ರಾಷ್ಟ್ರಪಿತ ಯಾರು, ವೇದವ್ಯಾಸರೋ, ಗಾಂಧೀಜಿಯೋ? ಪೇಜಾವರ Vs ಬಂಜಗೆರೆ
ಭಾರತದ ರಾಷ್ಟ್ರಪಿತ ಯಾರು ಎಂದಾಗ ಎಲ್ಲರಿಂದ ಬರುವ ಉತ್ತರ ಮಹಾತ್ಮ ಗಾಂಧೀಜಿ. ಆದರೆ, ಉಡುಪಿ ಅಷ್ಟಮಠದ ಹಿರಿಯ ಯತಿ ಪೇಜಾವರ ಶ್ರೀಗಳ ಪ್ರಕಾರ, ಗಾಂಧೀಜಿ ರಾಷ್ಟ್ರಪಿತರಲ್ಲ, ಅವರು ರಾಷ್ಟ್ರಪುತ್ರ.
ಕಳೆದ ಶುಕ್ರವಾರ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಪೇಜಾವರ ಶ್ರೀಗಳು, ನನಗೆ ಗಾಂಧೀಜಿ ಬಗ್ಗೆ ತುಂಬಾ ಗೌರವವಿದೆ. ಆದರೆ, ಈ ದೇಶ ಗಾಂಧೀಜಿಯವರಿಂದ ಆರಂಭವಾದುದಲ್ಲ. ವೇದವ್ಯಾಸರಿಂದ ನಮ್ಮ ಸಂಸ್ಕೃತಿ, ಪರಂಪರೆ ಜಾಗೃತವಾಗಿರುವುದು. ಹಾಗಾಗಿ, ವೇದವ್ಯಾಸರು ಈ ರಾಷ್ಟ್ರಪಿತ, ಗಾಂಧೀಜಿ ರಾಷ್ಟ್ರಪುತ್ರ ಎನ್ನುವ ಹೇಳಿಕೆಯನ್ನು ನೀಡಿದ್ದರು.
ಪೇಜಾವರ ಶ್ರೀಗಳ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಾಹಿತಿ ಬಂಜಗೆರೆ ಜಯಪ್ರಕಾಶ್, ಸ್ವತಂತ್ರ ಭಾರತದ ರಾಷ್ಟ್ರಪಿತ ಗಾಂಧೀಜಿಯೇ ಹೊರತು ವೇದವ್ಯಾಸರು ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸ್ವತಂತ್ರ ಬರುವ ಮೊದಲು ನಮ್ಮ ದೇಶ ಸಾರ್ವಭೌಮತ್ವವನ್ನು ಹೊಂದಿರಲಿಲ್ಲ. ಪೇಜಾವರ ಶ್ರೀಗಳ ಬಗ್ಗೆ ನನಗೆ ಅಪಾರ ಗೌರವವಿದೆ, ಆದರೆ ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಂಜಗೆರೆ ಹೇಳಿದ್ದಾರೆ.
ನಾಥೂರಾಂ ಗೋಡ್ಸೆಯನ್ನು ರಾಷ್ಟ್ರಭಕ್ತ ಎಂದವರ ಬಗ್ಗೆ ನನಗೆ ತೀವ್ರ ಅಸಮಾಧಾನವಿದೆ. ಇದು ನಮ್ಮ ದೇಶಕ್ಕೆ ಮಾಡಿದ ಅವಮಾನ. ಮಹಾತ್ಮ ಗಾಂಧಿ ರಾಷ್ಟ್ರಭಕ್ತರು, ರಾಷ್ಟ್ರಪುತ್ರರು, ವೇದವ್ಯಾಸರು ರಾಷ್ಟ್ರಪಿತ ಎನ್ನುವ ಹೇಳಿಕೆಯನ್ನು ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಗಳು ಹೇಳಿದ್ದರು.
ಐದು ಸಾವಿರ ವರ್ಷಗಳ ಇತಿಹಾಸವನ್ನು ನಮ್ಮ ದೇಶ ಹೊಂದಿದೆ. ವೇದವ್ಯಾಸರು ಮಹಾಭಾರತ ಬರೆದವರು, ಅವರನ್ನು ಈ ದೇಶದ ಮಹಾನ್ 'ಕಾವ್ಯ ಪಿತಾಮಹ' ಎಂದು ಕರೆಯಿರಿ. ಆದರೆ, ಅವರನ್ನು ರಾಷ್ಟ್ರಪಿತ ಎಂದು ಕರೆಯುವುದು ಸಮಂಜಸವಲ್ಲ ಎಂದು ಬಂಜಗೆರೆ ಜಯಪ್ರಕಾಶ್ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.












Click it and Unblock the Notifications