ನ ಫೋನನ್ನೂ ಟ್ರ್ಯಾಪ್ ಮಾಡಿದ್ದರು": ಎಂ.ಪಿ. ರೇಣುಕಾಚಾರ್ಯ
ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಕೆಲವು ಹಿರಿಯ ರಾಜಕಾರಣಿಗಳು, ಅನರ್ಹ ಶಾಸಕರು, ಪತ್ರಕರ್ತರು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು 600 ಜನರ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ಎಚ್.ವಿಶ್ವನಾಥ್ ಆರೋಪಿಸಿದ್ದಾರೆ. ಬಿಜೆಪಿ ಶಾಸಕರೂ, ಮುಖಂಡರು ಸಹ ಆರೋಪ ಮಾಡಿ, ತನಿಖೆಗೆ ಒತ್ತಾಯಿಸಿದ್ದಾರೆ.