ಮೇಕೆದಾಟು ಪಾದಯಾತ್ರೆ : ಡಿ.ಕೆ. ಶಿವಕುಮಾರ್ ವಿರುದ್ಧ ಮೂರು ಕೇಸು!
ಬೆಂಗಳೂರು, ಜ. 11: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕೈಗೊಂಡಿರುವ ಪಾದಯಾತ್ರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸರಣಿ ಎಫ್ಐಆರ್ ದಾಖಲಾಗಿವೆ.
ಪಾದಯಾತ್ರೆ ಆರಂಭವಾದ ದಿನವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಇತರೆ 30 ಕಾಂಗ್ರೆಸ್ ನಾಯಕರ ವಿರುದ್ಧ ಸಾತನೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದರ ಬೆನ್ನಲ್ಲೇ ಕನಕಪುರ ತಹಶೀಲ್ದಾರ್ ವಿಶ್ವನಾಥ್ ನೀಡಿರುವ ದೂರಿನ ಮೇರೆಗೆ ಸಾತನೂರು ಪೊಲೀಸರು ಡಿ.ಕೆ. ಶಿವಕುಮಾರ್ ಸೇರಿದಂತೆ 41 ಕಾಂಗ್ರೆಸ್ ನಾಯಕರ ವಿರುದ್ಧ ಸಾತನೂರು ಪೊಲೀಸ್ ಠಾಣೆಯಲ್ಲಿ 2 ನೇ ಎಫ್ಐಆರ್ ದಾಖಲಾಗಿದೆ.
ಎರಡನೇ ಎಫ್ಐಆರ್ ನಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಮೊದಲ ಅರೋಪಿಯನ್ನಾಗಿ ಮಾಡಲಾಗಿದೆ. ಡಿ.ಕೆ. ಸುರೇಶ್ ಅವರನ್ನು ಎರಡನೇ ಆರೋಪಿ ಮಾಡಲಾಗಿದೆ. ಆ ಬಳಿಕ ಕೃಷ್ಣಬೈರೇಗೌಡ, ಮೋಟಮ್ಮ, ಪರಮೇಶ್ವರ ನಾಯಕ್ ಸೇರಿದಂತೆ 40 ಕಾಂಗ್ರೆಸ್ ನಾಯಕರ ವಿರುದ್ಧ ತಹಶೀಲ್ದಾರ್ ದೂರು ನೀಡಿದ್ದಾರೆ.

ಇನ್ನು ಎಫ್ಐಆರ್ ಸಂಬಂಧಕ್ಕೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿಯವರು ಕಾನೂನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನೂರು ಜನರ ವಿರುದ್ಧ ಎಫ್ಐಆರ್ ದಾಖಲಿಸಿದರೂ ನಾವು ಹೆದರುವುದಿಲ್ಲ. ಬಿಜೆಪಿಯ ರೇಣುಕಾಚಾರ್ಯ ಹೋರಿ ಹೆದರಿಸುವ ಸ್ಪರ್ಧೆಯಲ್ಲಿ ಮೆರವಣಿಗೆ ಮಾಡಿದ್ರು. ಆತನ ವಿರುದ್ಧ ಯಾಕೆ ಎಫ್ಐಆರ್ ದಾಖಲಿಸಲಿಲ್ಲ. ಶೋಭಾ ಕರಂದ್ಲಾಜೆ ನಡೆಸಿದ ಸಮಾವೇಶದಲ್ಲಿ ಜನ ಭಾಗಿಯಾಗಿರಲಿಲ್ಲವೇ ? ಯಾಕೆ ಅವರ ವಿರುದ್ಧ ಎಫ್ಐಆರ್ ದಾಖಲಾಗಲಿಲ್ಲ? ಓಮಿಕ್ರಾನ್ ಕೇವಲ ಕಾಂಗ್ರೆಸ್ ನವರಿಗೆ ಮಾತ್ರ ಬರುತ್ತದೆಯೇ ? ಬಿಜೆಪಿ ಮೂರ್ಖತನದಿಂದ ನಡೆದುಕೊಳ್ಳುತ್ತಿದೆ ಎಂದು ಸಿದ್ದು ಅವಾಜ್ ಬಿಟ್ಟಿದ್ದಾರೆ.
ಮಕ್ಕಳ ಹಕ್ಕು ರಕ್ಷಣ ಆಯೋಗದಿಂದಲೂ ಕೇಸು
ಇನ್ನು ಪಾದಯಾತ್ರೆ ವೇಳೆ ಕೊರೊನಾ ನಿಯಂತ್ರಣ ನಿಯಮ ಉಲ್ಲಂಘನೆ ಮಾಡಿ ಮಕ್ಕಳೊಂದಿಗೆ ಸಂವಾದ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮೇಲೆ ಕ್ರಮ ಜರುಗಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆದೇಶಿಸಿದೆ. ಸೋಮವಾರ ಈ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿ ಪತ್ರ ಬರೆದಿದೆ. ಈ ಪ್ರಕರಣ ಡಿ.ಕೆ. ಶಿವಕುಮಾರ್ ಪಾಲಿಗೆ ತಲೆಬಿಸಿ ಉಂಟು ಮಾಡುವ ಸಾಧ್ಯತೆಯಿದೆ. ಪಾದಯಾತ್ರೆ ವೇಳೆ ಮಾಸ್ಕ್ ಧರಿಸದೇ ಮಕ್ಕಳನ್ನು ಭೇಟಿ ಮಾಡಿ ನಿಯಮ ಉಲ್ಲಂಘನೆ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಡಿ.ಕೆ. ಶಿವಕುಮಾರ್ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದೆ.

ಮತ್ತೊಂದು ಎಫ್ಐಆರ್ :
Recommended Video
ಸದ್ಯಕ್ಕೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ಸೇರಿದಂತೆ ಡಿ.ಕೆ. ಶಿವಕುಮಾರ್ ವಿರುದ್ಧ ಮೂರು ಕೇಸು ದಾಖಲಾಗಿವೆ. ಇದರ ನಡುವೆ ಮೂರನೇ ದಿನದ ಭರ್ಜರಿ ಪಾದಯಾತ್ರೆ ಮುಂದವರೆದಿದೆ. ನೂರು ಕೇಸು ಹಾಕಿದರೂ ಪಾದಯಾತ್ರೆ ಕೈ ಬಿಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ.












Click it and Unblock the Notifications