ನಂಜನಗೂಡಲ್ಲಿ ಸ್ಥಾಪನೆಯಾಗಲಿದೆ ಏಷಿಯನ್ ಪೇಯಿಂಟ್ಸ್ ಘಟಕ
ಬೆಂಗಳೂರು, ಜುಲೈ 16 : 'ನಮ್ಮ ಕಂಪನಿ ಕರ್ನಾಟಕದಿಂದ ಹೊರ ಹೋಗುವುದಿಲ್ಲ. ನಂಜನಗೂಡು ಸಮೀಪ 2,300 ಕೋಟಿ ರೂ. ವೆಚ್ಚದಲ್ಲಿ ಘಟಕ ಸ್ಥಾಪನೆ ಮಾಡಲಿದ್ದೇವೆ ಎಂದು ಏಷ್ಯನ್ ಪೇಯಿಂಟ್ಸ್ ಲಿಮಿಟೆಡ್ ಅಧ್ಯಕ್ಷ ಜಲಜ್ ದಾನಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಜಲಜ್ ದಾನಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಘಟಕ ಸ್ಥಾಪಿಸಲು ಸರ್ಕಾರ ನೀಡುತ್ತಿರುವ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.[ಹೊಸಕೋಟೆ ವೊಲ್ವೋ ಘಟಕ ವಿಸ್ತರಣೆ]
ಮುಖ್ಯಮಂತ್ರಿಗಳ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಏಷ್ಯನ್ ಪೇಯಿಂಟ್ಸ್ ಕರ್ನಾಟಕದಿಂದ ಹೊರ ಹೋಗುವ ಪ್ರಯತ್ನವನ್ನು ಮಾಡಿಲ್ಲ. ಅಂತಹ ಪ್ರಸ್ತಾವನೆಯೇ ನಮ್ಮ ಮುಂದಿಲ್ಲ. ಕಂಪನಿಯ ಉತ್ಪಾದನಾ ಘಟಕವನ್ನು ನಂಜನಗೂಡಿನಲ್ಲಿ ಸ್ಥಾಪನೆ ಮಾಡಲಿದ್ದೇವೆ ಎಂದು ಹೇಳಿದರು.
ಅಂದಹಾಗೆ ಮಂಗಳವಾರ ವೊಲ್ವೋ ಕಾರ್ಪೊರೇಷನ್ ಅಧ್ಯಕ್ಷ ಕಾಕನ್ ಅಗ್ನೇವಾಲ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹೊಸಕೋಟೆಯ ವೊಲ್ವೋ ಘಟಕ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಿದ್ದರು. ವೊಲ್ವೋ ಘಟಕವನ್ನು ವಿಸ್ತರಣೆ ಮಾಡಲಿದ್ದು, ಇದರಿಂದ ಸುಮಾರು 2000 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದ್ದರು. ಚಿತ್ರಗಳಲ್ಲಿ ನೋಡಿ ಜಲಜ್ ದಾನಿ ಭೇಟಿ...
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದ ಜಲಜ್ ದಾನಿ
ಬುಧವಾರ ಏಷ್ಯನ್ ಪೇಯಿಂಟ್ಸ್ ಲಿಮಿಟೆಡ್ ಅಧ್ಯಕ್ಷ ಜಲಜ್ ದಾನಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
2,300 ಕೋಟಿ ರೂ. ಹೂಡಿಕೆ
ಮಾಧ್ಯಮಗಳೊಂದಿಗೆ ಮಾತನಾಡಿದ ಜಲಜ್ ದಾನಿ ಅವರು, ಕರ್ನಾಟಕದಲ್ಲಿ 2,300 ಕೋಟಿ ರೂ. ವೆಚ್ಚದಲ್ಲಿ ಘಟಕ ಸ್ಥಾಪನೆ ಮಾಡಲಾಗುತ್ತದೆ. ಈ ಘಟಕದಲ್ಲಿ 900 ಮಂದಿಗೆ ಉದ್ಯೋಗ ಅವಕಾಶ ದೊರೆಯಲಿದೆ. ಜೊತೆಗೆ, ಪರೋಕ್ಷವಾಗಿ 4,500 ಮಂದಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದರು.
175 ಎಕರೆ ಭೂಮಿ ಮಂಜೂರು ಮಾಡಿದೆ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಘಟಕ ಸ್ಥಾಪಿಸಲು ಸರ್ಕಾರ ನೀಡುತ್ತಿರುವ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಸರ್ಕಾರ ಘಟಕ ಸ್ಥಾಪನೆಗೆ 175 ಎಕರೆ ಪ್ರದೇಶವನ್ನು ನೀಡಿದೆ. ಜೊತೆಗೆ, ವಿಶೇಷ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ನೀಡುವ ಭರವಸೆಯನ್ನು ನೀಡಿದೆ ಎಂದರು.
ಇದು ವಿಶ್ವದಲ್ಲೇ ಬೃಹತ್ ಘಟಕ
ನಂಜನಗೂಡಿನ ಘಟಕ ವಿಶ್ವದಲ್ಲೇ ಬೃಹತ್ ಘಟಕವಾಗಿದೆ. ವಾರ್ಷಿಕ 10,250 ಕೋಟಿ ರೂ. ವಹಿವಾಟು ನಡೆಯುವ ನಿರೀಕ್ಷೆ ಇದೆ. ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಸೇರಿದಂತೆ ಹಲವಾರು ಚಟುವಟಿಕೆಗಳಿಗೆ ಈ ಘಟಕ ಪೂರಕವಾಗಲಿದೆ ಎಂದು ಜಲಜ್ ದಾನಿ ವಿಶ್ವಾಸ ವ್ಯಕ್ತಪಡಿಸಿದರು.
ಹೊಸಕೋಟೆ ವೊಲ್ವೋ ಘಟಕ ವಿಸ್ತರಣೆ
ಹೊಸಕೋಟೆಯಲ್ಲಿರುವ ವೊಲ್ವೋ ಘಟಕ ವಿಸ್ತರಣೆಯಾಗಲಿದ್ದು, ಇದರಿಂದ ಸುಮಾರು 2000 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ವೊಲ್ವೋ ಕಾರ್ಪೊರೇಷನ್ ಅಧ್ಯಕ್ಷ ಕಾಕನ್ ಅಗ್ನೇವಾಲ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಘಟಕ ವಿಸ್ತರಣೆ ಕುರಿತು ಮಾತುಕತೆ ನಡೆಸಿದ್ದಾರೆ.