ಸಂದರ್ಶನ - ಕರ್ನಾಟಕದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ದೋಣಿ!
Recommended Video
ಬೆಂಗಳೂರು, ಡಿಸೆಂಬರ್ 19 : 'ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಎಲ್ಲರಿಗೂ ಗೊತ್ತು. ಬಿಜೆಪಿ ಬಹು ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ, ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತ ನೋಡಿ ಜನರು ಪಕ್ಷಕ್ಕೆ ಬೆಂಬಲ ನೀಡುತ್ತಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಈ ಬಾರಿ ಒಂದೇ ಸರ್ಕಾರವಾಗುತ್ತದೆ' ಎಂದು ಮಲ್ಲೇಶ್ವರಂ ಶಾಸಕ ಡಾ.ಅಶ್ವಥ್ ನಾರಾಯಣ ಘೋಷಿಸಿದರು.
ಹೊನ್ನಾವರ ಶೇಮ್: ಸಚಿವ ಯು ಟಿ ಖಾದರ್ ಸಂದರ್ಶನ
ಮಲ್ಲೇಶ್ವರಂನಲ್ಲಿ ಒಳ್ಳೆ ಕಾಫಿ ಸಿಗುತ್ತದೆ...ಕಾಫಿ ತಗೊಳ್ಳಿ...ಎಂದು ಶಾಸಕರ ಕಚೇರಿಯಲ್ಲಿ ಒನ್ ಇಂಡಿಯಾ ಕನ್ನಡದ ಜೊತೆ ಮಾತಿಗೆ ಕುಳಿತರು ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ. ಸುಮಾರು ಒಂದು ಗಂಟೆಗಳ ಕಾಲ ಕ್ಷೇತ್ರದ ಸಮಸ್ಯೆ, ಪಕ್ಷದ ಚುನಾವಣೆ ತಯಾರಿ, ತಂತ್ರಜ್ಞಾನಗಳ ಬಳಕೆ ಕುರಿತು ಅವರು ಮಾತನಾಡಿದರು.
ಎಲ್ಲ ಪಕ್ಷಗಳಿಗೆ ಮರ್ಮಾಘಾತ : ಕರ್ನಾಟಕ ಆಪ್ ಶಪಥ
'ಸಿದ್ದರಾಮಯ್ಯ ಅವರಿಗಿದ್ದ ಅಪಾರವಾದ ಅನುಭವ ನಾಲ್ಕೂವರೆ ವರ್ಷದ ಆಡಳಿತದಲ್ಲಿ ಕಾಣುತ್ತಿಲ್ಲ. ಜನರ ವಿಶ್ವಾಸ ಕಳೆದುಕೊಂಡ ಸರ್ಕಾರವಿದು, ಕಾಂಗ್ರೆಸ್ ಮುಳುಗುವ ದೋಣಿ. ಕರ್ನಾಟಕದಲ್ಲಿಯೂ ಪಕ್ಷ ಅಧಿಕಾರ ಕಳೆದುಕೊಳ್ಳಲಿದೆ. ಜನಪ್ರಿಯ ಯೋಜನೆಗಳು, ಸಿದ್ದರಾಮಯ್ಯ ಅವರ ತಂತ್ರ, ರಾಷ್ಟ್ರೀಯ ನಾಯಕರ ಚುನಾವಣಾ ರಣತಂತ್ರ ಯಾವುದೂ ಪಕ್ಷವನ್ನು ಸೋಲಿನಿಂದ ತಪ್ಪಿಸಲು ಸಾಧ್ಯವಿಲ್ಲ' ಎಂದು ಅಶ್ವಥ್ ನಾರಾಯಣ ಹೇಳಿದರು...ಸಂದರ್ಶನ ವಿವರಗಳು ಇಲ್ಲಿವೆ.
ಮಲ್ಲೇಶ್ವರಂ ಕ್ಷೇತ್ರದಲ್ಲಿ ಆಗಿರುವ ಕೆಲಸಗಳೇನು?
ಜನರ ಅವಶ್ಯಕತೆ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದೆ. ಇದಕ್ಕೆ ಪೂರಕವಾಗಿ ಸೌಲಭ್ಯಗಳನ್ನು ಒದಗಿಸುವುದು ಅಗತ್ಯವಾಗಿದೆ. ಕುಡಿಯುವ ನೀರು, ಪಾರ್ಕ್, ಒಳಚರಂಡಿ, ರಸ್ತೆ, ಬೀದಿದೀಪ ವಿಚಾರದಲ್ಲಿ ಸಾಕಷ್ಟು ಕೆಲಸಗಳು ಆಗಿವೆ.
ಜನರು ಕ್ಷೇತ್ರದ ಸಮಸ್ಯೆ ತಿಳಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಜನರು ಎಲ್ಲಿಂದ ಬೇಕಾದರೂ ಸಮಸ್ಯೆಗಳನ್ನು ದಾಖಲಿಸಲು ವ್ಯವಸ್ಥೆ ಮಾಡಲಾಗಿದೆ. ಎಲ್ಲರ ಧ್ವನಿಗೆ ಶಕ್ತಿ ನೀಡಿ, ಸಮಸ್ಯೆಗೆ ಪರಿಹಾರ ಕೊಡಿಸುವ ಕೆಲಸ ಮಾಡಲಾಗುತ್ತಿದೆ.
ಕ್ಷೇತ್ರದ ಅಭಿವೃದ್ಧಿಗೆ ಇರುವ ಸವಾಲುಗಳೇನು?
ಇದೊಂದು
ಹಳೆಯ
ಬಡಾವಣೆ.
ಇತಿಹಾಸ
ಇರುವ
ಕ್ಷೇತ್ರ
ಮಲ್ಲೇಶ್ವಂ.
ಹಳೆಯ
ಬಡಾವಣೆಯನ್ನು
ಪ್ರಸ್ತುತ
ಕಾಲಕ್ಕೆ
ತಕ್ಕಂತೆ
ಅಭಿವೃದ್ಧಿ
ಮಾಡಲು
ಸಾಕಷ್ಟು
ಸವಾಲುಗಳಿವೆ.
ಅವಶ್ಯಕತೆಗಳನ್ನು
ಒದಗಿಸಲು
ಸ್ಥಳವಕಾಶದ
ಕೊರತೆ
ಇದೆ.
ಈ
ಸವಾಲುಗಳನ್ನು
ಮೀರಿ
ಕೆಲಸ
ಮಾಡಬೇಕಾಗುತ್ತದೆ.
60ವರ್ಷಕ್ಕೂ ಹಳೆ ನೀರಿನ ಪೈಪ್ಗಳನ್ನು ಬದಲಾವಣೆ ಮಾಡಲಾಗಿದೆ. ನೀರು ಪೋಲಾಗದಂತೆ ಕ್ರಮ ಕೈಗೊಳ್ಳಲಾಗಿದೆ. ನೀರಿನ ಗುಣಮಟ್ಟ ಹೆಚ್ಚಿಸಲಾಗಿದೆ. ಕಸ ವಿಲೇವಾರಿ ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿದೆ. ಕಸ ವಿಂಗಡಣೆಯಲ್ಲಿ ಸ್ವಲ್ಪ ಹಿನ್ನಡೆ ಆಗಿದೆ. ಆದರೆ, ಸಂಗ್ರಹ ವಿಧಾನ ಚೆನ್ನಾಗಿದೆ.
ಕಸ ವಿಲೇವಾರಿ ವಿಚಾರದಲ್ಲಿ ಏಕೆ ಹಿನ್ನಡೆ ಆಗಿದೆ?
ಕಸ ವಿಲೇವಾರಿಯನ್ನು ನಾನು ಸವಾಲು ಎಂದು ಪರಿಗಣಿಸುತ್ತೇನೆ. ಸವಾಲುಗಳನ್ನು ಜನರ ಜೊತೆ ಹಂಚಿಕೊಂಡಿದ್ದೇನೆ. ಕಸ ವಿಂಗಡನೆಯಲ್ಲಿ ಬಹಳ ಸವಾಲಿನ ಕೆಲಸ. ಇದಕ್ಕೆ ಜನರ ಸಹಕಾರವೂ ಮುಖ್ಯ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಶಾಲೆಗಳಲ್ಲಿ ಮಕ್ಕಳಿಗೂ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ವಿಲೇವಾರಿ ಸರ್ಕಾರದ ಕರ್ತವ್ಯ.
ಎಸ್ಟಿಪಿ ಸ್ಥಾಪನೆ ವಿಚಾರದಲ್ಲಿ ನಿಮ್ಮ ಅಭಿಪ್ರಾಯ?
ನೀರು ಅಮೂಲ್ಯವಾದದ್ದು. ಸರಿಯಾಗಿ ಯೋಜನೆ ಮಾಡದ ಕಾರಣ ಜನರು ಗೊಂದಲ ಉಂಟಾಗಿತ್ತು. ಹೊಸ ಕಾನೂನು ಪಾಲನೆ ಮಾಡಿ ಎಂದು ಒತ್ತಾಯ ಮಾಡುವುದು ಸರಿಯಲ್ಲ. ಹಳೇ ಕಟ್ಟಡದಲ್ಲಿ ಎಸ್ಟಿಪಿ ಅಳವಡಿಕೆ ಮಾಡುವುದು ಕಷ್ಟ. ಜಲಮಂಡಳಿ ತನ್ನ ಕೆಲಸವನ್ನು ಜನರ ಮೇಲೆ ಹಾಕಿದೆ. ಹೊಸ ಕಟ್ಟಡದಲ್ಲಿ ಬಳಕೆ ಮಾಡಲು ಅವಕಾಶವಿದೆ. ಇದಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ. ಅವೈಜ್ಞಾನಿಕವಾಗಿ ನಿಯಮವನ್ನು ಹೇರಲಾಗಿದೆ.
ಕ್ಷೇತ್ರದ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಹೇಗೆ?
ನನ್ನ ಕ್ಷೇತ್ರದಲ್ಲಿ ಸರ್ಕಾರಿ ಜಾಗಗಳಲ್ಲಿ ಆದ್ದರಿಂದ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ. ಈಗ ಸಂಪಿಗೆ ರಸ್ತೆಯಲ್ಲಿ ಪಾರ್ಕಿಂಗ್ ಲಾಟ್ ನಿರ್ಮಾಣ ಮಾಡಲಾಗುತ್ತಿದೆ. ಖಾಸಗಿ ಅಪಾರ್ಟ್ ಮೆಂಟ್ಗಳಲ್ಲಿಯೂ ಪಾರ್ಕಿಂಗ್ಗೆ ಅವಕಾಶ ನೀಡಲಾಗುತ್ತದೆ. ಪಾರ್ಕಿಂಗ್ ಪಾಲಿಸಿಯನ್ನು ರೂಪಿಸಲಾಗುತ್ತಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಇದನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
ಮಲ್ಲೇಶ್ವರಂ ಮಾರುಕಟ್ಟೆ ನಿರ್ಮಾಣ ಎಲ್ಲಿಗೆ ಬಂತು?
ಮಲ್ಲೇಶ್ವರಂ ಮಾರುಕಟ್ಟೆಯನ್ನು ಬಹುಮಹಡಿ ಕಟ್ಟಡವಾಗಿ ನಿರ್ಮಾಣ ಮಾಡಲಾಗುತ್ತಿದೆ. ಬಿಡಿಎ ಕಾಮಗಾರಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. 300ಕ್ಕೂ ಅಧಿಕ ಅಂಗಡಿಗಳನ್ನು ನಿರ್ಮಿಸಲಾಗುತ್ತದೆ. ತರಕಾರಿ ಮಾರುವವರಿಗೆ, ಸಣ್ಣ-ಪುಟ್ಟ ವ್ಯಾಪಾರಸ್ಥರಿಗೆ ಅಲ್ಲಿ ಅವಕಾಶ ನೀಡಲಾಗುತ್ತಿದೆ. ಸುಮಾರು ಒಂದೂವರೆ ವರ್ಷಗಳಲ್ಲಿ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಾನು ಸಹ ಒತ್ತಾಯ ಮಾಡಿದ್ದೇನೆ.
ಮೈ ಮಲ್ಲೇಶ್ವರಂ ವೇದಿಕೆ ಹೇಗೆ ಕೆಲಸ ಮಾಡುತ್ತದೆ?
ಜನರ ಪಾಲ್ಗೊಳ್ಳವಿಕೆಗಾಗಿ ಮೈ ಮಲ್ಲೇಶ್ವರಂ ಎಂಬ ವೇದಿಕೆಯನ್ನು ಆರಂಭಿಸಲಾಗಿದೆ. ಜನರು ತಮ್ಮ ಚಿಂತನೆಯನ್ನು, ಸಮಸ್ಯೆಗೆ ಪರಿಹಾರವನ್ನು ಇಲ್ಲಿ ವ್ಯಕ್ತಪಡಿಸಲು ಮುಕ್ತ ಅವಕಾಶ ನೀಡಲಾಗಿದೆ. ಜನರ ಪಾಲ್ಗೊಳ್ಳುವಿಕೆ ಮೂಲಕ ಬದಲಾವಣೆ ತರುವುದು ನಮ್ಮ ಉದ್ದೇಶ. ಆದ್ದರಿಂದ, ಅವರ ಧ್ವನಿಯನ್ನು ಆಲಿಸಲು ವೇದಿಕೆ ನಿರ್ಮಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಬಳಕೆ ಹೇಗೆ?
'ಬಿಬಿಎಂಪಿ ಮಲ್ಲೇಶ್ವರಂ ಸಹಾಯ' ಎಂಬ ವ್ಯವಸ್ಥೆ ಜಾರಿಯಲ್ಲಿದೆ. ಜಿಎಎಸ್ ಮೂಲಕ ಇದು ಕಾರ್ಯ ನಿರ್ವಹಣೆ ಮಾಡಲಿದೆ. ದೂರು ಎಲ್ಲಿಂದ ಬಂದಿದೆ? ಎಂದು ಇದರಲ್ಲಿ ದಾಖಲಾಗುತ್ತದೆ. ದೂರಿನ ಸಂಖ್ಯೆಯೂ ಜನರಿಗೆ ವಾಪಸ್ ಹೋಗುತ್ತದೆ. ಎಲ್ಲಾ ದೂರು ದಾಖಲೆ ರೂಪದಲ್ಲಿ ಸಿಗುವುದರಿಂದ ಅಧಿಕಾರಿಗಳಿಗೆ ತಿಳಿಸಲು ಸಹಾಯವಾಗುತ್ತದೆ. ದೂರು ಪರಿಹಾರವಾದಾಗ ಅದರ ಬಗ್ಗೆ ಜನರಿಗೆ ವಾಪಸ್ ಮಾಹಿತಿ ನೀಡಲಾಗುತ್ತದೆ. ದೂರು ಪರಿಹಾರವಾಗದಿದ್ದಲ್ಲಿ ಏಕೆ ಕೆಲಸ ಆಗುತ್ತಿಲ್ಲ? ಎಂದು ಜನರಿಗೆ ತಿಳಿಸಲಾಗುತ್ತಿದೆ.
ನವ ಭಾರತಕ್ಕಾಗಿ ನವ ಕರ್ನಾಟಕ ಅಭಿಯಾನ ಹೇಗಿದೆ?
ಈ ಅಭಿಯಾನಕ್ಕೆ ಬಹಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಸಂತೋಷದಿಂದ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನರ ಸಲಹೆ, ಪರಿಹಾರವನ್ನು ಪಕ್ಷ ಕೇಳುತ್ತಿದೆ ಎಂಬುದಕ್ಕೆ ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಅನುಭವಿಗಳು ಇರುತ್ತಾರೆ. ಅವರು ಸಮಸ್ಯೆಗೆ ಪರಿಹಾರವನ್ನು ಸೂಚಿಸುತ್ತಿದ್ದಾರೆ.
ಕ್ಷೇತ್ರವಾರು ಸಮಸ್ಯೆಗಳನ್ನು ಇಲ್ಲಿ ಕ್ರೋಢಿಕರಣ ಮಾಡುವ ಕೆಲಸ ನಡೆಯುತ್ತಿದೆ. ಸಲಹೆಗಳನ್ನು ಸಂಬಂಧಪಟ್ಟ ಕ್ಷೇತ್ರದವರಿಗೆ ತಲುಪಿಸಲಾಗುತ್ತಿದೆ. ಇದನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಜನರಿಂದ ಕೇವಲ ಆನ್ಲೈನ್ ಮಾತ್ರವಲ್ಲ, ಆಫ್ ಲೈನ್ ಮೂಲಕವೂ ಸಲಹೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ.
ಹೊಸ ಮತದಾರರನ್ನು ಸೆಳೆಯಲು ಯೋಜನೆ ಏನು?
ಚುನಾವಣಾ ಆಯೋಗದಿಂದ ಕಂಪ್ಯೂಟರ್ ನೀಡಿದ್ದಾರೆ. ಪಕ್ಷದ ವತಿಯಿಂದ ಬ್ಲಾಕ್ ಲೆವಲ್ ಅಡೈಸರ್ ನೇಮಕ ಮಾಡಲು ಅವಕಾಶವಿದೆ. ಪ್ರತಿ ಬೂತ್ಗೆ ನೇಮಕ ಮಾಡಲಾಗಿದೆ. ಪ್ರತಿ ಮನೆಗೆ ಭೇಟಿ ನೀಡಿ, ಮೊದಲು ಮತಹಾಕುವವರಿಗೆ ಚುನಾವಣೆ, ಮತದಾನದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ.
ಮಲ್ಲೇಶ್ವರಂ ಕ್ಷೇತ್ರದ ಪ್ರಣಾಳಿಕೆಯಲ್ಲಿ ಏನಿರುತ್ತದೆ?
ನಮ್ಮ ಕ್ಷೇತ್ರದ ಜನರ ಸಲಹೆ ತೆಗೆದುಕೊಂಡು 2018ರ ಚುನಾವಣೆಗೆ ಪ್ರಣಾಳಿಕೆ ರಚನೆ ಮಾಡುತ್ತಿದ್ದೇವೆ. ಸಾಕಷ್ಟು ವಿಷಯಗಳಿವೆ. ತಂತ್ರಜ್ಞಾವನ್ನು ಹೇಗೆ ಆಡಳಿತಕ್ಕೆ ತರಬೇಕು? ಎಂಬ ಬಗ್ಗೆ ಜನರಿಂದ ಸಲಹೆ ತೆಗೆದುಕೊಳ್ಳುತ್ತಿದ್ದೇವೆ. ತಕ್ಷಣ ಬೀದಿ ದೀಪ ಆಫ್ ಆದರೆ ಮೊಬೈಲ್ ಮೂಲಕವೇ ದೂರು ನೀಡುವ ವ್ಯವಸ್ಥೆ ತರುವ ಬಗ್ಗೆಯೂ ಚಿಂತನೆ ಇದೆ. ಕ್ಷೇತ್ರದಲ್ಲಿ ಏನು ಮಾಡಬೇಕು? ಎಂಬ ಕನಸು ಜನರಿಗೆ ಇದೆ. ಆದ್ದರಿಂದ, ಅವರಿಂದ ಸಲಹೆಯನ್ನು ಪಡೆದುಕೊಳ್ಳುತ್ತಿದ್ದೇವೆ.
ಗಾಯತ್ರಿ ನಗರ, ಸುಬ್ರಮಣ್ಯ ನಗರದ ನೀರಿನ ಸಮಸ್ಯೆ?
ಹೊಸದಾಗಿ ನೆಟ್ವರ್ಕ್ ಸ್ಥಾಪನೆ ಮಾಡಲು ಮುಂದಾಗಿದ್ದೇವೆ. ಆದ್ದರಿಂದ ನೀರಿನ ಸಮಸ್ಯೆ ಉಂಟಾಗಿತ್ತು. ನೀರಿನ ಹಂಚಿಕೆ ವಿಧಾನವನ್ನು ಬದಲಾವಣೆ ಮಾಡಲು ಆರಂಭಿಸಿದೆವು. ಅದು ಜನರಿಗೆ ತಕ್ಷಣ ಅರ್ಥವಾಗಿಲ್ಲ. ಹೊಸ ವಿಧಾನದಿಂದ ನೀರು ವ್ಯರ್ಥವಾಗಿ ಪೋಲಾಗುವುದು ತಪ್ಪಿದೆ. ಅದನ್ನು ಸಹ ಜನರಿಗೆ ಹಂಚಿಕೆ ಮಾಡುತ್ತಿದ್ದೇವೆ. ಕೆಲವು ದಿನ ಮಾತ್ರ ಸಮಸ್ಯೆಯಾಗಿದೆ.
ಪಾರಂಪರಿಕ ಕಟ್ಟಡ ಉಳಿಸಿಕೊಳ್ಳಲು ವ್ಯವಸ್ಥೆ?
ನಮ್ಮ ಕ್ಷೇತ್ರದಲ್ಲಿ ಹೆಚ್ಚು ಪಾರಂಪರಿಕ ಕಟ್ಟಡಗಳಿಲ್ಲ. 13 ಕ್ರಾಸ್ನಲ್ಲಿ ಎಚ್.ವಿ.ನಂಜುಡಯ್ಯ ಅವರ ಮನೆ ಇದೆ. ವೇಮಾ ಲಾಡ್ಜ್ ಇದೆ. ಮಾಲೀಕರಿಗೆ ಕಟ್ಟಡ ಉಳಿಸಿಕೊಳ್ಳಲು ಸರ್ಕಾರ ಪ್ರೋತ್ಸಾಹ ನೀಡಬೇಕು. ಕೇವಲ ಇದನ್ನು ಉಳಿಸಿ ಎಂದು ಆದೇಶ ನೀಡಿದರೆ ಸಾಕಾಗುವುದಿಲ್ಲ. ಅದನ್ನು ಸಂರಕ್ಷಣೆ ಮಾಡಲು ಹಣದ ಅವಶ್ಯಕತೆ ಇರುತ್ತದೆ.
ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ?
ಗುಜರಾತ್, ಹಿಮಾಚಲ ಪ್ರದೇಶದ ಚುನಾವಣೆ ಫಲಿತಾಂಶ ಇಡೀ ದೇಶಕ್ಕ ಒಂದು ಸಂದೇಶ ಕಳಿಸಿದೆ. ಇನ್ನೇನು ಕರ್ನಾಟಕ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಮುಕ್ತವಾಗಲಿದೆ.ಕಾಂಗ್ರೆಸ್ ನವರ ಕೊನೆ ದಿನ ಬರುತ್ತಿದೆ. ದೇಶದ ಉದ್ದಲಗಲಕ್ಕೂ ಬಿಜೆಪಿಗೆ ಬೆಂಬಲ ಸಿಗುತ್ತಿದೆ. ನರೇಂದ್ರ ಮೋದಿ ಜೊತೆ ದೇಶವೇ ಹೋಗುತ್ತಿದೆ. ಕೇಂದ್ರ, ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ. ಅಭಿವೃದ್ಧಿಗೂ ಸಹಕಾರಿಯಾಗಲಿದೆ.
ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಏನು ಹೇಳುವಿರಿ?
ಸಿದ್ದರಾಮ್ಯ ಅವರಿಗೆ ಅಪಾರ ಅನುಭವವಿದೆ. ಆದರೆ, ನಾಲ್ಕು ವರ್ಷದ ಆಡಳಿತ ನೋಡಿದಾಗ ಏನೂ ಸಾಧನೆ ಕಾಣಲಿಲ್ಲ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಕ್ಷೇತ್ರಗಳಲ್ಲಿ ಸುಧಾರಣೆ ಕಂಡಿಲ್ಲ. ಕಾನೂನು ಸುವ್ಯವಸ್ಥೆ ಸರಿ ಇಲ್ಲ. ಭ್ರಷ್ಟಾಚಾರದಲ್ಲಿ ನಂಬರ್ 1, ಆಡಳಿತದ ಗುಣಮಟ್ಟ ಕುಸಿದಿದೆ. ಅಧಿಕಾರಿಗಳಲ್ಲಿ ಶಿಸ್ತಿಲ್ಲ. ಅವರೇ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಜಾತಿ, ಧರ್ಮದ ವಿರುದ್ಧ ಎಲ್ಲರೂ ಚುನಾವಣೆ ರಾಜಕೀಯವನ್ನು ಚುನಾವಣೆ ಬಂದಾಗ ಮಾಡುತ್ತಾರೆ. ಸಮಾಜವನ್ನು ಒಡೆದು, ಮತ ಬ್ಯಾಂಕ್ ರಾಜಕೀಯ ಮಾಡಿರುವುದಲ್ಲಿ ನಿರತರಾಗಿದ್ದಾರೆ. ಜನರ ವಿಶ್ವಾಸ ಕಳೆದುಕೊಂಡ ಬೇಜವಾಬ್ದಾರಿ ಸರ್ಕಾರವಿದು.
2018ರಲ್ಲಿ ಬಿಜೆಪಿಗೆ ಏಕೆ ಮತ ಹಾಕಬೇಕು?
ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿಯಿಂದ ಬೇರು ಮಟ್ಟದ ಸುಧಾರಣೆ ತರುತ್ತಿದ್ದಾರೆ. ಗುಣಮಟ್ಟದ ಆಡಳಿತ, ಜನರ ಸಲಹೆ, ಜನರ ಸಹಭಾಗಿತ್ವದ ಜೊತೆಗೆ ಜನರ ಶಕ್ತಿಯ ಅರಿವು ಸರ್ಕಾರಕ್ಕೆ ಇರಬೇರಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಒಂದೇ ಆಗಿ ರಾಜ್ಯ ಅಭಿವೃದ್ಧಿ ಆಗಲು ಜನರು ಪಕ್ಷವನ್ನು ಬೆಂಬಲಿಸಬೇಕು.
ಸಮೀಕ್ಷೆಗಳ ಬಗ್ಗೆ ಏನು ಹೇಳುವಿರಿ?
ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ಸಮೀಕ್ಷೆಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಇದು ಸರಿಯಾದ ಕಾಲವಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಬಿಜೆಪಿ ಹೆಚ್ಚು ಸ್ಥಾನಗಳಿಸಲಿದೆ ಎಂಬುದು ಎಲ್ಲರಿಗೂ ಗೊತ್ತು. ಅತಂತ್ರ ಫಲಿತಾಂಶ ಕೊಟ್ಟರೆ ಒಳ್ಳೆಯದಲ್ಲ ಎಂಬುದು ಜನರ ಭಾವನೆ. ಸ್ಥಿರ ಸರ್ಕಾರ ಬಂದೇ ಬರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ಆಗುತ್ತದೆ. ಸಿದ್ದರಾಮಯ್ಯ ಕರ್ನಾಟಕವನ್ನು 25 ವರ್ಷ ಹಿಂದೆ ತೆಗೆದುಕೊಂಡು ಹೋಗಿದ್ದಾರೆ. ಆದ್ದರಿಂದ, ನರೇಂದ್ರ ಮೋದಿ, ಯಡಿಯೂರಪ್ಪ ನಾಯಕತ್ವಕ್ಕೆ ಜನ ಬೆಂಬಲ ಸಿಗಲಿದೆ.