ಮಲ್ಲಿಕಾರ್ಜುನ ಖರ್ಗೆ ಎನ್ನುವ ಕಾಂಗ್ರೆಸ್ಸಿನ ಆಲದ ಮರ, ಆಗಿದ್ದು ಮಾತ್ರ ದುರಂತ ನಾಯಕ!
Recommended Video
ಲೋಕಸಭೆಯಲ್ಲಿ ವಿಪಕ್ಷದ ನಾಯಕ, ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಯಾಗಬೇಕಿತ್ತು ಎನ್ನುವ ಪಶ್ಚಾತ್ತಾಪದ ಅಥವಾ ಕಿಡಿಹೊತ್ತಿಸುವ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಈಗ ಚಾಲ್ತಿಯಲ್ಲಿದೆ. ಹೇಳಿ ಕೇಳಿ.. ಲೋಕಸಭಾ ಚುನಾವಣಾ ಫಲಿತಾಂಶದ ದಿನಗಣನೆ ಇರುವ ವೇಳೆ..
ಮಲ್ಲಿಕಾರ್ಜುನ ಖರ್ಗೆ ದಲಿತ ಎನ್ನುವ ಕಾರಣಕ್ಕಾಗಿ ಸಿಎಂ ಆಗಬೇಕಿತ್ತೋ ಅಥವಾ ಆ ಹುದ್ದೆಗೆ ಅವರು ಅರ್ಹರು ಎನ್ನುವ ಕಾರಣಕ್ಕಾಗಿಯೋ ಅಥವಾ ಇನ್ನೊಬ್ಬರ ಬಾಯಿಮುಚ್ಚಿಸಲು ಈ ರೀತಿಯ ಹೇಳಿಕೆಯನ್ನು ತೂರಿಬಿಡಲಾಯಿತಾ ಎನ್ನುವ ಗೊಂದಲ, ಹೇಳಿಕೆ ನೀಡುತ್ತಿರುವವರಿಗೂ ಇದ್ದಿರಬಹುದು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಗುರುಮಿಠಕಲ್ ಕ್ಷೇತ್ರದಿಂದ ಶಾಸಕರಾಗಿ ಮೊದಲ ಬಾರಿ ಆಯ್ಕೆಯಾಗಿದ್ದ ಖರ್ಗೆ, ಪ್ರಾಧಮಿಕ ಶಿಕ್ಷಣ, ಗ್ರಾಮೀಣಾಭಿವೃದ್ದಿ, ಕಂದಾಯ ಹೀಗೆ ಹಲವು ಖಾತೆಗಳನ್ನು ರಾಜ್ಯದಲ್ಲಿ, ಹಾಗೆಯೇ, ಕೇಂದ್ರದಲ್ಲಿ ರೈಲ್ವೇ, ಕಾರ್ಮಿಕ ಸಚಿವರಾಗಿಯೂ ಹಲವು ಹುದ್ದೆಯನ್ನು ನಿಭಾಯಿಸಿದ್ದರು. ಅದರೆ, ರಾಜ್ಯ ರಾಜಕಾರಣದಲ್ಲಿ ಅವರಿಗೆ ಸಲ್ಲಬೇಕಾದ ಗೌರವ ಸಿಕ್ಕಿದೆಯಾ ಎನ್ನುವ ಪ್ರಶ್ನೆ ಆಗಾಗ ಎದ್ದೇಳುತ್ತದೆ, ಮತ್ತೆ ಹಾಗೆಯೇ ಅದು ತಣ್ಣಗಾಗುತ್ತದೆ.
ಮೈತ್ರಿ ಸರ್ಕಾರಕ್ಕೆ ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು : ಎಚ್ಡಿಕೆ
ರಾಜ್ಯ ರಾಜಕಾರಣದಲ್ಲಿ ಗಟ್ಟಿಯಾಗಿ ನೆಲೆನಿಲ್ಲಬೇಕು ಎನ್ನುವಷ್ಟರಲ್ಲಿ ಅವರನ್ನು ಕೇಂದ್ರಕ್ಕೆ ಕಳುಹಿಸುವ ಕೆಲಸ ನಡೆಯುತ್ತಲೇ ಬಂದಿದೆ. ಇದು ರಾಜ್ಯದ ಮುಖಂಡರ ಹಿತಾರ್ಥವೋ ಅಥವಾ ಕೇಂದ್ರದಲ್ಲಿ ಅವರ ಅವಶ್ಯಕತೆಯೋ? ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಛಾಪು ಮೂಡಿಸಲು ಖರ್ಗೆಗೆ ಸಾಧ್ಯವೇ ಆಗಿಲ್ಲ.
ಹಲವು ರಾಜಕಾರಣಿಗಳಿಗೆ 'ಗುರು' ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಖರ್ಗೆ
ಹಲವು ರಾಜಕಾರಣಿಗಳಿಗೆ 'ಗುರು' ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಾಲಿಗೆ ಕಷ್ಟದ ಸಮಯದಲ್ಲಿ ಪಕ್ಷದ ಪರವಾಗಿ ನಿಂತ ನಾಯಕರಾದರೇ ಹೊರತು, ಇವರು ಪಕ್ಷಕ್ಕೆ ತೋರಿದ ನಿಷ್ಠೆಯಷ್ಟು ಕಾಂಗ್ರೆಸ್ ಇವರಿಗೆ ಪ್ರತಿಫಲವನ್ನು ನೀಡಲಿಲ್ಲ ಎನ್ನುವುದು ಸ್ಪಷ್ಟ. ಕಳೆದ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ಸ್ಥಾನಮಾನಕ್ಕೆ ಬೇಕಾದಷ್ಟು ಸಂಖ್ಯಾಬಲವೂ ಸಿಗದೇ, ಪಕ್ಷ ಅವಮಾನ ಎದುರಿಸುತ್ತಿದ್ದಾಗ, ವಿಪಕ್ಷದ ನಾಯಕನಾಗಿ ಪಕ್ಷವನ್ನು ಸಮರ್ಥವಾಗಿ ಐದು ವರ್ಷ ನಿಭಾಯಿಸಿದ್ದರು.
ರೇವಣ್ಣನೂ ಸಿಎಂ ಆಗಬೇಕಿತ್ತು: HDK ಗೆ ಸಿದ್ದು ಭರ್ಜರಿ ಟಾಂಗ್!
ಧರಂಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸಮಕಾಲೀನ ರಾಜಕಾರಣಿಗಳು
ಧರಂಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸಮಕಾಲೀನ ರಾಜಕಾರಣಿಗಳು, ಅದೃಷ್ಟವೋ ಅರ್ಹತೆಯೋ ಧರಂಸಿಂಗ್ ಅವರಿಗೆ ಒಲಿದಿದ್ದ ಸಿಎಂ ಪಟ್ಟ ಖರ್ಗೆಗೆ ಒಲಿಯಲಿಲ್ಲ. ಹಲವು ಬಾರಿ ಈ ನೋವನ್ನು ಖರ್ಗೆ ತೋಡಿಕೊಂಡಿದ್ದೂ ಉಂಟು. 2013ರ ಮತ್ತು 2018ರ ಅಸೆಂಬ್ಲಿ ಚುನಾವಣೆಯ ವೇಳೆಯೂ, ಪಕ್ಷವೇ ನನ್ನನ್ನು ಸಿಎಂ ಹುದ್ದೆಗೆ ಸೂಚಿಸಬಹುದು ಎನ್ನುವ ಅವರಲ್ಲಿದ ಕೊಂಚ ಆಸೆಯೂ ನುಚ್ಚುನೂರಾಗಿತ್ತು.
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ವ್ಯಂಗ್ಯ
ಈಗ, ಮತ್ತೆ ಖರ್ಗೆ ಸಿಎಂ ಆಗಬೇಕಿತ್ತು ಎನ್ನುವ ಮಾತು ಕುಮಾರಸ್ವಾಮಿಯವರಿಂದ ಬಂದಿದೆ, ಅದಕ್ಕೆ ಸಿದ್ದರಾಮಯ್ಯನವರು ವ್ಯಂಗ್ಯವಾಗಿಯೇ ತಿರುಗೇಟು ನೀಡಿದ್ದಾರೆ. ಪದೇಪದೇ ನನ್ನನ್ನು ಅವಮಾನಿಸಬೇಡಿ ಎಂದು ಮಲ್ಲಿಕಾರ್ಜುನ ಖರ್ಗೆ ಬಹಿರಂಗವಾಗಿಯೇ ಕೇಳಿಕೊಂಡಿದ್ದಾರೆ. ದಲಿತ ಮುಖ್ಯಮಂತ್ರಿ ಹೆಸರು ಪ್ರಸ್ತಾಪ ಮಾಡಿ ನನಗೆ ಮತ್ತು ನನ್ನ ಸಮುದಾಯಕ್ಕೆ ಇರುಸುಮುರುಸು ತರಬೇಡಿ ಎಂದು ಸ್ವಪಕ್ಷೀಯರಿಗೂ, ಮಿತ್ರಪಕ್ಷದವರಿಗೂ ಮಲ್ಲಿಕಾರ್ಜುನ ಖರ್ಗೆ ನಯವಾಗಿಯೇ ಚಾಟಿ ಬೀಸಿದ್ದಾರೆ.
ಕಾಂಗ್ರೆಸ್ ಮುಂದೆ ಬಹುಮತದಿಂದ ಅಧಿಕಾರಕ್ಕೆ ಬಂದರೆ, ಖರ್ಗೆಯವರನ್ನು ಸಿಎಂ ಸ್ಥಾನಕ್ಕೆ ಸೂಚಿಸುತ್ತಾರೋ
ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆ ಬರುತ್ತವೆ. ಆಮೇಲೆ ಅದರ ಸುದ್ದಿಯೇ ಇರುವುದಿಲ್ಲ ಎನ್ನುವ ಖರ್ಗೆ ಅವರ ಮಾತಿನಲ್ಲಿ ಅಸಮಾಧಾನ ಎದ್ದು ಕಾಣುತ್ತದೆ. ಅವರೇ ಹೇಳಿದಂತೆ ಚುನಾವಣೆಯ ವೇಳೆ ಮಾತ್ರ ಈ ವಿಚಾರ ಮುನ್ನಲೆಗೆ ಬರುತ್ತದೆ. ಆಮೇಲೆ ಯಾರಿಗೂ ಇದರ ನೆನಪಿರುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಇಂದು ಯಾರು ಖರ್ಗೆ ಸಿಎಂ ಆಗಬೇಕಿತ್ತು ಎಂದು ಹೇಳುತ್ತಿದ್ದಾರೋ, ಒಂದು ವೇಳೆ ಕಾಂಗ್ರೆಸ್ ಮುಂದೆ ಬಹುಮತದಿಂದ ಅಧಿಕಾರಕ್ಕೆ ಬಂದರೆ, ಖರ್ಗೆಯವರನ್ನು ಸಿಎಂ ಸ್ಥಾನಕ್ಕೆ ಸೂಚಿಸುತ್ತಾರೋ?
ಕುಮಾರಸ್ವಾಮಿ ಸ್ವಪಕ್ಷೀಯರನ್ನು ಮತ್ತು ಗೌಡ್ರ ಮನವೊಲಿಸಿ ಖರ್ಗೆಗೆ ಸಿಎಂ ಪದಬಿಟ್ಟು ಕೊಡಲು ಸಿದ್ದರಿದ್ದಾರೋ
ಹಾಗೆಯೇ, ಇದೇ ಕುಮಾರಸ್ವಾಮಿ ಸ್ವಪಕ್ಷೀಯರನ್ನು ಮತ್ತು ಗೌಡ್ರ ಮನವೊಲಿಸಿ ಖರ್ಗೆಗೆ ಸಿಎಂ ಪದಬಿಟ್ಟು ಕೊಡಲು ಸಿದ್ದರಿದ್ದಾರೋ? ಅದೆಲ್ಲಾ ಸಾಧ್ಯವಾಗದ ಮಾತು. ಒಟ್ಟಿನಲ್ಲಿ 76ವರ್ಷದ ಮಲ್ಲಿಕಾರ್ಜುನ ಖರ್ಗೆ ಎನ್ನುವ ಕಾಂಗ್ರೆಸ್ಸಿನ ಆಲದಮರ ಇದುವರೆಗಿನ ತನ್ನ ರಾಜಕೀಯ ಜೀವನದಲ್ಲಿ ಆಗಿದ್ದು ಮಾತ್ರ ದುರಂತ ನಾಯಕನಾಗಿ. ಇವರ ಪಕ್ಷನಿಷ್ಠೆಯನ್ನು ಗೌರವಿಸಿ ರಾಹುಲ್ ಗಾಂಧಿ ಇನ್ನಾದರೂ ಮನಸ್ಸು ಮಾಡಬೇಕು. ಅದಕ್ಕೆ, ಇಲ್ಲಿಯವರೂ ಒಪ್ಪಬೇಕು.