ಪರೇಶ್ ಮೇಸ್ತ ಹತ್ಯೆ, ಕುಮಟಾದಲ್ಲಿ ಬೀಡು ಬಿಟ್ಟ ಸಿಬಿಐ ತಂಡ
ಉತ್ತರ ಕನ್ನಡ, ನವೆಂಬರ್ 20 : ಹೊನ್ನಾವರದ ಪರೇಶ್ ಮೇಸ್ತ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಒಂದು ವಾರದಿಂದ ಕುಮಟಾದಲ್ಲಿ ಬೀಡು ಬಿಟ್ಟಿದ್ದಾರೆ. ಮೇಸ್ತ ಕುಟುಂಬದವರು ಸೇರಿ ಹಲವಾರು ಜನರನ್ನು ಪ್ರಶ್ನಿಸಿ, ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ಸಿಬಿಐ ಇನ್ಸ್ಪೆಕ್ಟರ್ ಸುಬ್ರಮಣ್ಯ ನೇತೃತ್ವದಲ್ಲಿ ಮೂವರು ಅಧಿಕಾರಿಗಳು ಕುಮಟಾದಲ್ಲಿ ವಾಸ್ತವ್ಯ ಹೂಡಿದ್ದು, ತನಿಖೆ ನಡೆಸುತ್ತಿದ್ದಾರೆ. ವಿವಿಧ ಸಂಘಟನೆಗಳ ಮುಖಂಡರು, ಜನರು, ಪತ್ರಕರ್ತರನ್ನು ಪ್ರಶ್ನಿಸುತ್ತಿದ್ದಾರೆ.
ಪರೇಶ್ ಮೇಸ್ತ ಸಾವು : 8 ಪ್ರಮಖ ಬೆಳವಣಿಗೆಗಳು
ಹೊನ್ನಾವರದ ಪತ್ರಕರ್ತರು, ಸಂಘಟನೆಗಳ ಮುಖಂಡರನ್ನು ಪ್ರಶ್ನಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಹೊನ್ನಾವರದ ಶೆಟ್ಟಿಕೆರೆಗೆ ಸಹ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರೇಶ್ ಮೇಸ್ತ ಮನೆಗೂ ಅಧಿಕಾರಿಗಳು ಭೇಟಿ ನೀಡಿದ್ದರು.
ಪರೇಶ್ ಹತ್ಯೆ, ಮುಸ್ಲಿಮರ ಮೇಲೆ ಡೌಟು: ಮೇಸ್ತಾ ತಂದೆ
ಕಳೆದ 11 ತಿಂಗಳಿನಲ್ಲಿ ಮೂರು ಬಾರಿ ಪರೇಶ್ ಮೇಸ್ತ ಕುಟುಂಬದವರನ್ನು ವಿಚಾರಣೆ ನಡೆಸಲಾಗಿದೆ. ಪರೇಶ್ ಮೇಸ್ತ ತಂದೆ ಕಮಲಾಕರ ಮೇಸ್ತ ಅವರನ್ನು ಕುಮಟಾದಲ್ಲಿಯೂ ವಿಚಾರಣೆ ನಡೆಸಲಾಗಿದೆ. ಚೆನ್ನೈನ ಸಿಬಿಐ ಕಚೇರಿಗೂ ಬರುವಂತೆ ಹೇಳಿ ವಿಚಾರಣೆ ನಡೆಸಿದ್ದಾರೆ.
ಹಿಂದೂ ಸಂಘಟನೆಗಳ ಪ್ರತಿಭಟನೆ : ಉತ್ತರ ಕನ್ನಡ ಉದ್ವಿಗ್ನ
ಪರೇಶ್ ಮೇಸ್ತ ಸಾವು
2017ರ ಡಿಸೆಂಬರ್ 6ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರಲ್ಲಿ ಗಲಭೆ ನಡೆದಿತ್ತು. ಗಲಭೆ ದಿನ 21 ವರ್ಷದ ಪರೇಶ್ ಮೇಸ್ತ ಕಾಣೆಯಾಗಿದ್ದ. ಡಿಸೆಂಬರ್ 8ರಂದು ಹೊನ್ನಾವರದ ಶನಿ ದೇವಾಲಯದ ಹಿಂಭಾಗದಲ್ಲಿನ ಶೆಟ್ಟಿಕೆರೆಯಲ್ಲಿ ಪರೇಶ್ ಮೇಸ್ತ ಶವ ಪತ್ತೆಯಾಗಿತ್ತು. ಇದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಶಾಂತಿ ಸುವ್ಯವಸ್ಥೆಗೆ ಧಕ್ಕೆ
ಪರೇಶ್ ಮೇಸ್ತ ಶವ ಪತ್ತೆಯಾದ ಮೇಲೆ ಇದು ಕೊಲೆ ಎಂದು ಕುಟುಂಬದವರು ಆರೋಪಿಸಿದರು. ಆಗ ಹೊನ್ನಾವರ, ಕುಮಟಾ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗಲಭೆ ನಡೆಯಿತು. ಇದರಿಂದಾಗಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಯಿತು.
ರಾಜಕೀಯ ತಿರುವು
ಪರೇಶ್ ಮೇಸ್ತ ಸಾವಿನ ಪ್ರಕರಣ ರಾಜಕೀಯ ತಿರುವು ಪಡೆಯಿತು. ಬಿಜೆಪಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಐಗೆ ವಹಿಸಬೇಕು ಎಂದು ಒತ್ತಾಯಿಸಿತು. ಈ ಕುರಿತು ರಾಜ್ಯಪಾಲರಿಗೂ ದೂರು ನೀಡಿತು. ಪರೇಶ್ ಮೇಸ್ತ ತಂದೆ ಕಮಲಾಕರ ಮೇಸ್ತ ಅವರು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮನವಿ ಮಾಡಿದರು.
ಸಿಬಿಐ ತನಿಖೆಗೆ ಆದೇಶ
ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಲು ಸಿದ್ಧವಾಯಿತು. ಪರೇಶ್ ಮೇಸ್ತ ಕುಟುಂಬದ ಮನವಿಯಂತೆ ಸಿಬಿಐ ತನಿಖೆಗೆ ಆದೇಶ ನೀಡುವುದಾಗಿ ಅಂದಿನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಘೋಷಣೆ ಮಾಡಿದರು.
ಚೆನ್ನೈಗೆ ಏಕೆ ಹೋಗಬೇಕು?
ಪರೇಶ್ ಮೇಸ್ತ ಕುಟುಂಬದವರು ಸಿಬಿಐ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಚೆನ್ನೈಗೆ ವಿಚಾರಣೆಗೆ ಕರೆಯುವ ಬದಲು ಕರ್ನಾಟಕದಲ್ಲಿಯೇ ಹತ್ತಿರದ ಸ್ಥಳದಲ್ಲಿ ವಿಚಾರಣೆ ನಡೆಸಬಹುದಲ್ಲವೇ? ಎಂದು ಅವರು ಹೇಳಿದ್ದಾರೆ.