ಸಿಎಂ ಕೊಠಡಿಯ ಮುಂದೆ ಕೂತ ಗೂಬೆ: ಶಕುನವೋ, ಅಪಶಕುನವೋ
ಬೆಂಗಳೂರು, ಆ 26: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಮತ್ತೆ ಗೂಬೆ ಕಾಣಿಸಿಕೊಂಡಿದೆ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಠಡಿಯ ಬಾಗಿಲಲ್ಲಿ ಗೂಬೆ ಕೆಲಕಾಲ ಕೂತಿದ್ದು ಸಿಬ್ಬಂದಿಗಳು ಗುಸುಗುಸು ಮಾತನಾಡುವಂತೆ ಮಾಡಿದೆ.
ಶನಿವಾರ (ಆ 26) ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಿಎಂ ಕಚೇರಿಯ ಮುಂದೆ ಗೂಬೆ ಸ್ವಲ್ಪಹೊತ್ತು ಕೂತಿತ್ತು. ಈ ವರ್ಷದ ಆದಿಯಲ್ಲಿ ಬಾಂಕ್ವೆಟ್ ಹಾಲಿನಲ್ಲಿ ಗೂಬೆ ಕಾಣಿಸಿಕೊಂಡಿತ್ತು. ಇದು ಸಿದ್ದರಾಮಯ್ಯನವರಿಗೆ ಅಪಶಕುನ ಎಂದು ಜ್ಯೋತಿಷಿಗಳು ಪುಂಖಾನುಪುಂಖವಾಗಿ ಭವಿಷ್ಯ ನುಡಿದಿದ್ದರು.

ಇದಾದ ನಂತರ, ಮುಖ್ಯಮಂತ್ರಿಗಳ ಕಾರಿನ ಮೇಲೆ ಮುದಿಕಾಗೆ ಕೂತಿತ್ತು, ಕಾಕತಾಳೀಯ ಎನ್ನುವಂತೆ ಸಿದ್ದರಾಮಯ್ಯ ಅದೇ ಸಮಯದಲ್ಲಿ ಕಾರನ್ನೇ ಬದಲಾಯಿಸಿದ್ದರು. ಕೇರಳದ ಮಂಜೇಶ್ವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಿಎಂ ಧೋತಿಯ ಮೇಲೆ ಕಾಗೆ ಹಿಕ್ಕೆಹಾಕಿತ್ತು.
ಈ ಎಲ್ಲಾ ವಿಚಾರಗಳ ಮೇಲಿನ ಶುಭಶಕುನ, ಅಪಶಕುನದ ಬಗ್ಗೆ ಟಿವಿಯಲ್ಲಿ ಭಯಂಕರ ಚರ್ಚೆ ನಡೆಯುತ್ತಿದ್ದ ವೇಳೆ ನಾಡಿನ ಜ್ಯೋತಿಷಿಗಳನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದರು.
ಓಪನ್ ವೇದಿಕೆಯಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಅಲ್ಲಿ ಹಕ್ಕಿಗಳು ಹಿಕ್ಕೆಹಾಕದೇ ಇನ್ಯಾರು ಹಾಕಕಾಗಾತ್ತೆ. ಕಾರು ಬದಲಾಯಿಸಬೇಕಿತ್ತು, ಅದೇ ಸಮಯಕ್ಕೆ ಸರಿಯಾಗಿ ಕಾಗೆ ಕಾರಿನ ಮೇಲೆ ಕೂತಿತು, ಕಾಗೆ ಕೂತಿದ್ದಕ್ಕೆ ಸಿದ್ದರಾಮಯ್ಯ ಕಾರ್ ಚೇಂಚ್ ಮಾಡಿದ್ರು ಎಂದು ಜ್ಯೋತಿಷಿಗಳು ಹೇಳಿದ್ರು.
ಗೂಬೆ ಬಂತು.. ಕಾಗೆ ಬಂತು.. ಸಿದ್ದರಾಮಯ್ಯನವರ ಅಧಿಕಾರ ಹೋಗುತ್ತದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದೇ ನುಡಿದದ್ದು. ಇನ್ನೂ ಮುಖ್ಯಮಂತ್ರಿಯಾಗಿಲ್ವೇನ್ರೀ ನಾನು ಎಂದು ಸಭೆಯಲ್ಲಿ ಜ್ಯೋತಿಷಿಗಳನ್ನು ಸಿದ್ದು ಲೇವಡಿ ಮಾಡಿದ್ದರು.












Click it and Unblock the Notifications