ರಾಜ್ಯದಲ್ಲಿ ಸಿಎಂ ಬದಲಾವಣೆ ಯಾವಾಗ? ಸ್ಪಷ್ಟ ಉತ್ತರ ಕೊಟ್ಟ ಮಲ್ಲಿಕಾರ್ಜುನ್ ಖರ್ಗೆ
ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಭಾರಿ ಚರ್ಚೆಗಳು ನಡೆಯುತ್ತಿವೆ. ಮುಖ್ಯವಾಗಿ ಸಿಎಂ ಬದಲಾವಣೆ ವಿಚಾರವಂತೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ನಾಯಕರ ಹೇಳಿಕೆಗಳಿಂದ ಕಾಂಗ್ರೆಸ್ನಲ್ಲೇ ಭಿನ್ನಮತ ಕೂಡ ಕಾಣಿಸಿಕೊಂಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಈ ಎಲ್ಲ ಗೊಂದಲಗಳಿಗೆ ತಕ್ಕ ಉತ್ತರ ನೀಡುವ ಮೂಲಕ ತೆರೆ ಎಳೆದಿದ್ದಾರೆ.
ಅಲ್ಲದೆ ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ನಲ್ಲಿ ಮುಸುಕಿನ ಗುದ್ದಾಟ ನಡೆಸುತ್ತಿರುವುದು ಒಂದೆಡೆಯಾದರೆ, ಸದ್ದಿಲ್ಲದೆ ಬಣ ರಾಜಕೀಯ ಕೂಡ ಗರಿಗೆದರಿದೆ. ಇದೆಲ್ಲವನ್ನೂ ಗಮನಿಸಿರುವ ಖರ್ಗೆ, ಮಹತ್ವದ ಸಂದೇಶವನ್ನು ರಾಜ್ಯ ಕಾಂಗ್ರೆಸ್ ನಾಯಕರಿಗೆ ರವಾನಿಸಿದ್ದಾರೆ. ಸಿಎಂ ಬದಲಾವಣೆ ಯಾವಾಗ ಮಾಡಬೇಕು ಎನ್ನುವುದು ನಮಗೆ ತಿಳಿದಿದ್ದು, ಸಮಯ ಬಂದಾಗ ಸಿಎಂ ಬದಲಾವಣೆ ಮಾಡುತ್ತೇವೆ. ಆದರೆ, ಸದ್ಯಕ್ಕೆ ಸಿಎಂ ಬದಲಾವಣೆ ಏನಿಲ್ಲ ಎಂದು ಖರ್ಗೆ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾಗ್ತಾರೆ, ಡಿಸಿಎಂ ಬದಲಾಗ್ತಾರೆ ಎಂದೆಲ್ಲ ಹೇಳಬಾರದು. ಏಕೆಂದರೆ ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಪಕ್ಷದ ಅಧ್ಯಕ್ಷನಾಗಿ ನಾನು, ರಾಹುಲ್ ಗಾಂಧಿ ಹಾಗೂ ಹೈಕಮಾಂಡ್ ಇದೆ. ನಾವು ಯಾವ ಸಮಯದಲ್ಲಿ ಏನು ಮಾಡಬೇಕು ಎನ್ನುವುದು ಬಹಳ ಚೆನ್ನಾಗಿ ಗೊತ್ತಿದೆ. ನಾವು ಅದರಂತೆಯೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಇತ್ತೀಚಿನ ಬೆಳವಣಿಗೆಗಳ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಮನಬಂದಂತೆ ಹೇಳಿಕೆ ನೀಡುತ್ತಿದ್ದು, ಇದರ ಬಗ್ಗೆಯೂ ಖರ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ನಾಯಕರು ಬಾಯಿ ಮುಚ್ಚಿಕೊಂಡಿರಬೇಕು, ಪಕ್ಷ ನಿಮಗೆ ಏನು ಕೆಲಸ ಕೊಟ್ಟಿದೆಯೋ ಮೊದಲು ಅದನ್ನು ಮಾಡಬೇಕು. ಯಾವ ಸಮಯದಲ್ಲಿ ಏನು ಮಾಡಬೇಕು ಎಂಬುದು ಹೈಕಮಾಂಡ್ಗೆ ಗೊತ್ತಿದೆ. ಇಲ್ಲಿ ಕೆಲವರು ಮನಬಂದಂತೆ ಹೇಳಿಕೆ ನೀಡುವುದರಿಂದ ಕಾಂಗ್ರೆಸ್ ಹೈಕಮಾಂಡ್ ನಡೆಯುವುದಲ್ಲ. ಸುಮ್ಮನೆ ಏನೇನೋ ಮಾತನಾಡುವುದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ಎಲ್ಲರ ಬಾಯಿಗೂ ಬೀಗ ಜಡಿದಿದ್ದಾರೆ.

ಕಾಂಗ್ರೆಸ್ಗೆ ಹೈಕಮಾಂಡ್ ಅನ್ನೋದು ಇನ್ನೂ ಇದೆ. ನಾವೆಲ್ಲ ಇರುವಾಗ ಸೂಕ್ತವಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತೇವೆ. ಸುಮ್ಮನೆ ವಿವಾದಗಳನ್ನು ಸೃಷ್ಟಿಸಬಾರದು, ಇದರಿಂದ ನಮ್ಮ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳುತ್ತದೆ. ಹಾಗಾಗಿ ಎಲ್ಲ ನಾಯಕರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ. ಯಾವ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದು ನಮಗೆ ಬಿಟ್ಟ ವಿಚಾರ ಎಂದು ಮಲ್ಲಿಕಾರ್ಜುನ್ ಖರ್ಗೆ ಅವರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಸದ್ಯ ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಇತ್ತೀಚೆಗೆ ಅಧಿಕಾರ ಹಂಚಿಕೆ ವಿಚಾರವು ದೊಡ್ಡದಾಗಿ ಸದ್ದು ಮಾಡಿತ್ತು. ಇದು ಕಾಂಗ್ರೆಸ್ನಲ್ಲೇ ಮುಜುಗರಕ್ಕೂ ಕಾರಣವಾಗಿತ್ತು. ಬಳಿಕ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿಯೂ ದೊಡ್ಡ ಚರ್ಚೆಗಳು ನಡೆದು, ಕೆಲವರು ಪರೋಕ್ಷವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಬಣದ ನಾಯಕರು ಡಿನ್ನರ್ ಮೀಟಿಂಗ್ ಹೆಸರಲ್ಲಿ ಗುಟ್ಟಾದ ಸಭೆ ನಡೆಸಿದ್ದಾರೆ ಎಂದು ಸಹ ಹೇಳಲಾಗಿತ್ತು. ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಅವರು ಹೊತ್ತಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆಯೂ ಚರ್ಚೆಗಳು ಜೋರಾಗಿದ್ದವು. ಕೊನೆಗೆ ಖರ್ಗೆ ಅವರು ಎಲ್ಲ ಗೊಂದಲಗಳಿಗೂ ಫುಲ್ಸ್ಟಾಪ್ ಇಟ್ಟಿದ್ದಾರೆ.












Click it and Unblock the Notifications