ಶಸ್ತ್ರಚಿಕಿತ್ಸೆಗೆ ಸಿಎಂ ಬೊಮ್ಮಾಯಿ ಅಮೆರಿಕಾಗೆ? ಸಚಿವ ಅಶೋಕ್ ಸ್ಪಷ್ಟನೆ
ಮಂಡಿನೋವಿಗೆ ತುತ್ತಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಂದಿನ ತಿಂಗಳು ಅಮೆರಿಕಾಗೆ ಹೋಗಲಿದ್ದಾರೆ. ಅವರು ಈಗಾಗಲೇ ಯುಎಸ್ಎ ವೀಸಾಗೆ ಅರ್ಜಿ ಹಾಕಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಇಷ್ಟೇ ಅಲ್ಲದೇ, ಶಸ್ತ್ರಚಿಕಿತ್ಸೆಯ ನಂತರ ಅವರಿಗೆ ಮೂರು ತಿಂಗಳ ವಿಶ್ರಾಂತಿಯ ಅವಶ್ಯಕತೆಯಿದೆ. ಹಾಗಾಗಿ, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿಯ ವರಿಷ್ಠರು ಸೂಚಿಸಿದ್ದಾರೆ ಎನ್ನುವ ಅನಧಿಕೃತ ಸುದ್ದಿಗಳು ಹರಿದಾಡುತ್ತಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಈ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಸಚಿವ ಆರ್.ಅಶೋಕ್ ಉತ್ತರಿಸಿದ್ದಾರೆ. ಸಚಿವರ ಉತ್ತರಕ್ಕೆ ಪಕ್ಕದಲ್ಲೇ ಇದ್ದ ಮತ್ತೋರ್ವ ಸಚಿವ ಬೈರತಿ ಬಸವರಾಜ್ ಕೂಡಾ ಕೋರಂ ಹಾಡಿದ್ದಾರೆ.
ಬಿಟ್ ಕಾಯಿನ್ ಪ್ರಕರಣ ಇನ್ನೂ ವರಿಷ್ಠರ ಅಂಗಣದಲ್ಲಿ ಸದ್ದು ಮಾಡುತ್ತಿರುವುದು ಒಂದು ಕಡೆಯಾದರೆ ಮುಖ್ಯಮಂತ್ರಿ ಬೊಮ್ಮಾಯಿ ತೀವ್ರ ಮೊಣಕಾಲಿನ ನೋವಿನಿಂದ ಬಳಲುತ್ತಿರುವುದು ಇನ್ನೊಂದು ಕಡೆ. ಆದರೂ, ಚಳಿಗಾಲದ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಸಿಎಂ, ಮತಾಂತರ ನಿಷೇಧ ಕಾಯಿದೆಯನ್ನು ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಜೂತೆಗೆ, ವಿರೋಧ ಪಕ್ಷವಾದ ಕಾಂಗ್ರೆಸ್ ಅನ್ನು ಈ ವಿಚಾರದಲ್ಲಿ ಮುಜುಗರಕ್ಕೆ ದೂಡುವಲ್ಲಿನ ಕಾರ್ಯತಂತ್ರವೂ ಯಶಸ್ವಿಯಾಗಿತ್ತು. ಶಸ್ತ್ರಚಿಕಿತ್ಸೆಗಾಗಿ ಸಿಎಂ ಬೊಮ್ಮಾಯಿ ಅಮೆರಿಕಾಗೆ? ಸಚಿವ ಅಶೋಕ್ ಹೇಳಿದ್ದೇನು?

ಮುಖ್ಯಮಂತ್ರಿಗಳು ಶಸ್ತ್ರಚಿಕಿತ್ಸೆಗೆ ಅಮೆರಿಕಾಗೆ ಹೋಗುವುದು ಕನ್ಫರ್ಮ್ ಆಗಿದೆಯಾ
ಸರ್, ಮುಖ್ಯಮಂತ್ರಿಗಳು ಶಸ್ತ್ರಚಿಕಿತ್ಸೆಗೆ ಅಮೆರಿಕಾಗೆ ಹೋಗುವುದು ಕನ್ಫರ್ಮ್ ಆಗಿದೆಯಾ ಸರ್ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್.ಅಶೋಕ್, "ಮುಖ್ಯಮಂತ್ರಿಗಳ ಮಂಡಿ ನೋವಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ. ಅವರು ಅಮೆರಿಕಾಗೆ ಹೋಗುತ್ತಿದ್ದಾರೆ ಎನ್ನುವುದು ಕಪೋಕಲ್ಪಿತ ಸುದ್ದಿಯೇ ಹೊರತು ಇದರಲ್ಲಿ ನಿಜಾಂಶವಿಲ್ಲ"ಎಂದು ಸಚಿವರು ಸ್ಪಷ್ಟನೆಯನ್ನು ನೀಡಿದ್ದಾರೆ. ಅಶೋಕ್ ಹೇಳಿಕೆಗೆ ಬೈರತಿ ಬಸವರಾಜ್ ಕೂಡಾ ತಲೆಯಾಡಿಸಿದ್ದಾರೆ.

ಆರ್.ಅಶೋಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ
"ಮುಖ್ಯಮಂತ್ರಿಗಳ ಆರೋಗ್ಯ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ. ಅವರು ಅಮೆರಿಕಾಗೆ ಹೋಗುತ್ತಿದ್ದಾರೆ, ಮುಖ್ಯಮಂತ್ರಿ ಬದಲಾವಣೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾಗಿರುವಂತದ್ದು. ಬೊಮ್ಮಾಯಿಯವರು ನಮ್ಮ ನಾಯಕರು, ಇದನ್ನು ದಾವಣಗೆರೆಯ ಸಮಾವೇಶದಲ್ಲಿ ಖುದ್ದು ಅಮಿತ್ ಶಾ ಅವರೇ ಹೇಳಿದ್ದಾರೆ. ಆದಾಗ್ಯೂ, ಕೆಲವರು ಸಿಎಂ ಸ್ಥಾನದಿಂದ ಬೊಮ್ಮಾಯಿ ನಿರ್ಗಮನ ಎಂದು ಕುಚೋದ್ಯ ಮಾಡುತ್ತಿದ್ದಾರೆ"ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸಿಎಂ ಬೊಮ್ಮಾಯಿಯವರು ಆಪರೇಶನಿಗೆ ಒಳಗಾಗುತ್ತಿಲ್ಲ
"ಸಿಎಂ ಬೊಮ್ಮಾಯಿಯವರು ಆಪರೇಶನಿಗೆ ಒಳಗಾಗುತ್ತಿಲ್ಲ, ಅವರು ಅದಕ್ಕಾಗಿ ಯಾವುದೇ ಆಸ್ಪತ್ರೆಗೂ ದಾಖಲಾಗುತ್ತಿಲ್ಲ. ಸರ್ಜರಿ ಇಲ್ಲದೆಯೇ ಮಂಡಿ ನೋವು ಸರಿ ಮಾಡಲು ಆರ್ಥೋಪೆಡಿಕ್ ಸರ್ಜನ್ ಗಳು ಸಲಹೆಯನ್ನು ನೀಡಿದ್ದಾರೆ. ಅದರಂತೇ, ಅವರು ಇನ್ನೇನು ಸ್ವಲ್ಪದಿನದಲ್ಲೇ ಗುಣಮುಖರಾಗುತ್ತಾರೆ. ಅಮೆರಿಕಾಗೆ ಹೋಗುತ್ತಾರೆ ಎಂದು ಸುದ್ದಿ ಹಬ್ಬಿಸಿದವರನ್ನು ಮೊದಲು ಹುಚ್ಚಾಸ್ಪತ್ರೆಗೆ ಸೇರಿಸಬೇಕು"ಎಂದು ಸಚಿವ ಆರ್.ಅಶೋಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸಾರ್ವಜನಿಕ ಸಭೆಯಲ್ಲಿ ಅಮಿತ್ ಶಾ ಈಗಾಗಲೇ ಹೇಳಿದ್ದಾರೆ
"ಸಾರ್ವಜನಿಕ ಸಭೆಯಲ್ಲಿ ಅಮಿತ್ ಶಾ ಅವರು ಘಂಟಾಗೋಷವಾಗಿ ಮುಂದಿನ ಚುನಾವಣೆಯನ್ನೂ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಎದುರಿಸಲಿದ್ದೇವೆ ಎಂದು ಹೇಳಿದ್ದಾರೆ. ಆದರೂ, ಸಿಎಂ ಬದಲಾವಣೆ ಎನ್ನುವ ಸುದ್ದಿ ಅನಾವಶ್ಯಕವಾಗಿ ಹರಿದಾಡುತ್ತಿದೆ. ಇದನ್ನು ಹಬ್ಬಿಸಿದವರು ಹುಚ್ಚಾಸ್ಪತ್ರೆಯಲ್ಲಿ ಇರಲು ಲಾಯಕ್"ಎಂದು ಸಚಿವ ಅಶೋಕ್ ಹೇಳಿದ್ದಾರೆ. ಆದರೆ, ರಾಜಕಾರಣಿಗಳ ಹೇಳಿಕೆಯನ್ನು ಖಚಿತವಾಗಿ ನಂಬುವುದಾದರೂ ಹೇಗೆ ಎನ್ನುವುದು ಪ್ರಶ್ನೆಯಾಗಿಯೇ ಉಳಿಯಲಿದೆ.












Click it and Unblock the Notifications