ಮೇಲುಕೋಟೆ ನಾಪತ್ತೆಯಾಗಿದ್ದ ಆಭರಣ ಹುಂಡಿಯಲ್ಲಿ ಪತ್ತೆ!
ಮಂಡ್ಯ, ಆಗಸ್ಟ್ 13 : ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ನಾಪತ್ತೆಯಾಗಿದ್ದ ಆಭರಣಗಳ ಪೈಕಿ 8 ಆಭರಣಗಳು ಬುಧವಾರ ಪತ್ತೆಯಾಗಿವೆ. ನಾಪತ್ತೆಯಾದ ಆಭರಣಗಳು ದೇವಾಲಯದ ಹುಂಡಿಯಲ್ಲಿ ಪ್ರತ್ಯಕ್ಷವಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬುಧವಾರ ದೇವಾಲಯದ ಹುಂಡಿಯ ಹಣ ಎಣಿಕೆ ಕಾರ್ಯ ನಡೆಯಿತು ಈ ಸಂದರ್ಭದಲ್ಲಿ ದೇವರಿಗೆ ಧರಿಸಿದ ನಂತರ ಕಾಣೆಯಾಗಿದ್ದ ಶಂಖ, ಚಕ್ರ, ಗದಾಂಗಿ ಹಾಗೂ 5 ಪದಕಗಳು ಪತ್ತೆಯಾಗಿವೆ. ದೇವಾಲಯದಿಂದ ಕಾಣೆಯಾದ 32 ಆಭರಣಗಳ ಪಟ್ಟಿಯಲ್ಲಿದ್ದ ಎರಡು ಪದಕಗಳು, ಜತೆಗೆ, ಯಾವುದೇ ದೂರಿನಲ್ಲೂ ದಾಖಲಾಗದ ಮೂರು ಪದಕಗಳು ಸಿಕ್ಕಿವೆ. [ಮೇಲುಕೋಟೆಯಿಂದ ಆಭರಣ ನಾಪತ್ತೆ]
ದೇವಾಲಯದಿಂದ 32 ಚಿನ್ನದ ಆಭರಣಗಳು ನಾಪತ್ತೆಯಾದ ಬಗ್ಗೆ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಆದರೆ, ಕಾಣೆಯಾಗಿದ್ದ ಆಭರಣ ಹುಂಡಿಯಲ್ಲಿ ಹೇಗೆ? ಪತ್ತೆಯಾಯಿತು ಎಂದು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. [ಮೇಲುಕೋಟೆ ದೇವಾಲಯಕ್ಕೆ ಆಡಳಿತಾಧಿಕಾರಿ ನೇಮಕ]
ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಹುಂಡಿಯಲ್ಲಿ ಆಭರಣಗಳನ್ನು ಹಾಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೇಲುಕೋಟೆ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ಅವರು ಈ ಕುರಿತು ಮಾತನಾಡಿದ್ದು, 32 ಆಭರಣಗಳ ನಾಪತ್ತೆ ಸಂಬಂಧ ವಿಚಾರಣೆ ಪ್ರಗತಿಯಲ್ಲಿದೆ. ಹುಂಡಿಯಲ್ಲಿ ಪತ್ತೆಯಾಗಿರುವ ಆಭರಣಗಳು ದೂರಿನಲ್ಲಿರುವ ಆಭರಣಗಳೇ, ಅಲ್ಲವೇ? ಎಂಬುದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.