ಕರ್ನಾಟಕದಲ್ಲಿ ಕೆ.ಜಿ ಈರುಳ್ಳಿ ಬೆಲೆ ಬರೋಬ್ಬರಿ 120 ರೂ., ಮತ್ತಷ್ಟು ಏರಿಕೆ ಸಾಧ್ಯತೆ
ಬೆಂಗಳೂರು, ಅಕ್ಟೋಬರ್ 23: ರಾಜ್ಯದಲ್ಲಿ ಈರುಳ್ಳಿ ಬಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪೂರೈಕೆ ಕೊರತೆ, ಮಧ್ಯವರ್ತಿಗಳ ಹಾವಳಿಯಿಂದಾಗಿ ಬೆಲೆ ಏರಿಕೆಯಾಗಿದೆ.
ಚೋದ್ಯವೆಂದರೆ , ಬೆಲೆ ದುಪ್ಪಟ್ಟಾಗಿದ್ದರೂ ರೈತರಿಗೆ ಮಾತ್ರ ಯಾವ ಲಾಭವೂ ಸಿಗುತ್ತಿಲ್ಲ. ಕಳೆದ ಒಂದು ವಾರದಿಂದ ಸತತವಾಗಿ ಏರುತ್ತಿರುವ ಈರುಳ್ಳಿ ಬೆಲೆ ಗುರುವಾರ ಕೆಜಿಗೆ 120 ರೂ.ದಾಖಲಿಸಿದೆ.
ಈರುಳ್ಳಿ ಬೆಲೆ ಏರಿಕೆ: ಆಮದು ನಿಯಮಗಳನ್ನು ಸಡಿಲಿಸಿದ ಕೇಂದ್ರ ಸರ್ಕಾರ
ಯಶವಂತಪುರ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 70 ರೂ.ನಿಂದ 120 ರೂ.ವರೆಗೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಮಧ್ಯವರ್ತಿಗಳ ಜೇಬಿಗೆ ಹಣ
ಚಿಲ್ಲರೆ ವ್ಯಾಪಾರಿಗಳು ಸಾಗಣೆ ವೆಚ್ಚ, ಕೂಲಿ ಎಲ್ಲ ಸೇರಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಬೆಲೆ ಏರಿಕೆಯ ಖುಷಿಯಲ್ಲಿದ್ದ ರೈತರಿಗೆ ನಿರಾಸೆಯಾಗಿದ್ದರೆ, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಇದರ ನಡುವೆ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ.
ಜನರು ಕೊಳ್ಳುವ ಬೆಲೆ ಎಪಿಎಂಸಿಯಲ್ಲಿ ಸಿಗುವುದಿಲ್ಲ
ಜನರು ಕೊಳ್ಳುವ ಬೆಲೆ ನಮಗೆ ಎಪಿಎಂಸಿಯಲ್ಲಿ ಸಿಗುವುದಿಲ್ಲ, ಹೊರಗಡೆ ಕೆಜಿಗೆ 100 ರೂ. ಇದ್ದರೆ ನಮಗೆ 50-60ರೂ ಸಿಕ್ಕರೆ ಹೆಚ್ಚು, ಶೇ.80ರಷ್ಟು ಲಾಭ ದಲ್ಲಾಳಿಗಳ ಪಾಲಾಗುತ್ತದೆ. ಸರ್ಕಾರ ಮಧ್ಯ ಪ್ರವೇಶಿಸಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಗುರುವಾರ ಎಪಿಎಂಸಿಯಲ್ಲಿ ಈರುಳ್ಳಿ ಬೆಲೆ ಎಷ್ಟಿತ್ತು?
ಗುರುವಾರ ಬೆಂಗಳೂರು ಎಪಿಎಂಸಿಗೆ 44,718 ಬ್ಯಾಗ್ ಈರುಳ್ಳಿ ಬಂದಿದೆ. ದಾಸನಪುರ ಮಾರುಕಟ್ಟೆಗೆ 2936 ಬ್ಯಾಗ್ ಈರುಳ್ಳಿ ಬಂದಿದೆ. ಎಪಿಎಂಸಿಯಲ್ಲಿ ಅತ್ಯುತ್ತಮ ಈರುಳ್ಳಿ ಕ್ವಿಂಟಾಲ್ಗೆ 7 ಸಾವಿರದಿಂದ 7500 ರೂ. ಬೆಲೆ ನಿಗದಿಯಾಗಿದೆ. ಮಧ್ಯಮ 6 ಸಾವಿರದಿಂದ 6500, ಸಾಧಾರಣ ಈರುಳ್ಳಿ ಕ್ವಿಂಟಾಲ್ಗೆ 2 ಸಾವಿರದಿಂದ 5ಸಾವಿರದವರೆಗಿದೆ.
ಮಳೆಯ ಆರ್ಭಟಕ್ಕೆ ಈರುಳ್ಳಿ ಬೆಳೆ ನಾಶ
ರಾಜ್ಯದಲ್ಲಿ ಮಳೆಯ ಆರ್ಭಟಕ್ಕೆ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಬೆಳೆ ನಾಶವಾಗಿದೆ.ಸದ್ಯ ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳ ಗೋದಾಮಿನಲ್ಲಿ ದಾಸ್ತಾನಾಗಿರುವ ಈರುಳ್ಳಿ ಮಾತ್ರ ರೈತರು ಮಾರುಕಟ್ಟೆಗೆ ತರುತ್ತಿದ್ದಾರೆ.