ಡಾ. ರಾಜ್ ಸ್ಮಾರಕ ಲೋಕಾರ್ಪಣೆ: ಆಹ್ವಾನಿತರ ಪಟ್ಟಿ
ಬೆಂಗಳೂರು, ಅ 11: ಕುಂಟುತ್ತಾ, ತೆವಳುತ್ತಾ ಸಾಗುತ್ತಿದ್ದ ವರನಟ ಡಾ. ರಾಜಕುಮಾರ್ ಅವರ ಸ್ಮಾರಕ ಲೋಕಾರ್ಪಣೆಗೆ ಅಂತೂ ಇಂತೂ ಕಾಲ ಕೂಡಿಬಂದಿದೆ.
ಬರುವ ತಿಂಗಳು ಭಾನುವಾರ ನವೆಂಬರ್ ಒಂಬತ್ತರಂದು ರಾಜ್ ಸ್ಮಾರಕ ಲೋಕಾರ್ಪಣೆಗೆ ದಿನ ನಿಗದಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಭಾರತೀಯ ಚಿತ್ರರಂಗದ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ.
ರಾಜ್ ಸ್ಮಾರಕ ನಿರ್ಮಾಣಕ್ಕೆ ಎಂಟು ವರ್ಷ ತಗುಲಿದ್ದು ವಿಷಾದನೀಯ. ಆದರೂ, ಸ್ಮಾರಕ ಸಾರ್ವಜನಿಕರಿಗೆ ಮುಕ್ತವಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ರಾಜ್ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಸಭೆಯಲ್ಲಿ ಭಾಗವಹಿಸಿದ ನಂತರ ಹೇಳಿದರು.
ಈ ಕಾರ್ಯಕ್ರಮಕ್ಕೆ ಹಿಂದಿ ಚಿತ್ರರಂಗದ ದಿಗ್ಗಜ ಅಮಿತಾಬ್ ಬಚ್ಚನ್ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಅಲ್ಲದೇ, ದಕ್ಷಿಣಭಾರತ ಚಲನಚಿತ್ರರಂಗದ ಪ್ರಮುಖರಾದ ರಜನೀಕಾಂತ್, ಕಮಲಹಾಸನ್, ಮಮ್ಮುಟ್ಟಿ, ಚಿರಂಜೀವಿ ಜೊತೆಗೆ ಕನ್ನಡ ಚಿತ್ರೋದ್ಯಮದವರನ್ನೂ ಆಹ್ವಾನಿಸಲು ನಿರ್ಧರಿಸಲಾಗಿದೆ.
ಎರಡನೇ ಹಂತದಲ್ಲಿ ರಾಜಕುಮಾರ್ ವಸ್ತು ಸಂಗ್ರಹಾಲಯ, ಗ್ರಂಥಾಲಯ ಸೇರಿದಂತೆ ಇತರ ಅನೇಕ ಯೋಜನೆಗಳನ್ನು ರೂಪಿಸಲು ಮುಖ್ಯಮಂತ್ರಿಗಳು ಉತ್ಸುಕರಾಗಿದ್ದಾರೆಂದು ಬರಗೂರು ಹೇಳಿದ್ದಾರೆ.

ಸಭೆಯಲ್ಲಿ ಮುಖ್ಯಮಂತ್ರಿ ಹೊರತಾಗಿ ಗೃಹ ಸಚಿವ ಕೆ ಜೆ ಜಾರ್ಜ್, ಸಚಿವ ದಿನೇಶ್ ಗುಂಡೂರಾವ್, ಪಾರ್ವತಮ್ಮ ರಾಜಕುಮಾರ್, ಶಿವರಾಜ್ ಕುಮಾರ್, ಅಖಿಲ ಕರ್ನಾಟಕ ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ಮುಂತಾದವರು ಭಾಗವಹಿಸಿದ್ದರು.
ನಗರದ ಉತ್ತರ ಭಾಗದ ನಂದಿನಿ ಲೇಔಟಿನಲ್ಲಿರುವ ರಾಜ್ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಮಾಡಲಾದ ಕಂಠೀರವ ಸ್ಟುಡಿಯೋದಲ್ಲಿ ಸುಮಾರು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ ಸ್ಮಾರಕ ನಿರ್ಮಿಸಲು 2006ರಲ್ಲಿ ನಿರ್ಧರಿಸಲಾಗಿತ್ತು.












Click it and Unblock the Notifications