ಅವಧಿಗೆ ಮುನ್ನ ಸಿದ್ದು ಸರಕಾರ ಪತನ: ಎಚ್ಡಿಕೆ, ಡಿಕೆಶಿ ವಾಕ್ಸಮರ
ಅವಧಿಗೂ ಮುನ್ನ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ, ಸಚಿವ ಡಿ ಕೆ ಶಿವಕುಮಾರ್ ತಿರುಗೇಟು.
ಬೆಂಗಳೂರು, ಫೆ 2: ಅವಧಿಗೂ ಮುನ್ನ ಸಿದ್ದರಾಮಯ್ಯ ಸರಕಾರ ಪತನಗೊಂಡು, ಚುನಾವಣೆ ಎದುರಿಸಬೇಕಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೀಡಿದ ಹೇಳಿಕೆಗೆ, ರಾಜ್ಯ ಇಂಧನ ಸಚಿವ ಡಿ ಕೆ ಶಿವಕುಮಾರ್ ತನ್ನದೇ ಸ್ಟೈಲಿನಲ್ಲಿ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿಯವರು ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದವರು ಮತ್ತು ರಾಜಕೀಯ ಹಿನ್ನಲೆ ಉಳ್ಳವರು, ಯಾವುದಾದರೂ ಹೇಳಿಕೆ ನೀಡುವ ಮುನ್ನ ಗಂಭೀರವಾಗಿ ಆಲೋಚಿಸಿ ಹೇಳಿಕೆ ನೀಡಲಿ ಎಂದು ಡಿ ಕೆ ಶಿವಕುಮಾರ್, ಕುಮಾರಸ್ವಾಮಿಗೆ ಸಲಹೆ ನೀಡಿದ್ದಾರೆ. (2017ರಲ್ಲೇ ಚುನಾವಣೆ, ಎಚ್ಡಿಕೆ ಭವಿಷ್ಯ)
ಕಾಂಗ್ರೆಸ್ ಪಕ್ಷ ಒಡೆದು ಹೋಗಲಿದೆ ಎಂದು ಕುಮಾರಸ್ವಾಮಿ ಹೇಳುತ್ತಾರೆ, ಶತಮಾನಗಳ ಇತಿಹಾಸವಿರುವ ಪಕ್ಷ ನಮ್ಮದು. ಹೋಳಾಗಲು 'ಕುಂಬಾರನ ಮಡಿಕೆಯಲ್ಲ' ಎಂದು ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಗುರುವಾರ (ಫೆ 2) ಸಚಿವ ರಮೇಶ್ ಜಾರಕಿಹೊಳೆಯವರನ್ನು ಭೇಟಿಯಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಡಿಕೆಶಿ, ಪಕ್ಷದ ಹಿರಿಯ ನಾಯಕ ಎಸ್ ಎಂ ಕೃಷ್ಣ ರಾಜೀನಾಮೆಯಿಂದ ಪಕ್ಷದಲ್ಲಿ ಸದ್ಯ ಗೊಂದಲವಿರುವುದು ಹೌದು.
ಕೃಷ್ಣ ನಮ್ಮೆಲ್ಲರ ಹಿರಿಯರು ಮತ್ತು ಮಾರ್ಗದರ್ಶಕರು, ಅವರ ಮನವೊಲಿಸುವ ಕೆಲಸ ನಡೆಯುತ್ತಿದೆ. ಕುಮಾರಸ್ವಾಮಿಯವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕರ್ನಾಟಕ ಹಾಲು ಮಹಾಮಂಡಳಿಗೆ (ಕೆಎಂಎಫ್) ನೂತನ ಅಧ್ಯಕ್ಷರಾಗಿ ರವೀಂದ್ರ ಅವರು ಸದ್ಯದಲ್ಲೇ ಅಧಿಕಾರ ಸ್ವೀಕರಿಸಿಕೊಳ್ಳಲಿದ್ದಾರೆಂದು ಇಂಧನ ಸಚಿವಾ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಎಸ್ ಎಂ ಕೃಷ್ಣ ರಾಜೀನಾಮೆಯನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ರಾಜ್ಯದಲ್ಲಿ 2017ರಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದೆ. ನಾನೇನು ಭವಿಷ್ಯ ನುಡಿಯುತ್ತಿಲ್ಲ, ಆದರೆ ಸದ್ಯದ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಳನ್ನು ನೋಡಿದರೆ ಹಾಗೆ ಅನ್ನಿಸುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದರು.












Click it and Unblock the Notifications