ಕಾಂಗ್ರೆಸ್ ಸರ್ಕಾರ ಲೂಟಿಗಾಗಿ ಸುರಂಗ ಕೊರೆಯುವ ಕೆಲಸ ಮಾಡುತ್ತಿದೆ-ಆರ್.ಅಶೋಕ್
ಬೆಂಗಳೂರು, ಜುಲೈ 03: ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು 13 ತಿಂಗಳಾಗಿದೆ. ಒಂದಾದಮೇಲೆ ಒಂದರಂತೆ ಬ್ರಹ್ಮಾಂಡ ಭ್ರಷ್ಟಾಚಾರಗಳು, ಲೂಟಿ ಮಾಡಲು ಹೆಬ್ಬಾಗಿಲು ತೆಗೆದು, ಲೂಟಿಗಾಗಿ ಸುರಂಗ ಕೊರೆಯುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ನಗರದಲ್ಲಿ ಇಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಮತ್ತು ಮೈಸೂರಿನ ಮೂಡಾ ಅವ್ಯವಹಾರವನ್ನು ಖಂಡಿಸಿ ಇಂದು ಸಿಎಂ ಮನೆಗೆ ಮುತ್ತಿಗೆ ಹಾಕಲೆಂದು ಕುಮಾರಕೃಪಾ ವಸತಿಗೃಹದಿಂದ ಹೊರಟ ವೇಳೆ ಬಿಜೆಪಿ ಜನಪ್ರತಿನಿಧಿಗಳನ್ನು ಬಂಧಿಸಲಾಯಿತು. ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ ಅಶೋಕ್, ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಮೊನ್ನೆ ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು 'ಪಟಾಪಟ್' ಎಂದು ರಾಹುಲ್ ಗಾಂಧಿಯವರು ಹೇಳಿದ ಮಾದರಿಯಲ್ಲಿ ಬೇನಾಮಿ ಖಾತೆಗಳು, ಬಾರ್ಗಳು, ವೈನ್ ಸ್ಟೋರ್ಗಳಿಗೆ ವರ್ಗಾಯಿಸಿದರು. ಲ್ಯಾಂಬೊರ್ಗಿನಿ, ಒಡವೆ- ಏನೇನು ಬೇಕೋ ಅವೆಲ್ಲವನ್ನೂ ಖರೀದಿಸಿದರು. ದಲಿತರ ಹಣ ಚಿನ್ನದ ಅಂಗಡಿಗೆ, ಕಾರು ಖರೀದಿಗೆ, ಬಾರ್ಗಳಿಗೆ, ಕಾಂಗ್ರೆಸ್ ಪಕ್ಷಕ್ಕೆ ಹೋಗಿದೆ ಎಂದು ಟೀಕಿಸಿದರು. ನಮ್ಮ ಹೋರಾಟದ ಪರಿಣಾಮವಾಗಿ, ರಾಜಭವನದ ಬಾಗಿಲಿಗೆ ಹೋದ ಬಳಿಕ ನಾಗೇಂದ್ರ ಅವರು ರಾಜೀನಾಮೆ ಕೊಟ್ಟರು ಎಂದು ರಾಜ್ಯ ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕಿದರು.
ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ದಿಕ್ಕು ತಪ್ಪಿಸಲು ಹೊರಟಿದೆ- ವಿರೋಧ ಪಕ್ಷದ ನಾಯಕ ಆರ್.ಅಶೋಕ್
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಪೆಟ್ರೋಲ್, ಡೀಸೆಲ್, ಹಾಲಿನ ಬೆಲೆ ಏರಿಕೆ, ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ ಇವುಗಳಿಂದ ವಿಧಾನಸಭಾ ಅಧಿವೇಶನದಲ್ಲಿ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ ಎನ್ನುವ ಭಯದಿಂದ ಹೊಸ ನಾಟಕ ಶುರು ಮಾಡಿರುವ ಈ ನಿರ್ಲಜ್ಜ ಕಾಂಗ್ರೆಸ್ ಸರ್ಕಾರ, ನೂತನ ಕ್ರಿಮಿನಲ್ ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ಸಾರ್ವಜನಿಕರ ದಿಕ್ಕು ತಪ್ಪಿಸಲು ಹೊರಟಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿರುವ ಆರ್. ಅಶೋಕ್ ಅಸಮರ್ಥ ಸಿಎಂ ಸಿದ್ದರಾಮಯ್ಯ ಅವರೇ, ಮುಂಬರುವ ಅಧಿವೇಶನದಲ್ಲಿ ನಿಮ್ಮ ಸರ್ಕಾರದ ಎಲ್ಲ ವೈಫಲ್ಯಗಳನ್ನು, ಭ್ರಷ್ಟಾಚಾರಗಳನ್ನು, ಎಡವಟ್ಟುಗಳನ್ನು, ಜನವಿರೋಧಿ ನೀತಿಗಳನ್ನು ಸದನದಲ್ಲಿ ಪ್ರಸ್ತಾಪ ಮಾಡಲಿದ್ದೇವೆ. ನಿಮ್ಮ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ಜನ ಸಾಮಾನ್ಯರ ಪರವಾಗಿ ಸದನದಲ್ಲಿ ದನಿ ಎತ್ತುತ್ತೇವೆ. ಸದನದ ದಿಕ್ಕು ತಪ್ಪಿಸುವ ನಿಮ್ಮ ಯಾವ ಕುತಂತ್ರಗಳು ನಡೆಯುವುದಿಲ್ಲ. ಸದನದಲ್ಲಿ ಉತ್ತರಿಸಲು ತಾಯರಾಗಿ ಎಂದು ಎಚ್ಚರಿಸಿದ್ದಾರೆ.












Click it and Unblock the Notifications