ತುಮಕೂರಿಗೆ ಕೋಟಿ ಕೋಟಿ ಅನುದಾನ: ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಎಂದ ಪ್ರಿಯಾಂಕ್ ಖರ್ಗೆ
ತುಮಕೂರು, ಡಿಸೆಂಬರ್ 03: ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ (ಡಿಸೆಂಬರ್ 2) ಸೋಮವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ತುಮಕೂರಿನ ಕೋರ ಹೋಬಳಿಯ ಪಿ.ಗೊಲ್ಲಹಳ್ಳಿ ಹತ್ತಿರ ಈ ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗಲಿದೆ
ರಾಜ್ಯ ಸರ್ಕಾರದ ಈ ನೂತನ ಹೆಜ್ಜೆಯ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ. ಗ್ಯಾರಂಟಿಗಳ ಮೂಲಕ ಜನರ ಬದುಕಿನ ಅಭಿವೃದ್ಧಿ ಮಾಡುವುದರೊಂದಿಗೆ, ಹಲವು ಯೋಜನೆಗಳು, ಕಾಮಗಾರಿಗಳ ಮೂಲಕ ರಾಜ್ಯದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲೂ ಸರ್ಕಾರ ಮುಂದೆ ಸಾಗುತ್ತಿದೆ ಎಂದರು.

ವಿಶೇಷವಾಗಿ ತುಮಕೂರಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು, ಇದಕ್ಕಾಗಿ ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ 50 ಎಕರೆ ಭೂಮಿಯನ್ನು ನೀಡಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಜಾಗತಿಕ ಗುರುತು ಸಿಗುವುದರೊಂದಿಗೆ ಆರ್ಥಿಕ ಪ್ರಗತಿಗೂ ಈ ಕ್ರೀಡಾಂಗಣ ಕೊಡುಗೆ ನೀಡಲಿದೆ ಎಂದು ಹೇಳಿದರು.
ಇನ್ನು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ಜೊತೆಗೆ ತುಮಕೂರು ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 10,000 ವಸತಿ ಯೋಜನೆಗಳ ಮೊದಲ ಕಂತಿನ 30 ಕೋಟಿಗಳ ರೂಪಾಯಿ ಅನುದಾನ ಬಿಡುಗಡೆ. ತುಮಕೂರು ಜಿಲ್ಲೆಯ 30,000 ಸ್ವಸಹಾಯ ಗುಂಪಿನ ಮಹಿಳೆಯರಿಗೆ ಸಮುದಾಯ ಬಂಡವಾಳ ನಿಧಿಯ ರೂ. ₹41.29 ಕೋಟಿಗಳ ಅನುದಾನ ಬಿಡುಗಡೆ.

ಜಲ ಜೀವನ್ ಮಿಷನ್ ಯೋಜನೆಯಡಿ ₹194.23 ಕೋಟಿಗಳ ಮೊತ್ತದ 183 ಕಾಮಗಾರಿಗಳಿಗೆ ಶಂಕುಸ್ಥಾಪನೆ. ತುಮಕೂರು ಮತ್ತು ಮಧುಗಿರಿ ವಿಭಾಗಗಳಲ್ಲಿ CEPMIZ ಯೋಜನೆಯಡಿ ಶಾಲೆ, ಅಂಗನವಾಡಿ, ರಸ್ತೆ, ಸೋಲಾರ್ ಪಾರ್ಕ್ ಮುಂತಾದ ಕಾಮಗಾರಿಗಳ ಉದ್ಘಾಟನೆ/ಶಂಕುಸ್ಥಾಪನೆ. ಇವು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಅನುಷ್ಠಾನಗೊಂಡಿವೆ. ತುಮಕೂರು ಜಿಲ್ಲಾ ಗ್ರಾಮೀಣ ವ್ಯಾಪ್ತಿಯಲ್ಲಿನ 20,000 ಆಸ್ತಿ ಮಾಲೀಕರಿಗೆ ಈ-ಸ್ವತ್ತು ಪ್ರಮಾಣಪತ್ರ ವಿತರಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.












Click it and Unblock the Notifications