ಐತಿಹಾಸಿಕ ಪರ್ಯಾಯಕ್ಕೆ ದಲಿತರನ್ನು ಆಹ್ವಾನಿಸಿದ ಪೇಜಾವರಶ್ರೀ
ಎರಡು ವರ್ಷಕ್ಕೊಮ್ಮೆ ಕರಾವಳಿ ಕರ್ನಾಟಕ ಭಾಗದಲ್ಲಿ ನಾಡಹಬ್ಬದ ರೀತಿಯಲ್ಲಿ ಆಚರಿಸಲಾಗುವ ಉಡುಪಿ ಪರ್ಯಾಯ ಮಹೋತ್ಸವಕ್ಕೆ 7-8 ದಿನ ಬಾಕಿಯುಳಿದಿದೆ.
ಈ ಹಿಂದಿನ ಪರ್ಯಾಯ ಮಹೋತ್ಸವಕ್ಕೆ ಹೋಲಿಸಿದರೆ ಈ ಬಾರಿಯ ಪೇಜಾವರ ಶ್ರೀಗಳ ಪರ್ಯಾಯ ವಿಶೇಷ ಮಹತ್ವನ್ನು ಪಡೆದುಕೊಂಡಿದೆ. ಕಾರಣ, ಸೋದೆ ವಾದಿರಾಜ ಗುರುಗಳ ನಂತರ ಅಷ್ಠಮಠದ ಯತಿಯೊಬ್ಬರು ಐದನೇ ಬಾರಿ ಸರ್ವಜ್ಞ ಪೀಠವನ್ನು ಏರುತ್ತಿರುವುದು ಇದೇ ಮೊದಲು. (ಪೇಜಾವರ ಶ್ರೀಗಳ ಸಂದರ್ಶನ)
ನಾಡಿನ ಹಿರಿಯ ಧಾರ್ಮಿಕ ಮುಖಂಡರೂ ಮತ್ತು ವಿಶ್ವಹಿಂದೂ ಪರಿಷತ್ ಸಂಘಟನೆಯ ಗೌರವಾಧ್ಯಕ್ಷರೂ ಆಗಿರುವ ಪೇಜಾವರ ಶ್ರೀಗಳ ಪರ್ಯಾಯ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ವಿವಿಧ ಹಿಂದೂ ಸಂಘಟನೆಗಳು ಠೊಂಕ ಕಟ್ಟಿ ನಿಂತಿವೆ.
ಈ ನಡುವೆ ಶುಕ್ರವಾರ (ಜ 8) ಮಾತನಾಡಿದ ಪೇಜಾವರ ಶ್ರೀಗಳು, ದಲಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ತಮ್ಮ ಪ್ರಯತ್ನದ ಮುಂದುವರಿದ ಭಾಗವಾಗಿ ಪರ್ಯಾಯ ಮಹೋತ್ಸವಕ್ಕೆ ದಲಿತರಿಗೆ ವಿಶೇಷ ಆಹ್ವಾನ ನೀಡಿದ್ದಾರೆ. (ಭಗವಾನ್ ಅವರಿಗೆ ಪ್ರಶಸ್ತಿ ಕೊಟ್ಟ ಬಗ್ಗೆ ಶ್ರೀಗಳು)
84ರ ತಮ್ಮ ಇಳಿ ವಯಸ್ಸಿನಲ್ಲೂ ಹತ್ತು ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಗಳು, ಬನ್ನಿ.. ಪರ್ಯಾಯ ಉತ್ಸವದಲ್ಲಿ ಭಾಗವಹಿಸಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಿ ಎಂದು ದಲಿತ ಸಮುದಾಯದವರಿಗೆ ಆಹ್ವಾನ ನೀಡಿದ್ದಾರೆ.
ಪರ್ಯಾಯ ಮೆರವಣಿಗೆ, ದರ್ಬಾರಿಗೆ ಹದ್ದುಕಣ್ಣಿನ ಪೊಲೀಸ್ ಭದ್ರತೆ, ಮುಂದೆ ಓದಿ..
ಎಲ್ಲೆಲ್ಲೂ ವಿದ್ಯುತ್ ದೀಪಾಲಂಕಾರ
ಪರ್ಯಾಯಕ್ಕೆ ಇನ್ನೂ ಒಂದು ವಾರ ಬಾಕಿ ಇದ್ದರೂ ಉಡುಪಿ ನಗರದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಸಂಕ್ರಾತಿ ಹಬ್ಬದ ಸಮಯ, ಜೊತೆಗೆ ಶಬರಿಮಲೆ ದೇವಾಲಯಕ್ಕೆ ಹೋಗುವ ಅಯ್ಯಪ್ಪ ಭಕ್ತರು ಉಡುಪಿ ಶ್ರೀಕೃಷ್ಣನ ದರುಶನ ಪಡೆದುಕೊಳ್ಳುವ ಪದ್ದತಿ ಕೆಲವೊಂದು ಭಾಗದ ಜನರಲ್ಲಿ ಇರುವುದರಿಂದ ಉಡುಪಿ ಭಕ್ತಾದಿಗಳಿಂದ ತುಂಬಿದೆ. (ಚಿತ್ರದಲ್ಲಿ ಪೇಜಾವರ ಮಠ)
ಠೊಂಕ ಕಟ್ಟಿನಿಂತಿರುವ ಹಿಂದೂ ಸಂಘಟನೆಗಳು
ಪೇಜಾವರ ಅಧೋಕ್ಷಜ ಮಠದ ವಿಶ್ವೇಶ್ವರತೀರ್ಥ ಶ್ರೀಗಳ ಪರ್ಯಾಯವನ್ನು ಶಿಸ್ತುಬದ್ದವಾಗಿ ನಡೆಸಲು ಹಿಂದೂಪರ ಸಂಘಟನೆಗಳು ಠೊಂಕ ಕಟ್ಟಿ ನಿಂತಿವೆ. ಬೆಟ್ಟದಷ್ಟಿರುವ ಕೆಲಸವನ್ನು ಹಂಚಿಕೊಂಡು ತಮಗೆ ವಹಿಸಲಾಗಿರುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕಾರ್ಯಕರ್ತರು ಯೋಜನೆ ಪ್ರಕಾರ ಕೆಲಸ ಮಾಡುತ್ತಿದ್ದಾರೆ.
ಪೊಲೀಸರ ಹದ್ದಿನ ಕಣ್ಣು
ಉಡುಪಿಯ ಜನಪ್ರಿಯ ಪೊಲೀಸ್ ವರಿಷ್ಟಾಧಿಕಾರಿ ಅಣ್ಣಾಮಲೈ ನೇತೃತದಲ್ಲಿ ಭಾರೀ ಬಂದೋಬಸ್ತ್ ನೀಡಲು ಜಿಲ್ಲಾ ಪೊಲೀಸ್ ಇಲಾಖೆ ಸಜ್ಜಾಗಿದೆ. ಜನವರಿ ಹದಿನೆಂಟರ ನಸುಕಿನ ಮೂರು ಗಂಟೆಗೆ ಆರಂಭವಾಗುವ ಮೆರವಣಿಗೆಯಲ್ಲಿ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಮೆರವಣಿಗೆ ರಥಬೀದಿ ಪ್ರವೇಶಿಸಿದ ನಂತರ ವಿವಿಧ ಧಾರ್ಮಿಕ ಕೆಲಸಗಳು ಮುಗಿದ ನಂತರ ಕೃಷ್ಣಮಠದ ಆಡಳಿತವನ್ನು ಮುಂದಿನ ಎರಡು ವರ್ಷಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ. ಇದಾದ ನಂತರ ಪರ್ಯಾಯ ದರ್ಬಾರ್ ನಡೆಯಲಿದೆ.
ದಲಿತರಿಗೆ ಆಹ್ವಾನ
ನನ್ನ ಪರ್ಯಾಯ ಅವಧಿಯಲ್ಲಿ ಯಾವುದೇ ಜಾತಿಗೂ ತಾರತಮ್ಯವಿರುವುದಿಲ್ಲ. ಎಲ್ಲರೊಂದಿಗೆ ದಲಿತರಿಗೂ ಪಂಕ್ತಿಭೋಜನದ ವ್ಯವಸ್ಥೆ ಕಲ್ಪಿಸಲಾಗುವುದು. ಮಡೆಸ್ನಾನಕ್ಕೂ ಇಲ್ಲಿ ಈ ಬಾರಿ ಅವಕಾಶ ನೀಡಲಾಗುವುದಿಲ್ಲ, ಬದಲಿಗೆ ಎಡೆಸ್ನಾನ ಮಾಡಬಹುದು. ಆದರೆ, ಮಠದ ಕೆಲ ಪದ್ದತಿಗಳನ್ನು ಮುರಿಯಲಾಗುವುದಿಲ್ಲ, ಹಾಗಾಗಿ ಕೆಲವೊಂದು ಸಂಪ್ರದಾಯಗಳು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ರೀತಿಯಲ್ಲೇ ನಡೆಯಲಿದೆ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ಪರ್ಯಾಯ: ರಸ್ತೆ ಸಂಚಾರ ಬದಲಾವಣೆ
ಮಂಗಳೂರು - ಉಡುಪಿ ಬೈಪಾಸಿನಿಂದ ಕಿನ್ನಿಮೂಲ್ಕಿ ಮೂಲಕ ಉಡುಪಿ ನಗರ ಪ್ರವೇಶಿಸುವ ವಾಹನಗಳು ಅಂಬಲ್ಪಾಡಿ ಜಂಕ್ಷನ್ ನಿಂದ ಬನ್ನಂಜೆ ಮಾರ್ಗವಾಗಿ ಉಡುಪಿ ಪ್ರವೇಶಿಸಬಹುದು. ಹಾಗೆಯೇ ಕಾರ್ಕಳ ಮತ್ತು ಮಣಿಪಾಲದ ಕಡೆಯಿಂದ ಬರುವ ವಾಹನಗಳಿಗೆ ನಗರ ಪ್ರವೇಶ ನಿಷೇಧಿಸಲಾಗಿದೆ. ಸಿಟಿ, ಸರ್ವೀಸ್ ಮತ್ತು ಕೆಎಸ್ಆರ್ಟಿಸಿ ನಿಲ್ದಾಣದಿಂದ ಮಂಗಳೂರು, ಬೆಂಗಳೂರು, ಕುಂದಾಪುರ, ಮುಂಬೈ ಮುಂತಾದ ಕಡೆಹೋಗುವ ವಾಹನಗಳು ಅಂಬಲ್ಪಾಡಿ ಜಂಕ್ಷನ್ ಕಡೆಯಿಂದ ಹೋಗಲು ಅನುವು ಮಾಡಿಕೊಡಲಾಗುವುದು. ಈ ವ್ಯವಸ್ಥೆ ಜನವರಿ 17ರ ಬೆಳಗ್ಗೆ 9ಗಂಟೆಯಿಂದ ಜನವರಿ 18ರ ಬೆಳಗ್ಗೆ 9 ಗಂಟೆಯವರಿಗೆ ಚಾಲ್ತಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.