ಮೋದಿಗೆ ವಾರ್ನಿಂಗ್ ಕೊಟ್ಟ ನಂಜಾವಧೂತ ಶ್ರೀಗಳಿಗೆ ಐದು ಪ್ರಶ್ನೆಗಳು
ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ನೀಡಿರುವ ಹೇಳಿಕೆ, ಸಾಕಷ್ಟು ಚರ್ಚೆಗೆ ಗುರಿಯಾಗಿದೆ.
ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ನಂಜಾವಧೂತ ಶ್ರೀಗಳು ನೀಡಿರುವ ವಾರ್ನಿಂಗ್ ಬಗ್ಗೆ ಬಿಜೆಪಿ ಬೇಸರ ವ್ಯಕ್ತಪಡಿಸಿದೆ. ಪಕ್ಷದ ಒಕ್ಕಲಿಗ ಸಮುದಾಯದ ಮುಖಂಡರೇ ಶ್ರೀಗಳ ಹೇಳಿಕೆಗೆ ಅಪಸ್ವರ ಎತ್ತಿದ್ದಾರೆ.
ಆಯಾಯ ಸಮುದಾಯದ ಪೀಠಾಧಿಪತಿಗಳು ತಮ್ಮ ಜಾತಿಯ ಪರ ಬ್ಯಾಟ್ ಬೀಸುವುದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ವಿಚಾರವಾದರೂ, ಒಂದು ಪಕ್ಷ ಅಥವಾ ಸರಕಾರದ ಪರವಾಗಿ ನಿಂತ ಉದಾಹರಣೆಗಳು ಕಮ್ಮಿ.
ಪ್ರಧಾನಿ ಮೋದಿ ಸಮ್ಮಿಶ್ರ ಸರಕಾರಕ್ಕೆ ಸಹಕಾರ ನೀಡದೇ ಇದ್ದರೆ, ಇಡೀ ಒಕ್ಕಲಿಗ ಸಮುದಾಯ ಬಿಜೆಪಿ ವಿರುದ್ದ ನಿಲ್ಲಬೇಕಾಗುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಡಿ ಕೆ ಶಿವಕುಮಾರ್ ಗೆ ತೊಂದರೆ ಕೊಟ್ಟರೆ ಸುಮ್ಮನಿರುವುದಿಲ್ಲ ಎಂದು ಶ್ರೀಗಳು ಕಾರ್ಯಕ್ರಮದಲ್ಲಿ ಹೇಳಿದ್ದರು.
ಈ ಹಿಂದೆ ಡಿ ವಿ ಸದಾನಂದ ಗೌಡ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಂದರ್ಭದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದ ನಂಜಾವಧೂತ ಶ್ರೀಗಳು ನಿರೀಕ್ಷೆಯಂತೆ ಈಗ ಎಚ್ಡಿಕೆ, ಡಿಕೆಶಿ ಪರವಾಗಿ ಮಾತನಾಡಿದ್ದಾರೆ. ಆದರೆ ಅವರ ಹೇಳಿಕೆಯ ಹಿಂದೆ, ಕೆಲವೊಂದು ಪ್ರಶ್ನೆಗಳು ಉದ್ಬವಿಸದೇ ಇರದು, ಶ್ರೀಗಳಿಗೆ ಐದು ಪ್ರಶ್ನೆಗಳು...
ಹಿಂದೂ ಧರ್ಮದ ಏಕತೆ, ಅಖಂಡತೆಗೆ ಅಡ್ದಿ ಬರುವುದಿಲ್ಲವೇ?
1. ಹಿಂದೂ ಸಮಾಜದಲ್ಲಿ ಒಗ್ಗಟ್ಟು ತರುವಲ್ಲಿ ಕಾರ್ಯೋನ್ಮುಖರಾಗಬೇಕಾದ ಪೀಠಾಧಿಪತಿಗಳು ಒಂದು ಸಮಾಜದ ಮುಖಂಡರನ್ನು ಮಾತ್ರ ಬೆಂಬಲಿಸುವುದು ಸರಿಯೇ? ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ.. ಹೀಗೆ ಒಂದೊಂದು ಸಮುದಾಯದ ಸ್ವಾಮೀಜಿಗಳು ತಮ್ಮಮ್ಮ ಜಾತಿಯ ಮುಖಂಡರನ್ನು ಮಾತ್ರ ಬೆಂಬಲಿಸುತ್ತಾ ಬಂದರೆ, ಹಿಂದೂ ಧರ್ಮದ ಏಕತೆ, ಅಖಂಡತೆಗೆ ಅಡ್ದಿ ಬರುವುದಿಲ್ಲವೇ?
ಎಚ್ಡಿಕೆಗೆ ತೊಂದರೆ ಕೊಟ್ಟರೆ ಸುಮ್ಮನಿರುವುದಿಲ್ಲ ಎನ್ನುವ ಹೇಳಿಕೆ
2. ಎಚ್ಡಿಕೆಗೆ ತೊಂದರೆ ಕೊಟ್ಟರೆ ಸುಮ್ಮನಿರುವುದಿಲ್ಲ ಎನ್ನುವ ಹೇಳಿಕೆಯನ್ನು ತಾವು ನೀಡಿದ್ದೀರಾ, ನೀವು ಬೆಂಬಲಿಸುತ್ತಿರುವ ಕುಮಾರಸ್ವಾಮಿಗೆ ತೊಂದರೆ ಕೊಡುತ್ತಿರುವುದು ಬಿಜೆಪಿಯೋ ಅಥವಾ ಸಮ್ಮಿಶ್ರ ಸರಕಾರದ ಪಾಲುದಾರ ಕಾಂಗ್ರೆಸ್ ಪಕ್ಷದವರೋ ಎನ್ನುವುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ಇತ್ತೀಚೆಗೆ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಒಳರಾಜಕೀಯವನ್ನು ಅರಿತೂ, ಮೋದಿ ಕಡೆಗೆ ಬೊಟ್ಟು ತೋರುವುದು ಸರಿಯಾ?
ಡಿ ಕೆ ಶಿವಕುಮಾರ್ ಅವರ ತಂಟೆಗೂ ಬರಬಾರದು ಎನ್ನುವ ಎಚ್ಚರಿಕೆ
3. ಕುಮಾರಸ್ವಾಮಿ ಜೊತೆ ಡಿ ಕೆ ಶಿವಕುಮಾರ್ ಅವರ ತಂಟೆಗೂ ಬರಬಾರದು ಎನ್ನುವ ಎಚ್ಚರಿಕೆಯನ್ನು ಕೇಂದ್ರಕ್ಕೆ ತಾವು ನೀಡಿದ್ದೀರಾ. ನೀವು ಡಿಕೆಶಿ ಮೇಲೆ ನಡೆಯುತ್ತಿರುವ ಐಟಿ ದಾಳಿಯನ್ನು ಉಲ್ಲೇಖಿಸಿ ಹೇಳಿರುವುದಾದರೆ, ಕೇಂದ್ರ ತನಿಖಾ ಸಂಸ್ಥೆಗಳಿಂದ ವಿಚಾರಣೆ ನಡೆಯುವುದು ನಮ್ಮ ದೇಶದಲ್ಲಿನ ಒಂದು ಸಾಮಾನ್ಯ ಪರಿಪಾಠ. ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಡಿಕೆಶಿ ಸಹೋದರರು ಅತ್ಯಂತ ಆತ್ಮವಿಶ್ವಾಸದಿಂದ ಹೇಳುತ್ತಿರುವಾಗ, ಐಟಿ ದಾಳಿಯನ್ನು ಎದುರಿಸಲಿ ಬಿಡಿ, ಇದರಲ್ಲಿ ಒಕ್ಕಲಿಗ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವ ನಿಮ್ಮ ಮಾತು ಎಷ್ಟು ಸರಿ?
ಒಕ್ಕಲಿಗ ಸಮುದಾಯ ತಿರುಗಿ ಬೀಳುತ್ತೆ ಎನ್ನುವ ವಾರ್ನಿಂಗ್
4. ಕುಮಾರಸ್ವಾಮಿಗೆ ಪ್ರಧಾನಿ ಮೋದಿ ಸಹಕಾರ ನೀಡಬೇಕು, ಇಲ್ಲದಿದ್ದರೆ ಒಕ್ಕಲಿಗ ಸಮುದಾಯ ತಿರುಗಿ ಬೀಳುತ್ತೆ ಎನ್ನುವ ಮಾತನ್ನು ಹೇಳಿದ್ದೀರಾ, ಚುನಾವಣೆಗೆ ಮುನ್ನ ಮತ್ತು ನಂತರ, ಬಿಜೆಪಿ ಪಕ್ಷ ಜೆಡಿಎಸ್ಸಿಗೆ ಬೆಂಬಲ ನೀಡಲು ಅಥವಾ ಬೆಂಬಲ ಪಡೆದುಕೊಳ್ಳಲು ಸಿದ್ದವಾಗಿಯೇ ಇತ್ತು. ಇನ್ನು ಎಚ್ಡಿಕೆ ಸಿಎಂ ಆದ ನಂತರ, ಪ್ರಧಾನಿ ಆದಿಯಾಗಿ ಕೇಂದ್ರ ಸಚಿವರನ್ನು ಭೇಟಿಯಾಗಿ ಬಂದಿದ್ದಾರೆ. ಕೇಂದ್ರದ ಸಂಪೂರ್ಣ ಸಹಕಾರ ಸಿಗಲಿದೆ ಎನ್ನುವ ಮಾತನ್ನು ಕುಮಾರಸ್ವಾಮಿಯೇ ಹೇಳಿರುವುದರಿಂದ, ಕೇಂದ್ರ ಎಚ್ಡಿಕೆ ಸರಕಾರಕ್ಕೆ ಸಹಕಾರ ನೀಡುವುದಿಲ್ಲ ಎನ್ನುವ ಸಂಶಯ ತಮಗ್ಯಾಕೆ ಕಾಡಲಾರಂಭಿಸಿದೆ?
ಕುಮಾರಸ್ವಾಮಿ, ಡಿಕೆಶಿ ಅವರನ್ನು ಓಲೈಸಿಕೊಳ್ಳುವ ಅವಶ್ಯಕತೆ
5. ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ತಾವು ಆಡಿರುವ ಮಾತನ್ನು ಅವಲೋಕಿಸುವುದಾದರೆ, ಪೀಠಾಧಿಪತಿಗಳಾಗಿ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ಅವರನ್ನು ಓಲೈಸಿಕೊಳ್ಳುವ ಅವಶ್ಯಕತೆಯಿದೆಯಾ ಅಥವಾ ಒಕ್ಕಲಿಗ ಸಮುದಾಯದ ಅತ್ಯಂತ ಪ್ರಭಾವಿ ಸ್ವಾಮೀಜಿಗಳಾಗಬೇಕು ಎನ್ನುವ ಉದ್ದೇಶವೇನಾದರೂ, ನಂಜಾವಧೂತ ಶ್ರೀಗಳಿಗೆ ಇದೆಯಾ? ಎನ್ನುವ ಸಂಶಯ ಕಾಡದೇ ಇರದು. ಯಾಕೆಂದರೆ, ಆದಿಚುಂಚನಗಿರಿ ಮಠವನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಸಮುದಾಯದ ಪರವಾಗಿ ಆ ಮಠ ನಿಂತಿದ್ದರೂ, ಯಾವುದೇ ಒಂದು ಜಾತಿ ಅಥವಾ ಪಕ್ಷದ ಪರವಾಗಿ ನಿಂತ ಉದಾಹರಣೆಗಳು ಕಮ್ಮಿ...