ರಮೇಶ್ ಜಾರಕಿಹೊಳಿ ಸಂಕಲ್ಪ ಬಿಚ್ಚಿಟ್ಟ ನಳೀನ್ ಕುಮಾರ್ ಕಟೀಲ್!
ಬೆಂಗಳೂರು, ಸೆಪ್ಟೆಂಬರ್ 29; ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತೆ ಸಚಿವರಾಗುತ್ತಾರೆಯೇ?. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆ ಯಾವಾಗ? ಮುಂತಾದ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.
ರಮೇಶ್ ಜಾರಕಿಹೊಳಿ ಸಂಕಲ್ಪವೊಂದನ್ನು ಮಾಡಿದ್ದಾರೆ. ಬೆಳಗಾವಿಯಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಸಂಕಲ್ಪದ ಬಗ್ಗೆ ಮಾತನಾಡಿದ್ದಾರೆ. ಮುಂದಿನ ಚುನಾವಣೆಯ ಕುರಿತು ಸಹ ಅವರು ಹಲವು ವಿಚಾರ ಹಂಚಿಕೊಂಡಿದ್ದಾರೆ.
ಗುರುವಾರ ನಳೀನ್ ಕುಮಾರ್ ಕಟೀಲ್ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ರಾಮದುರ್ಗ ವಿಧಾನಸಭಾ ಕ್ಷೇತ್ರದ ಗೊಡಚಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು, ಆಶೀರ್ವಾದ ಪಡೆದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

"ನಮ್ಮದು ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಅವರ ಗುರಿ ಒಂದೇ ಇದೆ. ರಮೇಶ್ ಜಾರಕಿಹೊಳಿ ಅವರು ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯಗೆ ರಾಜಕೀಯ ಸನ್ಯಾಸ ಕೊಡಿಸುವ ಸಂಕಲ್ಪ ತೆಗೆದುಕೊಂಡಿದ್ದಾರೆ" ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು.
ಗುಜರಾತ್ ರಾಜ್ಯದ ಜೊತೆಗೆ ಕರ್ನಾಟಕದಲ್ಲಿಯೂ ಚುನಾವಣೆ ನಡೆಯಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, "ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅವಧಿ ಪೂರ್ಣ ಚುನಾವಣೆ ಬರಲ್ಲ. ನಮ್ಮ ಸರ್ಕಾರ ಪೂರ್ಣ ಅವಧಿ ಪೂರೈಸುತ್ತದೆ" ಎಂದು ಸ್ಪಷ್ಟಪಡಿಸಿದರು.
150 ಸ್ಥಾನದಲ್ಲಿ ಗೆಲುವು; "ನಮಗೆ ಯಾವುದೇ ಚುನಾವಣೆ ಧಾವಂತ ಇಲ್ಲ. ಸಿಎಂ ಆಗುವ ಧಾವಂತ ಇರುವುದು ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ಗೆ ಚುನಾವಣೆಯಲ್ಲಿ ಬೆಳಗಾವಿಯಲ್ಲಿ 18 ಸ್ಥಾನ ಗೆಲ್ಲುತ್ತೇವೆ. ರಾಜ್ಯದಲ್ಲಿ 150 ಸ್ಥಾನ ಗೆಲ್ಲುವ ಗುರಿ ಇದೆ" ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.

ಡಿ. ಕೆ. ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆದ ಬಗ್ಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, "ಸಿಬಿಐ, ಐಟಿ ಎಲ್ಲರ ತನಿಖೆ ಮಾಡುತ್ತದೆ. ಪ್ರಾಮಾಣಿಕವಾಗಿ ಇದ್ದರೆ ಭಯಪಡುವ ಅಗತ್ಯವಿಲ್ಲ. ಧೈರ್ಯವಾಗಿ ತನಿಖೆಗೆ ತೆರಳಿ ಉತ್ತರ ಕೊಡಬಹುದು" ಎಂದು ಹೇಳಿದರು.
"ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ 9 ಗಂಟೆಗಳ ಕಾಲ ತನಿಖೆ ಮಾಡಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಜೈಲಿಗೆ ಹಾಕಿದ್ದರು. ಆಗ ನಾವೆಲ್ಲ ಪ್ರತಿಭಟನೆ ಮಾಡಿದ್ದೇವಾ?. ಇವರ ಸಮಸ್ಯೆ ನೋಡಿ ಜೈಲಿಗೆ ಹೋಗಿ ಬಂದ ಬಳಿಕ ಜನರನ್ನು ಸೇರಿಸಿ ಮೆರವಣಿಗೆ ಮಾಡುತ್ತಾರೆ. ಐಟಿ ದಾಳಿ ನಡೆದರೆ ಜನರನ್ನು ಸೇರಿಸಿ ಬೊಬ್ಬೆ ಹಾಕುತ್ತಾರೆ" ಎಂದು ನಳಿನ್ ಕುಮಾರ್ ಲೇವಡಿ ಮಾಡಿದರು.
ಸಂಪುಟ ಸೇರುತ್ತಾರೆ; "ರಮೇಶ್ ಜಾರಕಿಹೊಳಿ ಮತ್ತೆ ಖಂಡಿತವಾಗಿಯೂ ಸಚಿವರಾಗುತ್ತಾರೆ. ಯಾವಾಗ ಆಗಲಿದ್ದಾರೆ ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ" ಎಂದು ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.
ಟಿಕೆಟ್ ಹಂಚಿಕೆ ಬಗ್ಗೆ ಮಾತನಾಡಿದ ರಾಜ್ಯಾಧ್ಯಕ್ಷರು, "ಹಾಲಿ ಬಿಜೆಪಿ ಶಾಸಕರ ಮತ ಕ್ಷೇತ್ರದಲ್ಲಿ ಅವರನ್ನು ಬದಲಾಯಿಸುವ ಪ್ರಶ್ನೆ ಇಲ್ಲ. ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದರೆ ಅದು ಪಕ್ಷದ ಶಕ್ತಿ ತೋರಿಸುತ್ತದೆ" ಎಂದರು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ಸಚಿವರಾಗಿದ್ದರು. ಅಶ್ಲೀಲ ಸಿಡಿ ವಿಚಾರ ಬೆಳಕಿಗೆ ಬಂದ ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಈ ಪ್ರಕರಣದ ವಿಚಾರಣೆ ಇನ್ನೂ ಹೈಕೋರ್ಟ್ನಲ್ಲಿ ನಡೆಯುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಇನ್ನೂ ಸಿಕ್ಕಿಲ್ಲ.












Click it and Unblock the Notifications